ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದ ಮಂಡ್ಯದ ನೂತನ ಶಾಸಕರು: ಶ್ರೀಗಳಿಂದ ಶಿಸ್ತಿನ ಪಾಠ
ಮಂಡ್ಯ, 14: ಜಿಲ್ಲೆಯಲ್ಲಿ ನೂತನವಾಗಿ ಗೆಲುವು ಸಾಧಿಸಿರುವ ಎನ್.ಚಲುವರಾಯಸ್ವಾಮಿ ಸೇರಿದಂತೆ ಐದು ಕ್ಷೇತ್ರಗಳ ನೂತನ ಶಾಸಕರು ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭಾನುವಾರ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಕ್ಷೇತ್ರಾಧಿದೇವತೆಗಳು ಹಾಗೂ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದುಕೊಂಡು ತೆರಳಿದರು.
ಕ್ಷೇತ್ರದ ಶ್ರೀ ಕಾಲಭೈರವೇಶ್ವರಸ್ವಾಮಿ, ಮಾಳಮ್ಮದೇವಿ, ಆದಿಶಕ್ತಿ ಸ್ಥಂಬಾಬಿಕ, ಮಹಾಗಣಪತಿ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಎಲ್ಲ ದೇವತೆಗಳಿಗೆ ಪೂಜೆ ಸಲ್ಲಿಸಿದ ಐದು ಮಂದಿ ನೂತನ ಶಾಸಕರು ಕ್ಷೇತ್ರದಲ್ಲಿರುವ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳ ಮಹಾಸಮಾಧಿಗೂ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ಬಳಿಕ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರೊಂದಿಗೆ ನೂತನ ಶಾಸಕರಾದ ಎನ್.ಚಲುವರಾಯಸ್ವಾಮಿ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ಗಣಿಗ, ದರ್ಶನ್ಪುಟ್ಟಣ್ಣಯ್ಯ ಮತ್ತು ರಮೇಶ್ಬಾಬು ಬಂಡಿಸಿದ್ದೇಗೌಡ ಕೆಲಹೊತ್ತು ಸಮಾಲೋಚನೆ ನಡೆಸಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಶೀರ್ವಾದ ಪಡೆಯಲು ಬಂದಿದ್ದ ಎಲ್ಲ ಶಾಸಕರಿಗೆ ಶ್ರೀಮಠದ ಸಂಪ್ರದಾಯದಂತೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳು ಶಾಲು ಹೊದಿಸಿ, ಹಾರ ಹಾಕಿ ಆಶೀರ್ವದಿಸಿದರು. ಬಳಿಕ ಶ್ರೀಮಠದಲ್ಲಿಯೇ ಎಲ್ಲಾ ಶಾಸಕರು ಪ್ರಸಾದ ಸೇವಿಸಿ ತೆರಳಿದರು. ಮದ್ದೂರು ಕ್ಷೇತ್ರದ ನೂತನ ಶಾಸಕ ಉದಯ್ ಆರೋಗ್ಯ ಸಮಸ್ಯೆ ಹಿನ್ನಲೆಯಲ್ಲಿ ಶ್ರೀಮಠಕ್ಕೆ ಆಗಮಿಸಿರಲಿಲ್ಲ.
ವಿಧಾನಪರಿಷತ್ ಸದಸ್ಯರಾದ ದಿನೇಶ್ಗೂಳೀಗೌಡ, ಮಧು ಜಿ.ಮಾದೇಗೌಡ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಪ್ರಚಾರ ಸಮಿತಿ ಅಧ್ಯಕ್ಷ ಡಾ.ಕೃಷ್ಣ, ರಘುವೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಬಿ.ರಾಜೇಗೌಡ ಸೇರಿದಂತೆ ಹಲವರಿದ್ದರು.

ಚುಂಚಶ್ರೀಗಳಿಂದ ನೂತನ ಶಾಸಕರಿಗೆ ಶಿಸ್ತಿನ ಪಾಠ
ಐದು ಶಾಸಕರು ಎಲ್ಲರೂ ಒಟ್ಟಿಗೆ ಸೇರಿ ನಿರ್ಮಲಾನಂದನಾಥಶ್ರೀಗಳೊಂದಿಗೆ ಕೆಲಕಾಲ ಗೌಪ್ಯ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಮಂಡ್ಯ ಶಾಸಕ ರವಿಕುಮಾರ್ ಶರ್ಟ್ನ ಬಟನ್ ಹಾಕದ್ದನ್ನು ಗಮನಿಸಿದ ಶ್ರೀಗಳು, ನೀವೀಗ ಶಾಸಕ, ಹೀಗೆಲ್ಲಾ ಓಡಾಡಬಾರದು, ಮೊದಲು ಶರ್ಟ್ನ ಬಟನ್ ಹಾಕುವಂತೆ ಶಿಸ್ತಿನ ಪಾಠ ಹೇಳಿದ ತಕ್ಷಣ ರವಿಕುಮಾರ್ ತಮ್ಮ ಶರ್ಟ್ನ ಬಟನ್ ಹಾಕಿಕೊಂಡಿದ್ದಾರೆ.












Click it and Unblock the Notifications