ಮಂಡ್ಯ ರಾಜಕಾರಣ ಹೈಜಾಕ್ ಮಾಡಲು ಎಚ್ ಡಿಕೆ ಪ್ರಯತ್ನ: ಚೆಲುವರಾಯಸ್ವಾಮಿ
ಮಂಡ್ಯ, ಮೇ 29: ಜಿಲ್ಲೆ ರಾಜಕಾರಣವನ್ನು ಹೈಜಾಕ್ ಮಾಡುವುದಕ್ಕೆ ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಆದರೆ ಇಲ್ಲಿನ ಜನರು ದಡ್ಡರಲ್ಲ. ಚುನಾವಣೆ ಹೊತ್ತಿಗೆ ಎಲ್ಲರ ಬಣ್ಣ ಬಯಲಾಗುತ್ತದೆ ಎಂದು ಶಾಸಕ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಕೊಪ್ಪದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜಕೀಯ ಪಾಠವನ್ನು ನಾನು ಯಾರಿಂದಲೂ ಕಲಿಯುವ ಅಗತ್ಯವಿಲ್ಲ. ಈವರೆಗೆ ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಇಪ್ಪತ್ತೈದು ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೀನಿ. ಈವರೆಗೆ ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದರು.['ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ದೇವೇಗೌಡರಲ್ಲ, ನಾವು']
ಗ್ರಾಮೀಣ ಭಾಗದಲ್ಲಿ ಪಂಚೆ-ಟವಲ್ ಹಾಕಿಕೊಂಡಿರುವ ಜನರೇ ನನ್ನ ಶಕ್ತಿ. ಪಕ್ಷ ಸಂಘಟನೆಯನ್ನು ಮಾಡಿದ್ದೇನೆ. ಪಕ್ಷಕ್ಕಾಗಿ ದುಡಿದಿದ್ದೇನೆ. ಅದರ ಬಗ್ಗೆ ಗೊತ್ತಿಲ್ಲದೆ ಮಾತನಾಡುವವರಿಗೆ ಇತಿಹಾಸ ತಿಳಿದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರು ಫಲಿತಾಂಶ ನೀಡುತ್ತಾರೆ ಎಂದರು.
ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರ ಬಗ್ಗೆ ನಮಗೆ ಹೊಟ್ಟೆ ಉರಿಯಿಲ್ಲ. ಈ ರಾಜ್ಯಕ್ಕೆ ಒಬ್ಬರು ಮಾತ್ರ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯ. ಅದು ಯಾರು ಅನ್ನೋದು ಜನರ ತೀರ್ಮಾನ. ಹಗಲು ಕನಸು ಕಾಣೋದನ್ನು ಬಿಡಬೇಕು ಎಂದು ಚೆಲುವರಾಯಸ್ವಾಮಿ ಹೇಳಿದರು.