ಮಳವಳ್ಳಿ: ಬಾಲಕಿ ಹತ್ಯೆಗೈದವನಿಗೆ ಗಲ್ಲುಶಿಕ್ಷೆ ವಿಧಿಸಲು ಪಕ್ಷಾತೀತವಾಗಿ ಹೋರಾಟ
ಮಳವಳ್ಳಿ, ಅಕ್ಟೋಬರ್ 15: ಇತ್ತಿಚಿಗೆ ಬಾಲಕಿಯನ್ನು ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರ್ ಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಇತ್ತಿಚೆಗೆ ಹತ್ಯೆಯಾದ ಬಾಲಕಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ವೈಯಕ್ತಿಕ ಪರಿಹಾರದೊಂದಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ರಾಜ್ಯವೇ ತಲೆತಗ್ಗಿಸುವಂತಹ ವಿಚಾರವಾಗಿದೆ. ಕೃತ್ಯ ಮಾಡಿದವನಿಗೆ ಗಲ್ಲು ಶಿಕ್ಷೆ ಯಾಗಬೇಕು, ಕಠಿಣ ಶಿಕ್ಷೆಯಾಗುವವರೆಗೂ ಬಾಲಕಿಯ ಪೋಷಕರ ಜೊತೆಯಲ್ಲಿಯೇ ನಿಲ್ಲುತ್ತೇವೆಂದು ಹೇಳಿದರು.
ಆರೋಪಿಗೆ ಐದಾರು ವರ್ಷ ಜೈಲಿನಲ್ಲಿ ಊಟ ತಿಂಡಿ ಹಾಕುತ್ತಾರೆ. ನಂತರ ಮತ್ತೆ ಬರುತ್ತಾನೆ, ಆದ್ದರಿಂದ ಈ ವಿಚಾರವಾಗಿ ರಾಜಕೀಯ ಬೇಡ, ಹೀನ ಕೃತ್ಯ ನಡೆಸಿರುವ ಆರೋಪಿಗೆ ಗಲ್ಲು ಶಿಕ್ಷೆಯಾಗಲು ಪಕ್ಷಾತೀತವಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಜನಪ್ರತಿನಿಧಿ ಎನಿಸಿಕೊಂಡವರಿಗೆ ಜವಾಬ್ದಾರಿ ಇರಬೇಕು, ಕೇವಲ ಅಧಿಕಾರಕ್ಕೆ ಮಾತ್ರ ಇರಬಾರದು, ನೊಂದವರ ಜೊತೆಯಲ್ಲಿ ನಿಲ್ಲಬೇಕು, ಅದನ್ನು ಮಾಡಲಿಲ್ಲ ಎಂದರೆ ಹೇಗೆ, ಸ್ಪಂದಿಸಬೇಕೆಂಬುವುದು ಅವರ ಮನಸ್ಸಿನಲ್ಲಿರಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಶಾಸಕ ಡಾ. ಕೆ. ಅನ್ನದಾನಿ ಸದನದಲ್ಲಿ ಧ್ವನಿ ಎತ್ತಿ ಬಾಲಕಿಯ ಕುಟುಂಬಕ್ಕೆ ನ್ಯಾಯ ಕೊಡಿಸಲಿದ್ದಾರೆ, ಕಾನೂನಿನಲ್ಲಿ ತಿದ್ದುಪಡಿ ತಂದು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ತಾಲ್ಲೂಕಿನಲ್ಲಿ ಇಂತಹ ಘಟನೆ ನಡೆದಿರುವುದು ವಿಷಾಧನೀಯ, ಕೇಂದ್ರ ಸರ್ಕಾರ ಕಾನೂನಿನಲ್ಲಿ ತಿದ್ದುಪಡಿ ತಂದು ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು, ಈ ಘಟನೆಯಿಂದ ಇಡೀ ತಾಲೂಕಿನ ಜನತೆ ದುಃಖದಲ್ಲಿ ಮುಳುಗಿದೆ. ಆದರೆ ಜಿಲ್ಲಾಡಳಿತ ಸಾಂತ್ವನ ಹೇಳದೇ ಕುಂಭಮೇಳ ಮಾಡುತ್ತಿದೆ, ಸಂತ್ರಸ್ಥ ಕುಟುಂಬಕ್ಕೆ ಜಿಲ್ಲಾಧಿಕಾರಿದರೂ ಬಂದು ಸಾಂತ್ವನ ಹೇಳಿಲ್ಲ, ನಿಖಿಲ್ ಕುಮಾರಸ್ವಾಮಿರವರು ಬಂದು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದಾರೆ, ಬಾಲಕಿ ಮೇಲೆ ದೌರ್ಜನ್ಯ ಮಾಡೊರೋ ವ್ಯಕ್ತಿಗೆ ಗಲ್ಲುಶಿಕ್ಷೆ ಆಗಬೇಕು. ಈ ವಿಚಾರವಾಗಿ ಸದನದಲ್ಲಿ ಮಾತನಾಡುತ್ತೇನೆ, ಕೇಂದ್ರ ಸರ್ಕಾರ ಕೂಡಲೇ ಈ ವಿಚಾರದಲ್ಲಿ ಕಾನೂನು ತಿದ್ದುಪಡಿ ಮಾಡಿ ಕ್ರಮವಹಿಸಬೇಕೆಂದು ತಿಳಿಸಿದರು.
ಆರೋಪಿಯನ್ನು ಗಲ್ಲಿಗೇರಿಸುವಂತೆ ಪೋಷಕರ ಕಣ್ಣೀರು ಹಾಕುತ್ತಾ ಆರೋಪಿಯನ್ನ ಶೂಟ್ ಔಟ್ ಮಾಡಿ ಸಾಯಿಸಬೇಕು, ಇಂತಹ ದೌರ್ಜನ್ಯ ಮುಂದಿನ ದಿನಗಳಲ್ಲಿ ಮರುಕಳಿಸಬಾರದು. ಹೆಣ್ಣು ಮಕ್ಕಳ ಮೇಲೆ ಕೈ ಹಾಕಲು ಎದುರು ವಂತಾಗಬೇಕು, ಆ ರೀತಿ ಸರ್ಕಾರಗಳು ಕ್ರಮತೆಗೆದುಕೊಳ್ಳಬೇಕು. ಕಾಮುಕನನ್ನ ಗಲ್ಲಿಗೇರಿಸಿದರೆ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ರವಿಕಂಸಾಗರ, ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಪುರಸಭೆ ಉಪಾಧ್ಯಕ್ಷ ಪ್ರಶಾಂತ್, ಸದಸ್ಯರಾದ ನಂದಕುಮಾರ್, ಸಿದ್ದರಾಜು, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಮುಖಂಡ ರಾದ ವಡ್ಡರಹಳ್ಳಿ ಶಿವನಂಜು, ಮಲ್ಲೇಶ್, ಸತೀಶ್, ಪುತ್ತೇಂಡೆ ನಾಗರಾಜು ಸೇರಿದಂತೆ ಇತರರು ಇದ್ದರು.












Click it and Unblock the Notifications