50 ವರ್ಷಗಳಲ್ಲಿ ಮಾಡದ ಅಭಿವೃದ್ಧಿಯನ್ನು 5 ವರ್ಷಗಳಲ್ಲಿ ಮಾಡುತ್ತೇವೆ- ಸಚಿವ ಅಶ್ವತ್ಥ್ ನಾರಾಯಣ್
ನಾವು ಕಣ್ಣೀರು ಹಾಕಲ್ಲ, ಕಥೆಯನ್ನೂ ಹೇಳಲ್ಲ. ಕೆಲಸ ಮಾಡಿ ತೋರಿಸುತ್ತೇವೆ. ಕಳೆದ ಬಾರಿ ಜೆಡಿಎಸ್ಗೆ ಕೊಟ್ಟಂತೆ ನಮಗೂ ಒಂದು ಅವಕಾಶ ಕೊಟ್ಟು ನೋಡಿ. ಆಮೇಲೆ ಕೆಲಸ ಮಾಡದಿದ್ದರೆ ನನ್ನ ಹೆಸರನ್ನು ಬದಲಿಸಿಕೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್
ಮಂಡ್ಯ, ಫೆಬ್ರವರಿ 14: 50 ವರ್ಷಗಳಲ್ಲಿ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಕೇವಲ ಐದೇ ವರ್ಷಗಳಲ್ಲಿ ಮಾಡದಿದ್ದರೆ ನನ್ನ ಹೆಸರನ್ನೇ ಬದಲಾಯಿಸಿಕೊಳ್ಳುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಸವಾಲು ಹಾಕಿದ್ದಾರೆ.
ಬಿಜೆಪಿ ವತಿಯಿಂದ ತಾಲೂಕಿನ ಕಂಬದ ನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಕಸಬಾ ಮಹಾಶಕ್ತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಮಹಾರಾಜರ ಕಾಲದಲ್ಲಿ ಉತ್ತಮ ಆಡಳಿತ ನೀಡಿ ಅಭಿವೃದ್ಧಿ ಕೆಲಸ ಮಾಡಿದ್ದರು. ಅವರ ಕೊಡುಗೆಗಳು ವಿಶ್ವವೇ ಎದುರು ನೋಡುವಂತಹ ಆಡಳಿತ ಕೊಟ್ಟಿದ್ದರು. ಅಂತಹ ಸಾಧನೆಯನ್ನು ಯಾರೂ ಮಾಡಲಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಹರಿಹಾಯ್ದರು.
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ರಾಮನಗರ ಹೇಗೆ ಅಭಿವೃದ್ಧಿ ಹೊಂದಿದೆ, ಕೈಗಾರಿಕೆ, ಕೃಷಿ, ಕೌಶಲ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ನಾನು ಮಂತ್ರಿಯಾಗಿ ಕೇವಲ ಮೂರೇ ವರ್ಷದ ಅನುಭವವಿದೆ. ನಿಮಗಿರುವಂತೆ ಹಲವಾರು ವರ್ಷಗಳ ರಾಜಕೀಯ ಅನುಭವ ನನಗಿಲ್ಲದಿದ್ದರೂ, ಯಾವ ರೀತಿ ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದೆ ಎಂಬುದನ್ನು ನೋಡಬಹುದಾಗಿದೆ. ಇಂತಹ ಅಭಿವೃದ್ಧಿ ಮಂಡ್ಯದಲ್ಲೂ ಆಗಬೇಕಿದೆ ಎಂದರು.

ನಾವು ಕಣ್ಣೀರು ಹಾಕಲ್ಲ, ಕಥೆಯನ್ನೂ ಹೇಳಲ್ಲ. ಕೆಲಸ ಮಾಡಿ ತೋರಿಸುತ್ತೇವೆ. ಕಳೆದ ಬಾರಿ ಜೆಡಿಎಸ್ಗೆ ಕೊಟ್ಟಂತೆ ನಮಗೂ ಒಂದು ಅವಕಾಶ ಕೊಟ್ಟು ನೋಡಿ. ಆಮೇಲೆ ಕೆಲಸ ಮಾಡದಿದ್ದರೆ ನನ್ನ ಹೆಸರನ್ನು ಬದಲಿಸಿಕೊಳ್ಳುತ್ತೇವೆ. ನಮ್ಮನೆ ಹುಡುಗ ಎಂದು ಜಿಲ್ಲೆಯ ಜನತೆ ಆಶೀರ್ವಾದ ಮಾಡಿದರು. ಆದರೆ ಅವರಿಗೇನು ಕೊಟ್ಟಿರಿ, ನಮ್ಮ ಮನೆಯ ಸೊಸೆ, ಮೊಮ್ಮಗ, ಮಗ ಎಂದು ಕುಟುಂಬದವರೇ ರಾಜಕೀಯವಾಗಿ ಬರಬೇಕೇ..? ನಮ್ಮಲ್ಲಿ ಸೋನಿಯಾಗಾಂಧಿ ಕುಟುಂಬವೂ ಇಲ್ಲ, ದೇವೇಗೌಡರ ಕುಟುಂಬವೂ ಇಲ್ಲ. ಇದು ಜನರ ಆಶೋತ್ತರಗಳನ್ನು ಈಡೇರಿಸುವ ಪಕ್ಷ. ಇಂತಹ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಸಮೃದ್ಧಿ ಮತ್ತು ಪ್ರಗತಿಯ ಸಂಕೇತವಾಗಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿದ್ದೇವೆ. ಅದರಂತೆ ನಡೆಯುತ್ತೇವೆ ಕೂಡ. ಜಾತಿ ಆಧಾರಿತವಾಗಿ ರಾಜಕೀಯ ಮಾಡಲ್ಲ. ಜನಪರ ಕಾರ್ಯಕ್ರಮಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ಒಂದು ಬಾರಿ ನಮಗೆ ಅವಕಾಶ ನೀಡಿ. ನಿಮ್ಮ ಮಕ್ಕಳು ನಿಮ್ಮ ಕಣ್ಣ ಮುಂದೆಯೇ ಕೆಲಸ ಮಾಡಿಕೊಂಡು ಇರುವಂತಹ ವಾತಾವರಣ ಸೃಷ್ಟಿಸುತ್ತೇವೆ. ಕೃಷಿಯನ್ನು ಬಿಟ್ಟು ಕುಟುಂಬವನ್ನೂ ತೊರೆದು ದೂರದೂರಿಗೆ ಕೆಲಸ ಅರಸಿ ಹೋಗುವುದನ್ನು ತಪ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಮಾತನಾಡಿ, ತಳಮಟ್ಟದಿಂದ ಪಕ್ಷವನ್ನು ಬಲಿಷ್ಠಗೊಳಿಸುವ ಕೆಲಸವನ್ನು ಜಿಲ್ಲೆಯಲ್ಲಿ ಮಾಡುತ್ತಿದ್ದೇವೆ. ಇದಕ್ಕೆ ಯುವಜನರು ಸಾಥ್ ನೀಡಿದ್ದಾರೆ. ಕೇವಲ ನಾಲ್ಕೇ ದಿನದಲ್ಲಿ ನಿರ್ಮಲ್ ಕುಮಾರ್ ಸುರಾಣ ನೇತೃತ್ವದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸೇರಿಸಿ ಕೇಂದ್ರ ಗೃಹ ಸಚಿವರ ಕಾರ್ಯಕ್ರಮವನ್ನು ನಡೆಸುವ ಮೂಲಕ ಜಿಲ್ಲೆಯಲ್ಲಿ ಭರವಸೆ ಮೂಡಿಸಿದ್ದೇವೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಪಕ್ಷ ಬಲಿಷ್ಠವಾಗಿ ಕಟ್ಟುತ್ತೇವೆ. ತಳಮಟ್ಟದಿಂದ ಸಂಘಟನೆ ಮಾಡುತ್ತಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಏಳೂ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮುಖಂಡರಾದ ಅಶೋಕ್ ಜಯರಾಂ, ಡಾ. ಸಿದ್ದರಾಮಯ್ಯ, ವಿದ್ಯಾ ನಾಗೇಂದ್ರ, ಡಾ. ಇಂದ್ರೇಶ್, ಎಸ್.ಪಿ. ಸ್ವಾಮಿ, ಭೀಮೇಶ್, ಸುಜಾತ ರಮೇಶ್ ಇತರರು ಭಾಗಿಯಾಗಿದ್ದರು.











Click it and Unblock the Notifications