ನಾನು ಕುಡಿಯುವುದು ಬಿಟ್ಟು 8 ವರ್ಷ ಆಯಿತು ಎಂದ ನಿಖಿಲ್ ಕುಮಾರಸ್ವಾಮಿ
Recommended Video
ಮಂಡ್ಯ, ಜೂನ್ 24: "ನಾನು ಕಾಲೇಜು ಸಮಯದಲ್ಲಿ ಕುಡಿಯುತ್ತಿದ್ದೆ. ಆದರೆ ಕುಡಿಯುವುದನ್ನು ಬಿಟ್ಟು 8 ವರ್ಷಗಳೇ ಕಳೆದಿವೆ. ನಾನು ಕುಡಿಯುತ್ತೇನೆ ಎಂದು ಹಬ್ಬಿಸಿದ ಸುದ್ದಿ ಸುಳ್ಳು" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ, ಮಂಡ್ಯ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ನಿಖಿಲ್ ಹೇಳಿದ್ದಾರೆ.
ಮಳವಳ್ಳಿಯಲ್ಲಿ ಮಾತನಾಡಿರುವ ಅವರು, ಚುನಾವಣೆ ಸೋಲಿನ ಬಳಿಕ ನಾನು ಕುಡಿಯುತ್ತಿದ್ದೇನೆ. ದೇವೇಗೌಡರಿಗೆ ಬೈದಿದ್ದೇನೆ ಎಂದು ಸುಳ್ಳು ಸುದ್ದಿ ಹರಿದಾಡಿತ್ತು. ನಾನು ಕುಡಿಯುವುದು ಬಿಟ್ಟು ಎಂಟು ವರ್ಷ ಆಯಿತು. ಆರೋಗ್ಯದ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಬದುಕಲ್ಲಿ ಇರುವುದರಿಂದ ಕುಡಿಯುವುದು ಬಿಟ್ಟಿದ್ದೀನಿ. ಇನ್ನು ದೇವೇಗೌಡರ ಮುಂದೆ ನಿಂತು ಮಾತನಾಡುವ ಧೈರ್ಯ ಕೂಡ ನನಗಿಲ್ಲ. ಹೀಗಿರುವಾಗ ನಾನು ಕುಡಿದು ಅವರ ಮುಂದೆ ನಿಲ್ಲಲು ಸಾಧ್ಯವಾ ಎಂದು ಪ್ರಶ್ನಿಸಿದ್ದಾರೆ.
ಮಂಡ್ಯದ ಪ್ರವಾಸದ ಬಗ್ಗೆ ಜೆಡಿಎಸ್ ವರಿಷ್ಠರ ಜೊತೆ ಚರ್ಚೆ ಮಾಡಿದ್ದೇನೆ. ನನಗೆ ಮತ ಚಲಾಯಿಸಿದ ಮತದಾರರಿಗೆ ಧನ್ಯವಾದಗಳು. ನನ್ನ ಧೃತಿಗೆಡಿಸುವುದಕ್ಕೆ ಸಾಧ್ಯವಿಲ್ಲ. ನಾನು ನಿತ್ಯವೂ ಕುಮಾರಸ್ವಾಮಿ, ದೇವೆಗೌಡರ ಜೊತೆ ಚರ್ಚೆ ಮಾಡುತ್ತಿದ್ದೇನೆ. ಅವರ ರಾಜಕೀಯ ಅನುಭವವನ್ನು ನನಗೆ ಹೇಳಿಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಚಲುವಣ್ಣನಿಗೆ ಕಾವೇರಿ ನೀರಿನ ಬಗ್ಗೆ ಈಗ ಕಾಳಜಿ ಬಂದಿದೆ
ನನಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟ ಜಿಲ್ಲೆಯ ಶಾಸಕರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಜೆಡಿಎಸ್ ಕಾರ್ಯಕರ್ತರ ಪರವಾಗಿ ಕೊನೆಯವರೆಗೂ ಇರುತ್ತೇನೆ ಎಂದಿದ್ದೆ. ಆ ಮಾತು ಚುನಾವಣೆಗೆ ಮಾತ್ರ ಸೀಮಿತ ಅಲ್ಲ. ಚಲುವಣ್ಣನಿಗೆ ಇವತ್ತು ಕಾವೇರಿ ನೀರಿನ ಬಗ್ಗೆ ಕಾಳಜಿ ಬಂದಿದೆ ಎಂದಿದ್ದಾರೆ.

ಮಂಡ್ಯದ ಈಗಿನ ಸಂಸದರು ಸಕತ್ ಶಕ್ತಿಶಾಲಿ
ಮಂಡ್ಯದ ಜನರು ಆರಿಸಿ ಕಳಿಸಿರುವ ಸಂಸದರು ಕಾವೇರಿ ವಿಚಾರವಾಗಿ ಹೋರಾಟ ಮಾಡುತ್ತಾರೆ. ಬಿಜೆಪಿಯ ಬೆಂಬಲ ನೂತನ ಸಂಸದರಿಗಿದೆ. ಸಕತ್ ಶಕ್ತಿಶಾಲಿ ಅವರು. ನಾವೆಲ್ಲ ಯಾರು? ನಾವೆಲ್ಲ ಸಣ್ಣವರು. ಅವರು ಹೋರಾಟ ಮಾಡುತ್ತಾರೆ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಾರೆ ಎಂದು ನಿಖಿಲ್ ಹೇಳಿದ್ದಾರೆ.

ತೋಟದ ಮನೆಗೆ 'ನಿಮ್ಮ ಮನೆ' ಎಂದು ಹೆಸರು
ಮಂಡ್ಯ ನಗರಕ್ಕೆ ಒಂದು ಕಿ.ಮೀ. ದೂರದಲ್ಲೇ ತೋಟ ಖರೀದಿ ಮಾಡಿದ್ದೇನೆ. 'ನಿಮ್ಮ ಮನೆ' ಎಂದು ಮನೆಗೆ ಹೆಸರಿಡುತ್ತೇನೆ. ನಾನು ಮನೆಯಲ್ಲಿ ಇಲ್ಲ ಅಂದರೂ ಯಾರು ಬೇಕಾದರೂ ಮನೆಗೆ ಬರಬಹುದು. 15 ದಿನದೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ರಾಜ್ಯಾಧ್ಯಕ್ಷ ಸ್ಥಾನ, ಯುವ ಘಟಕಕ್ಕೆ ಅಧ್ಯಕ್ಷ ಸ್ಥಾನ ಪಡೆಯಲು ನನಗಿನ್ನೂ ಅನುಭವದ ಅವಶ್ಯಕತೆ ಇದೆ. ನಾನು ಕಾರ್ಯಕರ್ತನಾಗಿಯೇ ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಅವರು ಹೇಳಿದ್ದಾರೆ.

ಜೆಡಿಎಸ್ ಕಾರ್ಯಕರ್ತನ ಸಾವಿಗೆ ಸಂತಾಪ ಹೇಳಲು ತೆರಳಿದ್ದರು
ಮಳವಳ್ಳಿಯ ಜೆಡಿಎಸ್ ಕಾರ್ಯಕರ್ತ ಸಂತೋಷ್ ಇತ್ತೀಚೆಗೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮೃತ ಸಂತೋಷ್ ಮನೆಗೆ ಹೋಗಿ ಕುಟುಂಬದವರಿಗೆ ನಿಖಿಲ್ ಸಾಂತ್ವನ ಹೇಳಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಕಣದಲ್ಲಿದ್ದ ನಿಖಿಲ್ ಎದುರು ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಜಯಿಸಿದರು.












Click it and Unblock the Notifications