'ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ದೇವೇಗೌಡರಲ್ಲ, ನಾವು'
ಮೈಸೂರು, ಮೇ 24: ದೇವೇಗೌಡರ ಕುಟುಂಬಕ್ಕಾಗಲೀ, ಪಕ್ಷಕ್ಕಾಗಲೀ ನಾನು ಯಾವ ದ್ರೋಹವನ್ನೂ ಬಗೆದಿಲ್ಲ ಎಂದು ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ರಾಜಕಾರಣ ಮಾಡಿ ಗೊತ್ತೇ ವಿನಾ ದ್ರೋಹದ ರಾಜಕಾರಣ ಗೊತ್ತಿಲ್ಲ. ನಮ್ಮಲ್ಲೂ ಸಂಸ್ಕಾರವಿದೆ. ಆ ಚೌಕಟ್ಟನ್ನು ಮೀರಿ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ. ಜಿಲ್ಲೆಯ ಜನರು ನನ್ನನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದರು.
ತಾಳ್ಮೆ, ಸಹನೆಯಿಂದ ಸ್ವಾಭಿಮಾನದ ರಾಜಕಾರಣ ಮಾಡುವುದು ಒಳ್ಳೆಯದು ಆದ್ದರಿಂದ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ದೇವೇಗೌಡರನ್ನು ಮಂಡ್ಯಕ್ಕೆ ಪರಿಚಯಿಸಿದ್ದು ಶಾಸಕ ಎಸ್.ಡಿ.ಜಯರಾಂ. ಅಲ್ಲಿಯವರೆಗೆ ಮಂಡ್ಯದ ಸ್ಥಿತಿ-ಗತಿ ಬಗ್ಗೆ ದೇವೇಗೌಡರಿಗೆ ಗೊತ್ತಿರಲಿಲ್ಲ. ನನ್ನನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರನ್ನಾಗಿ ಮಾಡಿದ್ದೂ ದೇವೇಗೌಡರಲ್ಲ ಶಾಸಕ ಎಸ್.ಡಿ.ಜಯರಾಂ ಎಂದರು.
ಜಿಲ್ಲೆಯ ಮಗನಾಗಿ ಸಜ್ಜನಿಕೆ ರಾಜಕಾರಣ ಮಾಡುವೆ. ಈಗ ಪರಿಸ್ಥಿತಿಗೆ ಕಟ್ಟುಬಿದ್ದಿದ್ದೇನೆ. ಅದನ್ನು ಧೈರ್ಯವಾಗಿ ಎದುರಿಸಲೇಬೇಕಾಗಿ ಬಂದಿದೆ. ಬೆಂಬಲಿಗರು, ಕಾರ್ಯಕರ್ತರು ಯಾರ ಬಗ್ಗೆಯೂ ಮಾತನಾಡದೆ ಚುನಾವಣೆಗೆ ಸಿದ್ಧರಾಗಿ ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ಬಾಯಿ ಚಪಲದ ಮಾತು
ಕುಮಾರಸ್ವಾಮಿ ಬಾಯಿ ಚಪಲಕ್ಕೆ ನಮ್ಮ ಬಗ್ಗೆ ಏನೇನೋ ಮಾತನಾಡುತ್ತಾರೆ. ಹಾಗಂತ ನಾವು ಅವರನ್ನು ಟೀಕಿಸುವುದಿಲ್ಲ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಅವರ ತಂದೆ ದೇವೇಗೌಡರಲ್ಲ. ನಾವು ಎಂಬುದನ್ನು ಮರೆಯಬಾರದು. ಅವರು ಇನ್ನೊಮ್ಮೆ ಮುಖ್ಯಮಂತ್ರಿಯಾದರೂ ನಮಗೆ ಸಂತೋಷವೇ ಹೊರತು ಅಸೂಯೆ ಪಡುವುದಿಲ್ಲ ಎಂದು ಹೇಳಿದರು.

ಅವರೆಲ್ಲ ಸೋತಾಗ ಪಕ್ಷಕ್ಕೆ ಬಲ ತುಂಬಿದ್ದೆ
ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರು ಸೋತ ಸಂದರ್ಭದಲ್ಲೂ ಜೆಡಿಎಸ್ ನಿಂದ ನಾನು ಆಯ್ಕೆಯಾಗಿ ಬಂದು ಪಕ್ಷಕ್ಕೆ ಬಲ ತುಂಬುವ ಪ್ರಯತ್ನ ನಡೆಸಿದ್ದೇನೆ. ಹಲವು ಸಂದರ್ಭಗಳಲ್ಲಿ ಬೇರೆ ಪಕ್ಷ ಸೇರುವಂತೆ ಒತ್ತಾಯಿಸಿದರೂ ಪಕ್ಷ ಮತ್ತು ನಾಯಕರನ್ನು ಬಿಟ್ಟು ಹೋಗಲಿಲ್ಲ. ಈಗ ನಾವೇನೂ ತಪ್ಪು ಮಾಡದಿದ್ದರೂ ಪಕ್ಷದಿಂದ ಹೊರಗಿಟ್ಟ ಕಾರಣ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.

ಸಭೆಯಲ್ಲಿದ್ದ ಮುಖಂಡರು
ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕ ಎಚ್.ಬಿ.ರಾಮು, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಮನ್ ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ರೇವಣ್ಣ, ಮುಖಂಡರಾದ ಕೆಬ್ಬಳ್ಳಿ ಆನಂದ್, ಬಸವರಾಜು, ಜಗದೀಶ್, ಅಂಬರೀಷ, ತ್ಯಾಗರಾಜು, ರಾಜೇಗೌಡ, ಶಿವನಂಜು ಇನ್ನಿತರರು ಸಭೆಯಲ್ಲಿ ಸಲಹೆ ನೀಡಿದ್ದಾರೆ.

ಚೆಲುವರಾಯಸ್ವಾಮಿಗೆ ನಾಯಕತ್ವ
ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಚುನಾವಣೆ ಅಶ್ವಮೇಧ ಯಾಗದ ಕುದುರೆ ಸಾರಥಿಯಾಗಿ ಎನ್. ಚೆಲುವರಾಯಸ್ವಾಮಿ ಅವರನ್ನು ಬಿಟ್ಟಿದ್ದೇವೆ. ಒಂದು ವರ್ಷದಲ್ಲಿ ಯುದ್ಧಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಬೇಕಿರುವುದರಿಂದ ನಾವೆಲ್ಲರೂ ಚೆಲುವರಾಯಸ್ವಾಮಿಯನ್ನು ನಾಯಕನಾಗಿ ಒಪ್ಪಿಕೊಂಡಿದ್ದು, ಅವರ ನೇತೃತ್ವದಲ್ಲಿ ಗೆಲುವಿನ ಗುರಿ ಮುಟ್ಟುವುದಾಗಿ ಹೇಳಿದ್ದಾರೆ.

ಮುಂದಿನ ನಡೆ ಏನು?
ಚೆಲುವರಾಯಸ್ವಾಮಿ ಅವರ ಮುಂದಿನ ನಡೆ ಬಗ್ಗೆ ಯಾವುದೇ ನಿಲುವು ಹೊರಬಿದ್ದಿಲ್ಲ. ಕಾಂಗ್ರೆಸ್ ಸೇರುತ್ತಾರೋ ಅಥವಾ ಪಕ್ಷೇತರರಾಗಿ ಸ್ಪರ್ಧೆ ನೀಡುತ್ತಾರೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.












Click it and Unblock the Notifications