ಸೊಳ್ಳೆ ನಿಯಂತ್ರಿಸಲು ಮಂಡ್ಯದ ಗೌಡರ ವಿನೂತನ ಪ್ರತಿಭಟನೆ
ಮಂಡ್ಯ, ಆಗಸ್ಟ್ 05 : ನಮಗೆ ಬೇಕಾದ ಸೇವೆಗಳನ್ನು ಸಕಾಲದಲ್ಲಿ ಪಡೆದುಕೊಳ್ಳಲು ಇಲ್ಲಿ ಹೋರಾಟ ಮಾಡುತ್ತಲೇ ಇರಬೇಕು. ಕಾವೇರಿ ನೀರಿಗಾಗಲಿ, ರಸ್ತೆ ದುರಸ್ತಿಗಾಗಲಿ, ಕಸ ವಿಲೇವಾರಿಗಾಗಲಿ, ಚರಂಡಿ ಸ್ವಚ್ಛತೆಗಾಗಲಿ, ಸಂಬಳದ ಹೆಚ್ಚಳಕ್ಕಾಗಲಿ ಹೋರಾಟ ಮಾಡದಿದ್ದರೆ ಕೇಳಿದಾಗ ಸೇವೆ ದೊರೆಯುವುದಿಲ್ಲ.
ಹಾಗೆಯೆ, ಈ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸಬೇಕೆಂದು ಮಂಡ್ಯದ ಜೆಡಿಯು ಜಿಲ್ಲಾಧ್ಯಕ್ಷರಾಗಿರುವ ಬಿಎಸ್ ಗೌಡ ಎಂಬುವವರು ಮಂಡ್ಯ ಜಿಲ್ಲಾ ಪಂಚಾಯತಿ ಕಚೇರಿಯೆದಿರು ಏಕಾಂಗಿಯಾಗಿ ವಿನೂತ ಪ್ರತಿಭಟನೆ ನಡೆಸಿದ್ದಾರೆ.
ಧ್ವಜಾರೋಹಣದ ಕಟ್ಟೆಯ ಮೇಲೆ ಸೊಳ್ಳೆ ಪರದೆಯನ್ನು ಸುತ್ತಿಕೊಂಡು ಡೆಂಗ್ಯೂ, ಚಿಕೂನ್ ಗುನ್ಯದಂಥ ರೋಗಗಳು ಹರಡದಂತೆ ಜಿಲ್ಲಾಡಳಿತ ಕೂಡಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, ಸೊಳ್ಳೆಯ ಕಡಿತದಿಂದ ಉಂಟಾಗುವ ರೋಗಗಳ ಬಗ್ಗೆ ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಡೆಂಗ್ಯೂ ಮತ್ತು ಚಿಕೂನ್ ಗುನ್ಯ ತಾಂಡವವಾಡುತ್ತಿವೆ. ಮೈಸೂರಿನಲ್ಲಿ ಹಲವಾರು ನಾಗರಿಕರು ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ ಕೂಡ ಡೆಂಗ್ಯೂ ಮತ್ತು ಚಿಕೂನ್ ಗುನ್ಯ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಂಡ್ಯದಲ್ಲಿಯೂ ಇದು ಹರಡದಂತೆ ಎಚ್ಚರ ವಹಿಸಬೇಕೆಂಬುದು ಗೌಡರ ಕಾಳಜಿ. ಇದಕ್ಕೆ ಜಿಲ್ಲಾಡಳಿತ ಸ್ಪಂದಿಸುವುದೆ?
ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು
ಈ ಡೆಂಗ್ಯೂ ಮತ್ತು ಚಿಕೂನ್ ಗುನ್ಯ ರೋಗಗಳಿಗೆ ಮೂಲ ಕಾರಣವಾಗಿರುವ ಸೊಳ್ಳೆಗಳನ್ನು ನಿಯಂತ್ರಿಸಲು ಕ್ರಮ ಜರುಗಿಸಲೆಂದು ಅನುದಾನ ಬಿಡುಗಡೆ ಮಾಡಲಾಗಿದ್ದರೂ, ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದರಿಂದ ಜನರು ಈ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂಬುದು ಗೌಡರ ಆರೋಪ.











Click it and Unblock the Notifications