ಶಿವರಾಮೇಗೌಡರ ಎರಡು ದಶಕಗಳ ರಾಜಕೀಯ ವನವಾಸ ಅಂತ್ಯ
ಬೆಂಗಳೂರು, ನವೆಂಬರ್ 6: ವಿಜಯಲಕ್ಷ್ಮೀ ಒಲಿದರೆ ಎಂತೆಂಥಾ ಕಷ್ಟಗಳು ದೂರವಾಗುತ್ತದೆ ಎಂಬುದಕ್ಕೆ ಮಂಡ್ಯ ಲೋಕಸಭೆ ಚುನಾವಣೆಯ ಫಲಿತಾಂಶವೇ ಸಾಕ್ಷಿ.
ಕಳೆದ ಎರಡು ದಶಕಗಳಲ್ಲಿ ಸತತ ನಾಲ್ಕು ಚುನಾವಣೆಗಳಲ್ಲಿ ಸೋಲುಂಡಿದ್ದ ಜೆಡಿಎಸ್ ಎಲ್ಆರ್ ಶಿವರಾಮೇಗೌಡ ಕೊನೆಗೂ 19 ವರ್ಷಗಳ ಸೋಲಿನ ಹತಾಶೆಯಿಂದ ಹೊರಬಂದಿದ್ದು ರಾಜಕೀಯ ಪುನರ್ಜನ್ಮ ಕಂಡಿದ್ದಾರೆ.
ಜೆಡಿಎಸ್ ಭದ್ರ ಕೋಟೆ ಮಂಡ್ಯ ಮತ್ತೆ 'ಗೌಡರ' ವಶಕ್ಕೆ
1996ರಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ರಾಜ್ಯದಲ್ಲಿರುವ ಎಲ್ಲಾ ಪಕ್ಷಗಳನ್ನು ಅಲೆದರೂ ಶಿವರಾಮೇಗೌಡ ಮರು ಆಯ್ಕೆಯಾಗಿರಲಿಲ್ಲ. ಆದರೆ 2018 ರ ಮಂಡ್ಯ ಲೋಕಸಭಾ ಉಪ ಚುನಾವಣೆ ಅವರ ಪಾಲಿಗೆ ಜಯ ತಂದೊಡ್ಡಿದೆ.
ದೇವೇಗೌಡರ ಪರಮ ವೈರಿಯಾಗಿದ್ದರು
ಒಂದು ಕಾಲದಲ್ಲಿ ದೇವೇಗೌಡರ ರಾಜಕೀಯ ಪರಮ ವೈರಿಯಾಗಿ ರಾಜಕೀಯದಲ್ಲಿ ವಿರೋಧಿ ಪಾಳಯದಲ್ಲಿದ್ದ ಶಿವರಾಮೇಗೌಡ ರಾಜಕೀಯ ಪುನರ್ ಜನ್ಮ ಪಡೆಯಬೇಕಾದರೆ ಮತ್ತೆ ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಅಲೆಯಬೇಕಾಯಿತು.
ಎರಡು ದಶಕಗಳ ರಾಜಕೀಯ ಸ್ಥಿತ್ಯಂತರ
ಎರಡು ದಶಕಗಳ ರಾಜಕೀಯ ಸ್ಥಿತ್ಯಂತರದ ಒಟ್ಟು ಪರಿಣಾಮವೇ ಶಿವರಾಮೇಗೌಡರು ಅದೇ ದೇವೇಗೌಡರ ನೆರವಿನಿಂದ ಲೋಕಸಭೆ ಪ್ರವೇಶಿಸಿದ್ದಾರೆ.
ಮಂಡ್ಯದಲ್ಲಿ ವಿಜಯಲಕ್ಷ್ಮೀ ಪಟಾಕಿ ಹೊಡೆಯುವತ್ತ ಜೆಡಿಎಸ್
ಕಾಂಗ್ರೆಸ್ಗೆ ವಲಸೆ ಹೋಗಿದ್ದರು
1996ರಲ್ಲಿ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಿದ್ದ ಶಿವರಾಮೇಗೌಡರು ಸಾಕಷ್ಟು ಪ್ರಯತ್ನ ಮಾಡಿದರೂ ಯಾವುದೇ ಚುನಾವಣೆಯಲ್ಲಿ ಗೆದ್ದಿರಲಿಲ್ಲ. 2009ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಗೆಲುವು ಒಲಿದಿರಲಿಲ್ಲ.
ಕಾಂಗ್ರೆಸ್ ಪಾಳಯಕ್ಕೆ ಹೋಗಿದ್ದ ಶಿವರಾಮೇಗೌಡರು ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಪ್ರವೇಶಿಸುವ ಪ್ರಯತ್ನ ಮಾಡಿದರೂ ಲಾಭವಾಗಲಿಲ್ಲ. ಕೊನೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜೆಡಿಎಸ್ ನ ಏಳು ಶಾಸಕರು, ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಕಾಲಿಡುತ್ತಾರೆ ಎಂಬ ಸುಳಿವು ದೊರೆತ ಬಳಿಕ ಮಂಡ್ಯದಲ್ಲಿ ಚೆಲುವರಾಯಸ್ವಾಮಿ ವಿರೋಧಿಯಾಗಿದ್ದ ಶಿವರಾಮೇಗೌಡರು ಮತ್ತೆ ಜೆಡಿಎಸ್ ಪ್ರವೇಶಿಸಿದರು.
ರಾಜಕೀಯ ವನವಾಸ ಅಂತ್ಯ
ಎರಡೂವರೆ ವರ್ಷದಿಂದ ಜೆಡಿಎಸ್ ನಲ್ಲೇ ಗುರುತಿಸಿಕೊಂಡಿದ್ದ ಶಿವರಾಮೇಗೌಡರು ಸಿಎಸ್ ಪುಟ್ಟರಾಜು ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಸ್ಪರ್ಧಿಸಿ ಮತ್ತೊಮ್ಮೆ ಪಾರ್ಲಿಮೆಂಟ್ ಮುಖ ಕಂಡಿದ್ದಾರೆ. 19 ವರ್ಷಗಳ ನಂತರ ವಿಧಾನಸಭೆಯಿಂದ ಲೋಕಸಭೆಗೆ ತೆರಳುತ್ತಿರುವ ಅವರು ಜಯದ ಬಳಿಕ ಇದೇ ಮೊದಲ ಮಾತನ್ನು ಉದ್ಘರಿಸಿದ್ದಾರೆ. 19 ವರ್ಷಗಳ ನಂತರ ಜಯ ಕಂಡಿದ್ದೇನೆ, ಜನರಿಗೆ ಮೋಸ ಮಾಡದಂತೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಇದು ಕೇವಲ ಅವರ ಭರವಸೆಯಾಗಿರಲಿಲ್ಲ, ಬದಲಾಗಿ 19 ವರ್ಷಗಳ ರಾಜಕೀಯ ವನವಾಸದಿಂದ ಮುಕ್ತಿ ದೊರೆತ ಶಾಪ ವಿಮುಕ್ತಿಯ ಸಂತೋಷ ಬಾಷ್ಪಗಳಂತೆ ಗೋಚರಿಸಿದವು.
ಮಂಡ್ಯ ಲೋಕಸಭೆ ಇತಿಹಾಸದಲ್ಲಿ ಅತಿ ಹೆಚ್ಚು ಮತಗಳಿಂದ ಗೆಲ್ಲುವ ಮೂಲಕ ಶಿವರಾಮೇಗೌಡರು ಮತ್ತೆ ರಾಜಕೀಯ ಏಳಿಗೆ ಕಂಡಿದ್ದಾರೆ. ಆದರೆ ಅವರ ಅಧಿಕಾರ ಅವಧಿ ಕೇವಲ ಏಳು ತಿಂಗಳು ಎನ್ನುವುದು ಆಶ್ಚರ್ಯವಾದರೂ ಸತ್ಯ. ಈ ಏಳು ತಿಂಗಳ ಬಳಿಕವೂ ಅವರು ತಮ್ಮ ಕ್ಷೇತ್ರ ಮುಂದುವರೆಸಿದರೆ ಅಲ್ಲಿಗೆ ಅವರ ರಾಜಕೀಯ ವನವಾಸ ಮುಗಿದಂತಾಗುತ್ತದೆ. ರಾಜಕೀಯ ವನವಾಸ ಅಂತ್ಯದೆಡೆಗೆ ಶಿವರಾಮೇಗೌಡರು ಒಂದು ಹೆಜ್ಜೆ ಮುಂದಿಟ್ಟಿರುವುದಂತೂ ನಿಜ.