KRSನಲ್ಲಿ ಚಿರತೆ ಹಾವಳಿ ತಡೆಯಲು ಸರ್ಕಾರ ವಿಫಲ: ರವೀಂದ್ರ ಶ್ರೀಕಂಠಯ್ಯ ಅಸಮಾಧಾನ
ಮಂಡ್ಯ, ನವೆಂಬರ್ 24: ವಿಶ್ವ ಪ್ರಸಿದ್ದ ಪ್ರವಾಸಿ ತಾಣ ಕೆ.ಆರ್.ಎಸ್ ಅಣೆಕಟ್ಟೆಯ ಬೃಂದಾವನದಲ್ಲಿ ಚಿರತೆ ಹಾವಳಿ ತಡೆಯಲು ಸರ್ಕಾರ ಗಂಭೀರ ಪ್ರಯತ್ನ ಮಾಡಿಲ್ಲ. ಸ್ಥಳೀಯ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಿ ಕೈ ಚೆಲ್ಲಿದ್ದಾರೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣರಾಜ ಸಾಗರ ವಿಶ್ವಮಾನ್ಯತೆ ಹೊಂದಿರುವ ಪ್ರವಾಸಿ ತಾಣವಾಗಿದ್ದು, ಅದರ ವರ್ಚಸ್ಸು ಹಾಳಾದರೆ, ಮತ್ತೆ ಸರಿಪಡಿಸಲು ಸಾಧ್ಯವಿಲ್ಲ ಎಂಬ ಅರಿವು ಹಾಗೂ ಗಂಭೀರತೆ ಸರ್ಕಾರಕ್ಕಿಲ್ಲ. ರಾಜ್ಯದ ಹಲವೆಡೆ ಚಿರತೆ ಹಾವಳಿ ಹೆಚ್ಚಾಗಿದ್ದು, ಸರ್ಕಾರ ಸದರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ; ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿ: ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯ ರೈತರ ಸಮಸ್ಯೆಗಳು ಗಂಭೀರವಾಗಿವೆ. ಜಿಲ್ಲೆಯೆಲ್ಲೆಡೆ ರಸ್ತೆಗಳು ಗುಂಡಿಗಳಿಂದ ಅವೃತ್ತವಾಗಿವೆ. ಇಂತಹ ಗಂಭೀರ ವಿಚಾರದ ಬಗ್ಗೆ ಚರ್ಚಿಸಲು ಕೆಡಿಪಿ ಸಭೆ ಕರೆಯುವಂತೆ ಶಾಸಕರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದರು.
ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರು ಕೆ.ಆರ್ ಪೇಟೆ ಅಭಿವೃದ್ಧಿಗೆ ಜೋತು ಬಿದ್ದು, ಜಿಲ್ಲೆಯ ಇತರೆ ತಾಲ್ಲೂಕುಗಳ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಅಧಿಕಾರಿಗಳು ಯಾರ ಹಿಡಿತಕ್ಕೂ ಸಿಕ್ಕದೆ ಜನಸಾಮಾನ್ಯರ ಕೆಲಸ, ಕಾರ್ಯಗಳಿಗೆ ತೊಂದರೆಯಾಗಿದೆ. ಟೆಂಡರ್ ತೆರೆದು ತಿಂಗಳಾದರೂ ಗುತ್ತಿಗೆದಾರರಿಗೆ ಅಗ್ರಿಮೆಂಟ್ ಮಾಡಲು ಮುಂದಾಗುತ್ತಿಲ್ಲ. ಜೆಡಿಎಸ್ ಶಾಸಕರು ಗಲಾಟೆ ಮಾಡಿ ಕಾಮಗಾರಿ ಆರಂಭಿಸುವ ಅನಿವಾರ್ಯತೆ ಒಂದೊದಗಿದೆ ಎಂದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಗೆ ಮಂಜೂರು ಮಾಡಿದ್ದ 8000 ಕೋಟಿ ಅನುದಾನದ ಬಹುಪಾಲು ನಿಲುಗಡೆಗೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕಾರಣಕರ್ತರಾಗಿದ್ದು, ಜಿಲ್ಲೆಯ ವ್ಯವಸ್ಥೆಯನ್ನು ಹಾಳು ಮಾಡಲು ಮುಂದಾಗಿರುವ ಚಲುವರಾಯಸ್ವಾಮಿ ಅವರು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿ ಅನುದಾನ ತಡೆಹಿಡಿದು ಜಿಲ್ಲೆಗೆ ದ್ರೋಹವೆಸಗಿದ್ದಾರೆ. ಜಿಲ್ಲೆಯ ಜನರ ದಾರಿ ತಪ್ಪಿಸಲು ಜೆಡಿಎಸ್ ಅಧಿಕಾರವಧಿಯಲ್ಲಿ ನಿರೀಕ್ಷಿತ ಯೋಜನೆಗಳು ಮಂಜೂರಾಗಿಲ್ಲ ಎಂದು ಹೇಳಿಕೆ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.