ರೈತರಿಗೆ ಮಾಹಿತಿ ಕೊರತೆಯಿಂದ ‘ಫ್ರೂಟ್ಸ್ ಐಡಿ’ ವಿಳಂಬ
ಮಂಡ್ಯ, ನವೆಂಬರ್ 25: ಜಿಲ್ಲೆಯ ಏಳೂ ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಣೆ ಮಾಡಿ ಆಗಿದೆ, ಇತರೆ ಕೃಷಿ ಸೌಲಭ್ಯ ಪಡೆಯಬೇಕಿದ್ದರೂ ಸಹ ರೈತರು ಫ್ರೂಟ್ಸ್ ಐಡಿ ಮಾಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ? ಇದಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ನೀಡಿಲ್ಲವೋ ಅಥವಾ ಮಾಹಿತಿ ಇದ್ದರೂ ಕೆಲವು ರೈತರು ನಿರಾಸಕ್ತಿ ತೋರೊತ್ತಿದ್ದಾರೋ ಎಂಬುದೇ ಯಕ್ಷ ಪ್ರಶ್ನೆ ಆಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಬರಪರಿಸ್ಥಿತಿ ಆವರಿಸಿದೆ. ಸರ್ಕಾರ ವಿವಿಧ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿ ಆಗಿದೆ, ಬರದಿಂದಾಗಿ ಬೆಳೆನಷ್ಟವಾದ ರೈತರು ಪರಿಹಾರವನ್ನು ಪಡೆಯಲು ಎಫ್ಐಡಿ ಹೊಂದಿರುವುದು ಸೂಕ್ತ. ಬರ ಘೋಷಣೆಗೊಂಡ ತಾಲೂಕುಗಳಲ್ಲಿ ಬೆಳೆ ನಷ್ಟವಾಗಿರುವ ರೈತರು ಪರಿಹಾರ ಧನ ಪಡೆಯಲು ಭೂಮಿ ವಿವರ ಇರುವ ಎಫ್ಐಡಿ ಫ್ರೂಟ್ಸ್ ಐಡಿ (ಎಫ್ಐಡಿ) ಹೊಂದಿರುವುದು ಸೂಕ್ತ.

ಆ ಎಫ್ಐಡಿ ಗುರುತಿನ ಸಂಖ್ಯೆಯೊಂದಿಗೆ ರೈತನು ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಿರಬೇಕು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ಕೃಷಿಗೆ ಪೂರಕವಾದ ಇಲಾಖೆಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಅಧೀನ ಕಚೇರಿಗಳಲ್ಲಿ ರೈತರ ಫ್ರೂಟ್ಸ್ ಐಡಿ ಸೃಷ್ಟಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ಇಷ್ಟಿದ್ದರೂ ಸಹ ರೈತರು ಇದರ ಸದುಪಯೋಗ ಪಡೆಯಲು ಮುಂದೆ ಬರದೇ ಇರುವುದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಸರ್ಕಾರದ ಆದೇಶದಂತೆ ಈ ಪೋರ್ಟಲ್ನಲ್ಲಿ ಕೃಷಿಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳದೇ ಇದ್ದರೆ ಆತನಿಗೆ ವಿವಿಧ ಕೃಷಿ ಪೂರಕ ಇಲಾಖೆಗಳ ಸೌಲಭ್ಯ, ಬೆಳೆ ಸಾಲ, ಬರ ಪರಿಹಾರದ ಹಣ ಪಡೆಯಲು, ಬೆಳೆ ವಿಮೆ, ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಮಾರಾಟ ಹಾಗೂ ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುವುದಿಲ್ಲ, ಎಲ್ಲ ದಾಖಲೆಗಳಿದ್ದರೂ 'ಫ್ರೂಟ್ಸ್' ಪೋರ್ಟಲ್ನಲ್ಲಿ ಹೆಸರು ನೊಂದಾವಣೆ ಮಾಡಿಕೊಳ್ಳದಿದ್ದರೆ ಸರ್ಕಾರದ ಕೃಷಿ ಸೌಲಭ್ಯಗಳಿಂದ ರೈತರು ವಂಚಿತರಾಗುತ್ತಾರೆ.
ಫ್ರೂಟ್ಸ್ ಎಂದರೆ ಫಾರ್ಮರ್ ರೆಜಿಸ್ಟ್ರೇಷನ್ ಅಂಡ್ ಯುನಿಫೈಡ್ ಬೆನೆಫಿಶಿಯರಿ ಇನ್ಫಾರ್ಮೇಷನ್ ಸಿಸ್ಟಮ್, ಇದು ಕೃಷಿ ಇಲಾಖೆಗೆ ಸಂಬಂಧಿಸಿದ ಹಾಗೂ ಕೃಷಿಕರ ಮಾಹಿತಿಯನ್ನು ಒಂದೇ ಸೂರಿನಡಿ ಹಿಡಿದಿಟ್ಟುಕೊಳ್ಳುವ ಪೋರ್ಟ್ಲ್ ಆಗಿದೆ. ರೈತರು ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಈ ಪೋರ್ಟಲ್ನಲ್ಲಿ ನೋದಾಯಿಸಿದಾಗ ರೈತನಿಗೆ ಎಫ್.ಐ.ಡಿ. ನಂಬರ್ ದೊರೆಯುತ್ತದೆ.
ಒಬ್ಬ ವ್ಯಕ್ತಿಗೆ ಆಧಾರ್ ಕಾರ್ಡ್ ಗುರುತಿನ ಚೀಟಿ ಹೇಗಿದಿಯೋ ಅದರಂತೆಯೇ ರೈತನಿಗೂ ಎಫ್ಐಡಿ ಗುರುತಿನ ಚೀಟಿ ಇದ್ದಂತೆಯೇ, ಇದರಲ್ಲಿ ಜಮೀನು ವಿವರ ಹಾಗೂ ತಾನು ಬೆಳೆದ ಬೆಳೆಗಳ ವಿವರನ್ನು ಒಳಗೊಂಡ ವೆಬ್ ಪೋರ್ಟಲ್ ಆಗಿದೆ. ಸರ್ಕಾರದಿಂದ ದೊರೆಯುವ ಕೃಷಿ ಸೌಲಭ್ಯ ಪಡೆದುಕೊಳ್ಳಲು ಮಾಹಿತಿ ನೋಂದಾಯಿಸಿದರೆ ರೈತರಿಗೆ ಒಳಿತಾಗಲಿದೆ.
ಸರ್ಕಾರದ ಸೌಲಭ್ಯ ಪಡೆಯಲು ಎಫ್ಐಡಿ ಕಡ್ಡಾಯ ಈ ನಿಟ್ಟಿನಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಪಿಡಿಒ ಹೆಚ್ಚಿನ ಕಾಳಜಿ ವಹಿಸಿ ಎಫ್ಐಡಿ ಮಾಡಿಸಿಕೊಳ್ಳದೆ ಇರುವ ರೈತರಿಂದ ಪಹಣಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಪ್ರತಿ, ಮೊಬೈಲ್ ಸಂಖ್ಯೆ ಪಡೆದು ಅವರಿಗೂ ಎಫ್ಐಡಿ ಮಾಡಿಸಿಕೊಡಬೇಕು ಎಂಬ ನಿಯಮವಿದೆ. ಅದರಂತೆ, ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದಲೇ ಜಾಹಿರಾತು ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದೆ, ಇಷ್ಟಾದರೂ ಸಹ ಕೆಲವು ರೈತರು ಆಸಕ್ತಿ ತೋರುತ್ತಿಲ್ಲ?
ಕೆಲವರು ಹೊರಗಡೆಯಿಂದ ಬಂದು ಬಂಡವಾಳ ಹೂಡಿ ರೈತರಿಂದ ಜಮೀನು ಖರೀದಿಸಿರುತ್ತಾರೆ ಅವರಿಗೆ ಯಾವ ಪರಿಹಾರವೂ ಬೇಕಿಲ್ಲವೇನೋ, ಇನ್ನೂ ಕೆಲವರು ತಮ್ಮ ಆಸ್ತಿವಿವರ ಬಹಿರಂಗ ಆಗುತ್ತದೆಯೇನೋ ಎಂಬ ತಪ್ಪು ಕಲ್ಪನೆಯಿಂದ ದೂರು ಉಳಿದಿರಬಹುದು? ಎಂಬುದನ್ನು ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಮಾತಾಗಿದೆ.
ಫ್ರೂಟ್ಸ್ ಐಡಿ ಅಂದರೇ ರೈತರಿಗೆ ಗೊತ್ತಿಲ್ಲ?
ಡಿಜಿಟಲ್ ವ್ಯವಸ್ಥೆಯ ಬಗ್ಗೆಯೇ ನಮ್ಮ ರೈತರಿಗೆ ಗೊತ್ತಿಲ್ಲ, ಬರ ಪರಿಹಾರ ಸೇರಿದಂತೆ ವಿವಿಧ ಯೋಜನೆಗಳಿಗೆ ಅಗತ್ಯವಾಗಿ ಗ್ರಾಮೀಣ ಭಾಗದ ರೈತರಿಗೆ ಫ್ರೂಟ್ಸ್ ಐಡಿ ಬೇಕು ಎಂಬುದು ಎಷ್ಟು ಜನಕ್ಕೆ ತಿಳಿದಿದೆ, ಕೃಷಿ ಇಲಾಖೆಯವರು ಸಮರ್ಪವಾಗಿ ಮಾಹಿತಿ ನೀಡಿಲ್ಲ, ಈಗ ಏಕಾಏಕಿ ಕಳೆದ ತಿಂಗಳು ಕೊನೆ, ಈ ತಿಂಗಳು ಕೊನೆ ಎಂದರೆ ಏನರ್ಥ? ನಮಗೆ ಸಮಯಕೊಡಿ, ನಿಮ್ಮ ಗ್ರಾಮೀಣ ವ್ಯಾಪ್ತಿಯ ರೈತರ ಮನೆಮನೆಗೆ ಹೋಗಿ ಅರಿವು ಮೂಡಿಸಿ, ಇನ್ನಾದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಸಮರ್ಪಕವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿ ಕಳುಹಿಸಲಿ, ಹಾಗಿದ್ದರೆ ಮಾತ್ರ ಇದು ಯಶಸ್ವಿ ಆಗುತ್ತದೆ. ಯಾರೋ ಒಬ್ಬರು ತಪ್ಪು ಮಾಹಿತಿ ನೀಡುತ್ತಾರೋ ಅಥವಾ ನೀಡುವುದಿಲ್ಲವೋ ಅದು ಬೇಡದೇ ಇರೋ ವಿಷಯ, ಅಗತ್ಯ ಮಾಹಿತಿ ನೀಡುವಂತೆ ರೈತರನ್ನು ಪ್ರೇರೇಪಿಸಿ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ
| ಕ್ರಮ ಸಂಖ್ಯೆ | ತಾಲ್ಲೂಕು | ಒಟ್ಟು ತಾಕುಗಳ ಸಂಖ್ಯೆ | ಸೇರ್ಪಡೆಯಾಗಿರುವ | ಬಾಕಿ ತಾಕುಗಳ ಸಂಖ್ಯೆ |
| 1 | ಮಂಡ್ಯ | 330505 | 185216 | 145289 |
| 2 | ಮದ್ದೂರು | 279243 | 169878 | 109365 |
| 3 | ಮಳವಳ್ಳಿ | 256012 | 140614 | 115398 |
| 4 | ಶ್ರೀರಂಗಪಟ್ಟಣ | 104500 | 61522 | 42978 |
| 5 | ಪಾಂಡವಪುರ | 153293 | 96778 | 56515 |
| 6 | ಕೆ.ಆರ್.ಪೇಟೆ | 260250 | 171740 | 88510 |
| 7 | ನಾಗಮಂಗಲ | 344281 | 190281 | 154000 |
| 8 | ಒಟ್ಟು | 1728084 | 1016029 | 712055 |












Click it and Unblock the Notifications