ಮಂಡ್ಯದಲ್ಲಿ ಕೊರೊನಾ ಗುಣಮುಖನಿಗೆ ಸಿಕ್ಕಿತು ಅದ್ಧೂರಿ ಸ್ವಾಗತ
ಮಂಡ್ಯ, ಏಪ್ರಿಲ್ 28: ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ವ್ಯಕ್ತಿ ಗುಣಮುಖನಾಗಿ ಮನೆ ಸೇರಿರುವುದು ಮಂಡ್ಯದಲ್ಲಿ ಸಂತಸ ಮೂಡಿಸಿದೆ. ಜತೆಗೆ ಚಿಕಿತ್ಸೆ ನೀಡಿ ರೋಗಿಯನ್ನು ಗುಣಮುಖನಾಗುವಂತೆ ಮಾಡಿದ ವೈದ್ಯರು ಮತ್ತು ಸಿಬ್ಬಂದಿಗೆ ಜನ ಧನ್ಯವಾದ ಹೇಳಿದ್ದಾರೆ.
Recommended Video
ಈ ನಡುವೆ ಗುಣಮುಖನಾದ ವ್ಯಕ್ತಿ ತನ್ನ ನಿವಾಸವಿರುವ ಸ್ವರ್ಣಸಂದ್ರ ಬಡಾವಣೆಗೆ ಬಂದಾಗ ನಿವಾಸಿಗಳು ಆರತಿ ಬೆಳಗಿ ಚಪ್ಪಾಳೆಯೊಂದಿಗೆ ಸ್ವಾಗತಕೋರಿ ಬರಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆಯ ನೌಕರನಿಗೆ ಮೊದಲಿಗೆ ಕೊರೊನಾ ಸೋಂಕು ಪತ್ತೆಯಾಗಿ ಆತನನ್ನು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಂತೆಯೇ ಕಾರ್ಖಾನೆಯಲ್ಲಿದ್ದ ಸ್ವರ್ಣಸಂದ್ರ ನಿವಾಸಿ 32 ವರ್ಷದ ವ್ಯಕ್ತಿಗೆ ಏ.7ರಂದು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಮಂಡ್ಯದ ಐಸೊಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಬಳ್ಳಾರಿ; ಕೊರೊನಾದಿಂದ ಹೊರಬಂದ ಮೂವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಇದೀಗ ಆತ ಸೋಂಕಿನಿಂದ ಗುಣಮುಖನಾಗಿದ್ದು, ಆರೋಗ್ಯ ಇಲಾಖೆ ವಾಹನದಲ್ಲಿ ಸ್ವರ್ಣಸಂದ್ರಕ್ಕೆ ಕರೆತರಲಾಯಿತು. ಜೆಡಿಎಸ್ ನಗರ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ಮಂಜುನಾಥ್ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಅಲ್ಲದೆ, ಸೋಂಕಿತ ವಾಸವಿದ್ದ ಬೀದಿಗೆ ಕರೆತಂದಾಗ ನಿವಾಸಿಗಳು ಆರತಿ ಬೆಳಗಿ, ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಿದರು. ನಂತರ ಮನೆಯ ತನಕ ಚಪ್ಪಾಳೆ ತಟ್ಟುತ್ತಲೇ ಆತನನ್ನು ಕರೆದೊಯ್ದು ಬಿಟ್ಟು ಬರಲಾಯಿತು.

ಈತನಿಗೆ ತಾನು ಕೆಲಸ ಮಾಡುತ್ತಿದ್ದ ಜುಬಿಲಿಯೆಂಟ್ ಕಾರ್ಖಾನೆಯ ಸಹೋದ್ಯೋಗಿಯಿಂದಲೇ ಸೋಂಕು ತಗುಲಿತ್ತು. ನಂತರ ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ-ತಾಯಿ, ತಂಗಿ ಹಾಗೂ ತಂಗಿಯ ಮಗಳ ರಕ್ತ ಹಾಗೂ ಗಂಟಲ ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಬಂದಿತ್ತು. ಇವರನ್ನು ಹಾಸ್ಟೆಲ್ ಕ್ವಾರಂಟೈನ್ ನಲ್ಲಿಟ್ಟು, ಸೋಂಕಿತನನ್ನು ಮಿಮ್ಸ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರೆಸಿತ್ತು.
ಆ ನಂತರದಲ್ಲಿ ಮತ್ತೆ ಸೋಂಕಿತ ವ್ಯಕ್ತಿಯ ಕಫ, ಗಂಟಲು ದ್ರವ, ಮಲ-ಮೂತ್ರ ಪರೀಕ್ಷೆಗೊಳಪಡಿಸಿದಾಗ ಆ ವರದಿಗಳೆಲ್ಲವೂ ನೆಗೆಟಿವ್ ಬಂದಿತ್ತು. ಆ ನಂತರದಲ್ಲಿ ಸೋಮವಾರ ಈತನ ಆರೋಗ್ಯದ ಮೇಲೆ ನಿಗಾ ವಹಿಸಿ ಇದೀಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.












Click it and Unblock the Notifications