ಅಶ್ವತ್ಥ್ ನಾರಾಯಣ್ ರಾಜ್ಯದ ಜನತೆಯ ಮುಂದೆ ಕ್ಷಮೆಯಾಚಿಸಬೇಕು-ಕಾಂಗ್ರೆಸ್ ಮುಖಂಡರ ಆಗ್ರಹ
ವಿಪಕ್ಷ ನಾಯಕ ಹಾಗೂ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತನ್ನಂತೆ ಮೇಲಕ್ಕೆ ಕಳುಹಿಸಿ ಎಂದು ಆಡಿರುವ ಮಾತುಗಳು ಅವರ ಗೋಡ್ಸೆ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ
ಮಂಡ್ಯ, ಫೆಬ್ರವರಿ 16: ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿರುವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ಶಿಕ್ಷಣ ಪಡೆಯದ ಒಬ್ಬ ಅನಾಗರಿಕ ಸಚಿವರಾಗಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಟೀಕಿಸಿದರು.
ಜಿಲ್ಲೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಪಕ್ಷ ನಾಯಕ ಹಾಗೂ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತನ್ನಂತೆ ಮೇಲಕ್ಕೆ ಕಳುಹಿಸಿ ಎಂದು ಆಡಿರುವ ಮಾತುಗಳು ಅವರ ಗೋಡ್ಸೆ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ರಾಜ್ಯದ ಮಹಾಜನತೆಯ ಮುಂದೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿಯನ್ನು ಮರೆತು ಭ್ರಷ್ಟಾಚಾರದಲ್ಲಿ ಮುಳುಗಿರುವ ಸಚಿವರು ತಮ್ಮ ಲೋಪವನ್ನು ಮುಚ್ಚಿಕೊಳ್ಳಲು ಈ ರೀತಿಯ ಹಿಂಸಾತ್ಮಕ ಹೇಳಿಕೆಗಳನ್ನು ಕೊಡುವುದರ ಮೂಲ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿರುವುದು ಫಲಿಸುವುದಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆ ಬೆಳೆಯಲಾಗುತ್ತಿದ್ದು, ಇದನ್ನು ಯಾರು ತಂದರು ಎನ್ನುವುದನ್ನು ಇತಿಹಾಸ ಓದಿ ತಿಳಿಯಿರಿ. ಕಾರ್ಯಕರ್ತರನ್ನು ಹುರಿದುಂಬಿದಲು ಪ್ರಚೋದನಾಕಾರಿ ಹೇಳಿಕೆ ನೀಡಲಾಗುತ್ತಿದ್ದು, ಕೂಡಲೇ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ನಾವು ಮುಂದಿನ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಅವರನ್ನು ಹೊಡೆಯುವುದು ಬೇಡ, ಅವರನ್ನು ಮೊದಲು ಮುಟ್ಟಿ ನೋಡಲಿ ಎಂದು ಸವಾಲು ಹಾಕಿದ ಅವರು, ಇಂತಹ ಗೊಡ್ಡು ಬೆದರಿಕೆಗಳಿಗೆಲ್ಲ ಬಗ್ಗಲ್ಲ, ಇಂತಹ ಮಾತುಗಳನ್ನಾಡುವ ಮೂಲ ಅಯೋಗ್ಯದ ಪರಮಾವಧಿ ತೋರಿಸುತ್ತಿದ್ದೀರಿ. ಬಡವರ ಕಲ್ಯಾಣ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ನಿಮ್ಮ ಬೆನ್ನ ಹಿಂದೆ ಕಪ್ಪು ಮಸಿ ಇದೆ ಎಂದು ನೋಡಿಕೊಳ್ಳಿ, ಇದಕ್ಕೆ ಮೇ ತಿಂಗಳಲ್ಲಿ ಜನರೇ ಉತ್ತರ ಕೊಡಲಿದ್ದಾರೆ . ಜನತೆಯ ಮಧ್ಯೆ ಜಾತಿ, ಧರ್ಮ, ಕೋಮುಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯಲು ಬಿಜೆಪಿ ಹೊರಟಿದೆ. ಸಮಯೋಚಿತವಾಗಿ ತೀರ್ಪು ಕೊಡುವಾಗ ಜಿಲ್ಲೆಯ ಜನ ನ್ಯಾಯದ ಪರವಾಗಿ ನಿಲ್ಲಲಿದ್ದಾರೆ ನಿಮಗೆ ಮನುಷ್ಯತ್ವ, ಮಾನವೀಯತೆ, ಸಂವಿಧಾನದ ಬಗ್ಗೆ ಗೌರವ ಇದ್ದರೆ ಪ್ರತಿಭಟನೆ ತೀವ್ರಗೊಳ್ಳುವ ಮುನ್ನ ರಾಜ್ಯದ ಜನರಲ್ಲಿ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.
ಪಶ್ಚಿಮ ಬಂಗಾಳದಲ್ಲಿ ಮಾಡಿದ ಪ್ರಯೋಗವನ್ನು ನಮ್ಮ ರಾಜ್ಯದಲ್ಲೂ ಮಾಡಲು ಬಂದಿದ್ದಾರೆ. ಅವರು ಏನು ಮಾಡಲು ಬಂದಿದ್ದಾರೋ ಅದನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಎಂ. ದ್ಯಾವಪ್ಪ, ನಗರಸಭಾ ಸದಸ್ಯ ನಹೀಂ, ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ನಾಗರಾಜು ಭಾಗಿಯಾಗಿದ್ದರು.












Click it and Unblock the Notifications