ಮಂಡ್ಯ ರಾಜಕೀಯಕ್ಕೆ ಹೊಸ ತಿರುವು, ಮತ್ತೊಂದು ಆಡಿಯೋ ಸ್ಫೋಟ!
ಮಂಡ್ಯ, ಏಪ್ರಿಲ್ 13: ಇಡಿ ಭಾರತದ ಗಮನ ಸೆಳೆದ ಮಂಡ್ಯ ರಾಜಕೀಯಕ್ಕೆ ಇದೀಗ ಮತ್ತೊಂದು ಹೊಸ ತಿರುವು ಸಿಕ್ಕಿದೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸುಮಾರು 150 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿಯುಳ್ಳ ಸ್ಫೋಟಕ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ಕನ್ನಡ ವಾಹಿನಿಗಳು ಸುದ್ದಿ ಮಾಡಿವೆ. ಆದರೆ ಆಡಿಯೋದ ಸತಾಸತ್ಯತೆ ಬಗ್ಗೆ ಖಚಿತ ಮಾಹಿತಿ ಇದುವರೆಗೆ ಲಭ್ಯವಿಲ್ಲ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಡ್ಯ ಕ್ಷೇತ್ರದ ಹಾಲಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರ ಪುತ್ರ ಚೇತನ್ ಮತ್ತು ಜೆಡಿಎಸ್ ಕಾರ್ಯಕರ್ತ ಪಿ ರಮೇಶ್ ಎಂಬುವವರ ನಡುವಿನ ಸಂಭಾಷಣೆಯ ಆಡಿಯೋ ಇದು ಎನ್ನಲಾಗುತ್ತಿದ್ದು, ಈ ಆರೋಪವನ್ನು ಚೇತನ್ ಗೌಡ ತಳ್ಳಿಹಾಕಿದ್ದಾರೆ.
ಆಡಿಯೋದಲ್ಲಿ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿ ಬೂತ್ ಗೆ 5 ಲಕ್ಷ ರೂ.ವರೆಗೆ ಖರ್ಚು ಮಾಡಲು ಈ ಆಡಿಯೋದಲ್ಲಿ ಸಂಭಾಷಣೆ ನಡೆದಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಶಿವರಾಮೇಗೌಡರು, ಇದರಲ್ಲಿರುವುದು ನನ್ನ ಮಗನ ಧ್ವನಿಯಲ್ಲ, ಇದು ವಿರೋಧಿಗಳ ಕುತಂತ್ರ ಎಂದಿದ್ದಾರೆ.

ಆಡಿಯೋದಲ್ಲಿ ಏನಿದೆ?
ಈ ಆಡಿಯೋದಲ್ಲಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಒಟ್ಟು 150 ಕೋಟಿ ರೂ.ಗಳನ್ನು ಖರ್ಚು ಮಾಡಲು ನಿರ್ಧರಿಸಿರುವ ಬಗ್ಗೆ ಪ್ರಸ್ತಾಪವಿದೆ. ಬೂತ್ ಗೆ 5 ಲಕ್ಷ ಖರ್ಚು ಮಾಡಬೇಕೆಂಬ ಬಗ್ಗೆಯೂ ಮಾತುಕತೆ ನಡೆದಿದೆ.

ಶಿವರಾಮೇಗೌಡರ ಪ್ರತಿಕ್ರಿಯೆ ಏನು?
"ಸ್ವತಂತ್ರ ಅಭ್ಯರ್ಥಿ ಸಿನಿಮಾ ಕ್ಷೇತ್ರದಿಂದ ಬಂದವರು. ಅವರಿಗೆ ಮಿಮಿಕ್ರಿ ಮಾಡಿಸಿ ಆಡಿಯೋ ಮಾಡಿಸೋದೇನು ಕಷ್ಟದ ಕೆಲಸವಲ್ಲ. ಆದರೆ ನಾನು ನೇರವಾಗಿ ಯಾರ ಮೇಲೂ ಆರೋಪ ಮಾಡಲ್ಲ. ಚುನಾವಣೆಯೊಳಗೆ ಇನ್ನೂ ಎಷ್ಟು ಆಡಿಯೋ ಹೊರಬರಬೇಕೋ! ಈ ಆಅಡಿಯೋದಲ್ಲಿರುವುದು ಖಂಡಿತ ನನ್ನ ಮಗನ ಧ್ವನಿಯಲ್ಲ. ಬೇಕೆಂದೇ ನನ್ನ ಮಗನ ಮೇಲೆ ಆರೋಪ ಹೊರಿಸಿ ಆತನಿಗೂ, ನನಗೂ ಅವಮಾನ ಮಾಡಲಾಗುತ್ತಿದೆ" ಎಂದು ಶಿವರಾಮೇಗೌಡರು ಆರೋಪಿಸಿದ್ದಾರೆ.

ಸುಮಲತಾ ಏನಂತಾರೆ?
ಈ ಆಡಿಯೋಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸ್ವತಂತ್ರ ಅಭ್ಯರ್ಥಿ, ನಟಿ ಸುಮಲತಾ ಅಂಬರೀಶ್, "ಚುನಾವಣೆಗೂ ಮುನ್ನ ಇಂಥವೆಲ್ಲ (150 ಕೋಟಿ ರೂ. ಖರಚು ಮಾಡುವ ವಿಚಾರ) ನಡೆಯುತ್ತದೆ ಎಂಬ ಬಗ್ಗೆ ನನಗೆ ಮೊದಲೇ ಅನುಮಾನವಿತ್ತು. ಈ ಬಗ್ಗೆ ನಾನು ಚುನಾವಣಾ ಆಯೋಗದ ಬಳಿಯೂ ಪ್ರಸ್ತಾಪಿಸಿದ್ದೆ" ಎಂದಿದ್ದಾರೆ.

ನಿಖಿಲ್ ಕುಮಾರಸ್ವಾಮಿ-ಸುಮಲತಾ ಮುಖಾಮುಖಿ
ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಥವಾ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದ ಸುಮಲತಾ ಅವರಿಗೆ ಟಿಕೆಟ್ ನೀಡದೆ, ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟು ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಆಕ್ರೋಶಗೊಂಡ ಸುಮಲತಾ ಬಂಡಾಯವೆದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಸ್ಟಾರ್ ನಟರಾದ ದರ್ಶನ್-ಯಶ್ ಅವರೂ ಅವರಿಗೆ ಬೆಂಬಲ ನೀಡಿದ್ದು, ಇತ್ತೀಚೆಗಷ್ಟೇ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ, 'ಸುಮಲತಾ ಅವರನ್ನು ಗೆಲ್ಲಿಸುತ್ತೀರಿ ಎಂದು ಭಾವಿಸಿದ್ದೇನೆ' ಎಂದಿದ್ದರು. ಬಿಜೆಪಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿ, ತನ್ನ ಪಕ್ಷದಿಂದ ಅಭ್ಯರ್ಥಿಯನ್ನೂ ಕಣಕ್ಕಿಳಿಸಿಲ್ಲ. ಈ ಎಲ್ಲಾ ಕಾರಣಗಳಿಂದ ಜೆಡಿಎಸ್ ಗೆ ಮಂಡ್ಯದಲ್ಲಿ ಗೆಲ್ಲುವುದು ಸುಲಭದ ಮಾತಲ್ಲ ಎನ್ನಲಾಗಿದೆ. ಚುನಾವಣೆ ಏಪ್ರಿಲ್ 18 ರಂದು ನಡೆಯಲಿದ್ದು, ಫಲಿತಾಂಶ ಮೇ 23 ರಂದು ಹೊರಬೀಳಲಿದೆ.












Click it and Unblock the Notifications