ಕಾಲ ಮಿಂಚಿಲ್ಲ ರಾಧಾಕೃಷ್ಣಗೆ ಟಿಕೆಟ್ ನೀಡಿ, ಇಲ್ಲದಿದ್ದರೆ ಕಾಂಗ್ರೆಸ್ ಧೂಳಿಪಟ:ವರಿಷ್ಠರಿಗೆ ಬೆಂಬಲಿಗರ ಸಂದೇಶ
ಮಂಡ್ಯ, ಏಪ್ರಿಲ್ 7: ಇನ್ನೂ ಕಾಲ ಮಿಂಚಿಲ್ಲ. ಟಿಕೆಟ್ ಬದಲಾವಣೆಗೆ ಅವಕಾಶವಿದೆ. ಕೀಲಾರ ರಾಧಾಕೃಷ್ಣ ಅವರಿಗೆ ಟಿಕೆಟ್ ನೀಡುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕೆ.ಕೆ. ರಾಧಾಕೃಷ್ಣ ಅಭಿಮಾನಿಗಳು ಹಾಗೂ ಬೆಂಬಲಿಗರು ಕಾಂಗ್ರೆಸ್ ವರಿಷ್ಠರಿಗೆ ಸಂದೇಶ ರವಾನಿಸಿದರು.
ನಗರದ ಬಂದೀಗೌಡ ಬಡಾವಣೆ ನಿವಾಸದಲ್ಲಿ ಅಭಿಮಾನಿಗಳು ಹಾಗೂ ಬೆಂಬಲಿಗರು ಸಭೆ ನಡೆಸಿ, ಗೆಲ್ಲುವ ಕುದುರೆಗೆ ಟಿಕೆಟ್ ಕೈ ತಪ್ಪಿಸಿ, ಬೇರೊಂದು ಪಕ್ಷಕ್ಕೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸೋಲುವ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್, ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದ ಕೀಲಾರ ರಾಧಾಕೃಷ್ಣ ಅವರ ಹೆಸರು ಘೋಷಿಸದೆ ಅವರಿಗೆ ಅನ್ಯಾಯ ಮಾಡಿದೆ. ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಟಿಕೆಟ್ ಬದಲಾಯಿಸಿ ರಾಧಾಕೃಷ್ಣ ಅವರಿಗೆ ನೀಡದಿದ್ದರೆ, ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಡ್ಯಾಮೇಜ್ ಆಗಲಿದೆ.ಕೀಲಾರ ರಾಧಕೃಷ್ಣ ಅವರಿಗೆ ಜೆಡಿಎಸ್ನಲ್ಲೂ ಇದೇ ರೀತಿ ಟಿಕೆಟ್ ನೀಡದೆ ಅನ್ಯಾಯ ಮಾಡಿದರು. ಈಗ ಕಾಂಗ್ರೆಸ್ನಲ್ಲೂ ಅನ್ಯಾಯವಾಗಿದೆ ಎಂದು ಬೆಂಬಲಿಗರು ಬೇಸರ ವ್ಯಕ್ತಪಡಿಸಿದರು.
ಕೊರೊನಾ ಸಂದರ್ಭದಲ್ಲಿ ಆಹಾರ ಕಿಟ್, ಔಷಧ ಕಿಟ್ಗಳನ್ನು ನೀಡುವುದರ ಜೊತೆಗೆ ಸಾಮಾಜಿಕ ಚಟುವಟಿಗಳ ಮೂಲಕ ಜನರ ನೆರವಿಗೆ ಧಾವಿಸಿದ್ದರು. ಜನಸೇವೆ ಮಾಡುವ ದೃಷ್ಟಿಯಿಂದ ಕೀಲಾರ ರಾಧಾಕೃಷ್ಣ ರಾಜಕೀಯ ಪ್ರವೇಶಿಸಿದರು. ಕೆ.ಕೆ. ರಾಧಾಕೃಷ್ಣ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದರು.
ವರಿಷ್ಠರನ್ನು ಭೇಟಿ ಮಾಡಿ ಮುಂದಿನ ನಿರ್ಧಾರ: ಕೆ.ಕೆ. ರಾಧಾಕೃಷ್ಣ
ನನ್ನನ್ನೇ ನಂಬಿರುವ ನಗರಸಭೆ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿನಿಗಳ ಹಿತದೃಷ್ಟಿಯಿಂದ ಇಲ್ಲಿ ನಡೆದ ವಿದ್ಯಾಮಾನಗಳ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ಬಳಿಕ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಕೀಲಾರ ರಾಧಾಕೃಷ್ಣ ತಿಳಿಸಿದರು.

ನಾನು ಯಾವುದೇ ಷರತ್ತು ವಿಧಿಸಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿರಲಿಲ್ಲ. ಕಳೆದ 7 ವರ್ಷಗಳಿಂದ ಕ್ಷೇತ್ರದಲ್ಲಿ ನನ್ನ ಶಕ್ತಿ ಮೀರಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ವಲಸಿಗರು ಎಂಬ ಕಾರಣಕ್ಕೆ ಟಿಕೆಟ್ ಕೈ ತಪ್ಪಿತೆ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾವು ಮೂಲತಃ ಕಾಂಗ್ರೆಸ್ನವರು ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಜೆಡಿಎಸ್ ಸೇರಬೇಕಾಯಿತು. ಬಳಿಕ 2020 ರಿಂದ ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ನಮ್ಮ ತಂದೆ ಕೆಂಪೇಗೌಡ ಮೂಲತಃ ಕಾಂಗ್ರೆಸ್ನವರು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಜೆಡಿಎಸ್ ನಡೆಯಿಂದ ಬೇಸತ್ತು ಕಾಂಗ್ರೆಸ್ ಸೇರಿದೆ. ಟಿಕೆಟ್ ಸಿಗುವ ಆಶ್ವಾಸನೆ ಇತ್ತು. ಕಡೇ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿದೆ. ಕೊರೊನಾ ಸಂದರ್ಭದಲ್ಲಿ ಜನರ ಸೇವೆ ಮಾಡಬೇಕೆಂದು ಸ್ವ ಇಚ್ಛೆಯಿಂದ ಕೆಲಸ ಮಾಡಿದ್ದೇನೆ. ಈಗಲೂ ನಾನು ಕ್ಷೇತ್ರದಲ್ಲಿಯೇ ಇದ್ದುಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆಯೇ ವಿನಃ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದರು.
ಅಭಿಮಾನಿಗಳ ಭಾವನೆಗೆ ಬೆಲೆ ಕೊಡಬೇಕಾಗುತ್ತದೆ. ನನಗೆ ನೀವು ತೋರಿರುವ ಅಭಿಮಾನಕ್ಕೆ ಸದಾ ಚಿರಋಣಿಯಾಗಿರುತ್ತೇನೆ. ನೀವು ತೋರಿರುವ ಅಭಿಮಾನವನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ನಾಯಕರ ಗಮನಕ್ಕೆ ತರುತ್ತೇನೆ. ಟಿಕೆಟ್ ಕೊಟ್ಟರೆ ಗೆದ್ದು ಬರುವ ವಿಶ್ವಾಸವಿದೆ ನನಗೆ ಅನ್ಯಾಯವಾಗಿದೆ. ಮಂಡ್ಯ ಕ್ಷೇತ್ರದ ಟಿಕೆಟ್ನ್ನು ಮರುಪರಿಶೀಲನೆ ಮಾಡಿ ನನಗೂ ಒಂದು ಅವಕಾಶ ಕೊಡುವಂತೆ ಮನವಿ ಮಾಡುತ್ತೇನೆ. ಅವಕಾಶ ಮಾಡಿಕೊಡದಿದ್ದರೆ ಕ್ಷೇತ್ರದಾದ್ಯಂತ ಪ್ರವಾಸಿ ಮಾಡಿ ಮುಂದಿನ ನಡೆ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು.
ಕೀಲಾರ ರಾಧಾಕೃಷ್ಣ ಅವರಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಹಿತೈಷಿಗಳು ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ನ್ನು ಕೀಲಾರ ರಾಧಾಕೃಷ್ಣ ಅವರಿಗೆ ನೀಡಬೇಕೆಂದು ಪಟ್ಟು ಹಿಡಿದು ಕುಳಿತರು.
ಬದಲಾಯಿಸಿ ಬದಲಾಯಿಸಿ ಮಂಡ್ಯ ಕ್ಷೇತ್ರದ ಟಿಕೆಟ್ ಬದಲಾಯಿಸಿ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಕಾಂಗ್ರೆಸ್ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್: ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications