Dog Prediction: ರಾಜ್ಯದ ಮುಂದಿನ ಸಿಎಂ ಬಗ್ಗೆ ಸುಳಿವು ನೀಡಿದ ಮಂಡ್ಯದ ಶ್ವಾನ: ನಿಜವಾಗುತ್ತಾ ಭವಿಷ್ಯ?
ಮಂಡ್ಯ, ಏಪ್ರಿಲ್, 25: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳ ನಾಮಪತ್ರ ಪ್ರಕ್ರಿಯೆಗಳು ಮುಗಿದಿವೆ. ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ಅಖಾಡಗಳು ರಂಗೇರಿದ್ದು, ಮೂರು ಪಕ್ಷಗಳ ನಾಯಕರು ಕೂಡ ಮತಬೇಟೆಯನ್ನು ಶುರು ಮಾಡಿದ್ದಾರೆ. ಹಾಗೆಯೆ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಚರ್ಚೆಗಳೂ ಆಗುತ್ತಿವೆ. ಈ ನಡುವೆಯೇ ಎಚ್.ಡಿ.ಕುಮಾರಸ್ವಾಮಿ ಅವರು ಮುಂದಿನ ಸಿಎಂ ಆಗಲಿದ್ದಾರೆ ಎಂದು ಕಾಲ ಭೈರವನ ಪ್ರತಿ ರೂಪ ಶ್ವಾನ ಭವಿಷ್ಯ ನುಡಿದಿದೆ.
ಈ ಹಿಂದೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಆಗಲಿದೆ ಎನ್ನುವ ಭವಿಷ್ಯಗಳನ್ನು ಆಕ್ಟೋಪಸ್ ಹಾಗೂ ಹಂದಿ ನುಡಿದಿದ್ದನ್ನು ನಾವು ಕೇಳಿದ್ದೇವೆ. ಆದರೆ ಇದೀಗ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಅನ್ನುವ ಬಗ್ಗೆ ಶ್ವಾನವೊಂದು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದೆ.

ಕುತೂಹಲ ಮೂಡಿಸಿದ ಭೈರವನ ಭವಿಷ್ಯ
ಮಂಡ್ಯದ ಅಶೋಕನಗರದ ಗೋಪಿ ಎನ್ನುವರರ ಭೈರವ ಎಂಬ ಹೆಸರಿನ ಶ್ವಾನವು ಎಚ್.ಡಿ ಕುಮಾರಸ್ವಾಮಿ ಅವರ ಭಾವಚಿತ್ರ ಸೂಚಿಸುವ ಮೂಲಕ ಮುಂದಿನ ಸಿಎಂ ಇವರೇ ಎನ್ನುವ ಸುಳಿವನ್ನು ನೀಡಿ ನೋಡುಗರನ್ನು ಅಚ್ಚರಿಗೊಳಿಸಿದೆ. ಗೋಪಿಯವರು ಕಾಲಭೈರವನ ಭಕ್ತರು. ಪ್ರತಿ ಸೋಮವಾರವೂ ಕೂಡ ಇವರ ಕುಟುಂಬ ಕಾಲಭೈರವನ ಪೂಜೆ ಮಾಡಿಕೊಂಡು ಬಂದಿದೆ.
ಹಾಗೆಯೆ ದೇವಸ್ಥಾನಕ್ಕೆ ತಮ್ಮ ಶ್ವಾನವನ್ನೂ ಸಹ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅದರಂತೆಯೇ ತಮ್ಮ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ಸಿಎಂ ಯಾರಾಗುತ್ತಾರೆ ಎನ್ನುವುದನ್ನು ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೂರು ಫೋಟೋಗಳನ್ನು ಇಟ್ಟು ಅಪ್ಪಣೆ ಕೇಳಿದ್ದಾರೆ. ಆಗ ಶ್ವಾನವು ಎಚ್.ಡಿ.ಕುಮಾರಸ್ವಾಮಿ ಅವರ ಫೋಟೋವನ್ನು ಎತ್ತಿ ತೋರಿಸಿದೆ. ಈ ಮೂಲಕ ಮುಂದಿನ ಸಿಎಂ ಕುಮಾರಸ್ವಾಮಿ ಎನ್ನುವುದನ್ನು ಈ ಶ್ವಾನ ಖಚಿತಪಡಿಸಿದಂತಿದೆ.
ಈ ಹಿಂದೆಯೂ ಸಹ ಈ ಶ್ವಾನದಂತೆ ಹಲವು ಪವಾಡಗಳು ನಡೆದಿವೆ ಎಂದು ಹಲವರು ಹೇಳುತ್ತಾರೆ. ಹೀಗೆ ಗೋಪಿ ಅವರ ಶ್ವಾನ ನೀಡುತ್ತಿರುವ ಸೂಚನೆಗಳು ನಿಜ ಆಗುತ್ತಿವೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಇದೀಗ ಕುಮಾರಸ್ವಾಮಿ ಫೋಟೋವನ್ನು ಎತ್ತಿ ಹಿಡಿಯುವ ಮೂಲಕ ಮುಂದಿನ ಸಿಎಂ ಇವರೇ ಎನ್ನುವ ಸೂಚನೆಯನ್ನು ನೀಡಿದೆ.
ಶ್ವಾನ ಭವುಷ್ಯದ ಬಗ್ಗೆ ಮಾಲೀಕ ಹೇಳಿದ್ದೇನು?
ಈ ಶ್ವಾನದಿಂದ ಹಲವು ಪವಾಡಗಳು ನಡೆದಿವೆ ಎನ್ನುವುದನ್ನು ಮಾಲೀಕ ಗೋಪಿ ಹೇಳಿದ್ದಾರೆ. ಕೆಲವು ತಿಂಗಳಗಳ ಹಿಂದೆ ನಮ್ಮ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ತಾಯಿ ಜೀವದ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ. ಇತ್ತ ಮನೆಯಲ್ಲಿ ಶ್ವಾನ ಊಟ ಮಾಡದೇ ನನ್ನ ತಾಯಿಯನ್ನು ನೋಡಲು ಚಡಪಡಿಸುತ್ತಿತ್ತು.
ಕೊನೆಗೆ ಒಂದು ದಿನ ಅದನ್ನು ಕಾರಿನಲ್ಲಿ ಜಯದೇವ ಅಸ್ಪತ್ರೆ ಬಳಿ ಕರೆದುಕೊಂಡು ಹೋಗಿದ್ದೆ. ಆಸ್ಪತ್ರೆಗೆ ಶ್ವಾನಗಳ ಪ್ರವೇಶ ಇಲ್ಲದಿದ್ದರಿಂದ ನನ್ನ ತಾಯಿಯನ್ನು ವೀಲ್ ಚೇರ್ ಮೂಲಕ ಆಸ್ಪತ್ರೆಯಿಂದ ಆಚೆ ಕರೆದುಕೊಂಡು ಬಂದಿದ್ದೆ. ಆಗ ಶ್ವಾನ ನನ್ನ ಅಮ್ಮನನ್ನು ಎರಡ್ಮೂರ ಸಲ ನೆಕ್ಕಿ ಮುದ್ದಾಡಿತ್ತು. ಬಳಿಕ ನಮ್ಮ ತಾಯಿ ಆರೋಗ್ಯದಲ್ಲಿ ಸುಧಾರಣೆ ಆಗಿದೆ ಎಂದರು.
ವೈದ್ಯರು ಸಹ ಆರೋಗ್ಯದಲ್ಲಿ ಶೇಕಡಾ 65ರಷ್ಟು ಸುಧಾರಿಸಿದೆ ಎಂದು ಹೇಳಿದ್ದಾರೆ ಅಂತಾ ಗೋಪಿ ತಮ್ಮ ಶ್ವಾನದ ಪವಾಡದ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಪತ್ರನಿಗೂ ಅನಾರೋಗ್ಯ ಆದಾಗಲೂ ಶ್ವಾನದ ಪವಾಡದಿಂದ ಅವನು ಸಹ ಆರೋಗ್ಯವಾಗಿದ್ದಾನೆ ಎಂದರು.
ಈ ಶ್ವಾನದಲ್ಲಿ ಏನೋ ಶಕ್ತಿಯಿದೆ ಎಂದು ಅನಿಸಿತು. ನಾವು ಮನೆಯಲ್ಲಿ ಪೂಜೆ ಮಾಡುವಾಗ ದೇವರ ಮನೆಗೆ ಬಂದು ಎರಡೂ ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳುತ್ತದೆ ಎಂದರು. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಶ್ವಾನ ನುಡಿದ ಭವಿಷ್ಯ ನಿಜವಾಗುತ್ತಲೇ ಇದೆಯಂತೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶ್ವಾನದ ಭವಿಷ್ಯ ನಿಜ ಆಗಲಿದೆಯೇ ಎಂದು ಕಾದುನೋಡಬೇಕಿದೆ.
ಸಾಮಾನ್ಯವಾಗಿ ಭವಿಷ್ಯವನ್ನು ನಮ್ಮಂತೆಯೇ ಮನುಷ್ಯರಾದ ಜ್ಯೋತಿಷ್ಯರ ಬಳಿ ಕೇಳಿಕೊಂಡು ಬರುವುದನ್ನು ನಾವು ನೋಡಿದ್ದೇವೆ. ಅದರೆ ಮಂಡ್ಯದಲ್ಲೊಂದು ನಾಯಿ ಭವಿಷ್ಯವನ್ನು ಹೇಳುತ್ತಿದ್ದು, ಇದು ನುಡಿದಿರುವ ಇದುವರೆಗಿನ ಭವಿಷ್ಯಗಳು ಯಾವು ಸುಳ್ಳಾಗಿಲ್ಲವಂತೆ. ಹಾಗಾದರೆ ಕುಮಾರಸ್ವಾಮಿಯವರು ಮುಂದಿನ ಸಿಎಂ ಎಂದು ಇದೀಗ ನುಡಿದಿರುವ ಭವಿಷ್ಯವೂ ನಿಜವಾಗಲಿದೆಯೇ ಅನ್ನುವುದನ್ನು ಕಾದುನೋಡಬೇಕಿದೆ ಅಷ್ಟೇ.












Click it and Unblock the Notifications