ರಮ್ಯಾಗೆ ಚಾನ್ಸ್ ಕೊಡಿ, ಇಲ್ಲದಿದ್ದರೆ ನನಗಾದರೂ ಬಿಡಿ: ಸ್ಪರ್ಧೆಗೆ ರಂಜಿತಾ ಸಿದ್ಧ
ಮಂಡ್ಯ, ಅಕ್ಟೋಬರ್ 12: ಮಂಡ್ಯ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಲು ರಮ್ಯಾಗೆ ಅವಕಾಶ ನೀಡುವಂತೆ ಅವರ ತಾಯಿ ರಂಜಿತಾ ಕಾಂಗ್ರೆಸ್ ಮುಖಂಡರಿಗೆ ಮನವಿ ಸಲ್ಲಿಸಿದ್ದಾರೆ.
ಅತ್ತ ಸ್ವತಃ ಸ್ಪರ್ಧೆಗೆ ಇಳಿಯಲೂ ಅವರು ತಯಾರಿ ಮಾಡಿದ್ದಾರೆ. ರಮ್ಯಾ ಮತ್ತು ರಂಜಿತಾ ಹೆಸರಿನಲ್ಲಿ ಅಫಿಡವಿಟ್ ಸಿದ್ಧಗೊಳಿಸುವ ಕೆಲಸ ನಡೆಯುತ್ತಿದೆ. ಅಫಿಡವಿಟ್ ಅಣಿಗೊಳಿಸಲು ರಂಜಿತಾ ವಕೀಲರನ್ನು ಭೇಟಿ ಮಾಡಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ಗೆ ಐದು ಲಕ್ಷ ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ರಮ್ಯಾ ಕೆಲವೇ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಉಪ ಚುನಾವಣೆಗೆ ಜೆಡಿಎಸ್ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ತೊಂದರೆಯಾಗಲಿದೆ ಎಂದು ರಂಜಿತಾ ಹೇಳಿದ್ದಾರೆ.
'ಮಂಡ್ಯದ ವಿಧಾನಸಭಾ ಕ್ಷೇತ್ರ ಚುನಾವಣೆ, ಲೋಕಸಭಾ ಚುನಾವಣೆ ಇರಲಿ ಸ್ಪರ್ಧಿಸುವ ಅವಕಾಶ ಸಿಕ್ಕರೆ ನಾನು ಸ್ಪರ್ಧಿಸುತ್ತಿದ್ದೆ. ರಮ್ಯಾ ಅವರು ದೆಹಲಿ ರಾಜಕೀಯದಲ್ಲಿ ನಿರತರಾಗಿದ್ದಾರೆ. ರಮ್ಯಾ ಬದಲಿಗೆ ನೀವೇ ಸ್ಪರ್ಧಿಸಿ ಎಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ' ಎಂದು ರಂಜಿತಾ ಈ ಹಿಂದೆ ಹೇಳಿದ್ದರು.

ರಮ್ಯಾ ಅಥವಾ ನಾನು...
ಉಪಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೆ ಅದಕ್ಕೆ ಇನ್ನೂ ಲಾಭವಾಗಲಿದೆ. ಇದರಿಂದ ಪಕ್ಷ ಸಂಘಟನೆಗೆ ತೀವ್ರ ಹೊಡೆತ ಬೀಳಲಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಬೇಕು. ಇದಕ್ಕಾಗಿ ರಮ್ಯಾಗೆ ಟಿಕೆಟ್ ನೀಡಿ. ಇಲ್ಲದಿದ್ದರೆ ನನಗೇ ನೀಡಿ ಎಂದು ರಂಜಿತಾ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ತಮಗೆ ಟಿಕೆಟ್ ನೀಡಲು ಪಕ್ಷದ ನಾಯಕರು ಮುಂದಾದರೆ ನಾಮಪತ್ರ ಸಲ್ಲಿಕೆಗೆ ಸುಲಭವಾಗಲಿ ಎಂದು ಮೊದಲೇ ಅಫಿಡವಿಟ್ ಸಿದ್ಧಪಡಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.

ಬಿಜೆಪಿಯಲ್ಲಿ ಅಸಮಾಧಾನ
ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಡಾ. ಸಿದ್ದರಾಮಯ್ಯ ಅವರನ್ನು ಅವರನ್ನು ಆಯ್ಕೆ ಮಾಡಿರುವುದು ಮಂಡ್ಯದ ಸ್ಥಳೀಯ ಬಿಜೆಪಿ ಮುಖಂಡರಲ್ಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿಯ ಮಾಜಿ ಶಾಸಕ ದೊಡ್ಡಬೋರೇಗೌಡ ಅವರ ಮಗನಾದ ಸಿದ್ದರಾಮಯ್ಯ, ಹೆಚ್ಚುವರಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಕೆಲಸ ಮಾಡಿ ಜುಲೈನಲ್ಲಿ ನಿವೃತ್ತಿ ಹೊಂದಿದ್ದರು. ಗುರುವಾರ ಅವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆಯೇ ಅವರನ್ನು ಲೋಕಸಭೆಯ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಕಾರ್ಯಕರ್ತರಲ್ಲಿ ತೀವ್ರ ಆಕ್ಷೇಪಕ್ಕೆ ಎಡೆಮಾಡಿಕೊಟ್ಟಿದೆ.

ಲಕ್ಷ್ಮಿ ಅಶ್ವಿನ್ ಗೌಡ ಹೆಸರು ಅಂತಿಮ?
ಮಂಡ್ಯದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜೆಡಿಎಸ್ ಮುಖಂಡರ ಜತೆ ತಡರಾತ್ರಿವರೆಗೂ ಚರ್ಚೆ ನಡೆದಿದೆ. ಐಆರ್ಎಸ್ ಮಾಜಿ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದೆ ಎನ್ನಲಾಗಿದೆ. ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ 20 ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ತಮ್ಮನ್ನು ಪರಿಗಣಿಸಬೇಕು ಎಂದು ಮುಖಂಡ ನೆಲ್ಲಿಗೆರೆ ಬಾಬು ಕೂಡ ನಾಯಕರ ಬಳಿ ಮನವಿ ಸಲ್ಲಿಸಿದ್ದಾರೆ.

'ಹೀಯಾಳಿಸುವ ಚಟ ಬಿಡಿ'
ಎನ್. ಚಲುವರಾಯಸ್ವಾಮಿ ವಿರುದ್ಧ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸುವಂತೆ ಸಚಿವ ಸಿ.ಎಸ್. ಪುಟ್ಟರಾಜು ಅವರಿಗೆ ಮಾಜಿ ಶಾಸಕ ಎಚ್.ಬಿ. ರಾಮು ತಾಕೀತು ಮಾಡಿದ್ದಾರೆ.
ಸತ್ತ ಕುದುರೆ ಎಂಬ ಪದ ರಾಜ್ಯದ ಎಲ್ಲ ಸೋತ ನಾಯಕರಿಗೂ ಅನ್ವಯಿಸುತ್ತದೆ. ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತವರನ್ನು ಹೀಯಾಳಿಸುವ ಕೆಟ್ಟ ಚಾಳಿ ಬಿಡಬೇಕು. 1999ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ನೀವು ಸೋತಿದ್ದಿರಿ. ಆಗ ಚಲುವರಾಯಸ್ವಾಮಿ ನಿಮ್ಮ ನೆರವಿಗೆ ಬಂದಿದ್ದರು. ಆ ಸಹಾಯವನ್ನು ಮರೆತು ಹಗುರವಾಗಿ ಮಾತನಾಡಬೇಡಿ ಎಂದು ಸಲಹೆ ನೀಡಿದರು.












Click it and Unblock the Notifications