ಹಸು ವಿಚಾರಕ್ಕೆ ನೆರೆಹೊರೆಯವರ ಜಗಳ ಕೊಲೆಯಲ್ಲಿ ಅಂತ್ಯ
ಶ್ರೀರಂಗಪಟ್ಟಣ, ಜುಲೈ 27: ಹಸು ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಕೆಆರ್ಎಸ್ ಸಮೀಪದ ಬೆಳಗೊಳದಲ್ಲಿ ನಡೆದಿದೆ.
ಬೆಳಗೊಳದ ಸೀಬಯ್ಯನ ಮಂಟಿಯ ನಾಗರಾಜು ಎಂಬುವರ ಪತ್ನಿ ಸಾವಿತ್ರಮ್ಮ ಕೊಲೆಯಾದ ದುರ್ದೈವಿಯಾಗಿದ್ದರೆ, ರಾಜು ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ.
ರವಿ ಮತ್ತು ಸಾವಿತ್ರಮ್ಮ ಅವರ ಮನೆ ಅಕ್ಕಪಕ್ಕದಲ್ಲಿದ್ದು, ಇವರ ನಡುವೆ ಚಿಕ್ಕಪುಟ್ಟ ವಿಚಾರಕ್ಕೆಲ್ಲ ಆಗಾಗ್ಗೆ ಜಗಳವಾಗುತ್ತಿತ್ತು. ಈ ವೇಳೆ ಸಾವಿತ್ರಮ್ಮನಿಗೆ ರವಿ ಕೊಲೆ ಬೆದರಿಕೆಯನ್ನು ಹಾಕಿದ್ದನು ಎಂದು ಹೇಳಲಾಗಿದೆ. ಈ ನಡುವೆ ಹಸು ಕಟ್ಟುವ ವಿಚಾರಕ್ಕೆ ಇವರ ನಡುವೆ ಜಗಳವಾಗಿತ್ತು. ಅದಾದ ಬಳಿಕ ಗುರುವಾರ ಆಕಸ್ಮಿಕವಾಗಿ ರಾಜು ಅವರಿಗೆ ಸೇರಿದ ಸುಮಾರು 45 ಸಾವಿರ ರೂ. ಬೆಲೆಬಾಳುವ ಹಸು ಮೃತಪಟ್ಟಿದೆ. ಅದರ ಅಂತ್ಯ ಸಂಸ್ಕಾರ ನಡೆಸಿ ಬರುತ್ತಿದ್ದಾಗ ವರುಣ ನಾಲೆಯಲ್ಲಿ ಸಾವಿತ್ರಮ್ಮ ಒಬ್ಬರೆ ಬಟ್ಟೆ ತೊಳೆಯುತ್ತಿರುವುದನ್ನು ನೋಡಿ ಅವರೊಂದಿಗೆ ಜಗಳ ತೆಗೆದಿದ್ದು, ನೀನೇ ಮಾಟ ಮಾಡಿ ಹಸುವನ್ನು ಸಾಯಿಸಿದ್ದಾಗಿ ಆರೋಪ ಮಾಡಿ ಸಾವಿತ್ರಮ್ಮಗೆ ಚಾಕುವಿನಿಂದ ಇರಿದು ನದಿಗೆ ತಳ್ಳಿ ಉಸಿರುಗಟ್ಟಿಸಿ ಸಾಯಿಸಿ, ಚಾಕನ್ನು ನಾಲೆಗೆ ಎಸೆದು ಬಂದಿದ್ದಾನೆ.

ಇತ್ತ ಪತ್ನಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ಪತಿ ನಾಗರಾಜು ಹುಡುಕಾಟ ನಡೆಸಿದಾಗ ಪಕ್ಕದ ಮನೆಯವರು ಬಟ್ಟೆ ತೊಳೆಯಲು ಹೋಗಿದ್ದರ ಬಗ್ಗೆ ಹೇಳಿದ್ದಾರೆ. ಅದರಂತೆ ಅಲ್ಲಿಗೆ ಹೋದಾಗ ಬಟ್ಟೆ, ಚಪ್ಪಲಿ ಇರುವುದು ಕಂಡಿದ್ದು ನಾಲೆಗೆ ಬಿದ್ದಿರಬಹುದು ಎಂದು ಕೆ.ಆರ್.ಎಸ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಮೃತದೇಹ ಹುಡುಕಾಡಿ ನಾಲೆಯಿಂದ ಹೊರತೆಗೆದ ವೇಳೆ ದೇಹದಲ್ಲಿ ಚಾಕು ಇರಿದ ಗಾಯ ಇರುವುದು ಕಂಡು ಬಂದಿದ್ದರಿಂದ ಅನುಮಾನಗೊಂಡ ಪೊಲೀಸರು ಪತಿ ನಾಗರಾಜು ಅವರನ್ನು ಯಾರ ಮೇಲಾದರೂ ಅನುಮಾನವಿದೆಯೇ ಎಂದು ವಿಚಾರಿಸಿದಾಗ ಪಕ್ಕದ ಮನೆಯ ರವಿಯ ಹೆಸರು ಹೇಳಿದ್ದಾರೆ. ತಕ್ಷಣ ಪೊಲೀಸರು ಮನೆಯಲ್ಲಿ ಕುಡಿದು ಮಲಗಿದ್ದ ರವಿಯನ್ನು ವಶಕ್ಕೆತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಪಿಎಸ್ಐ ಬ್ಯಾಟರಾಯಗೌಡ ನೇತೃತ್ವದ ಸಿಬ್ಬಂದಿ ಆರೋಪಿ ರವಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.












Click it and Unblock the Notifications