ಮೇಲುಕೋಟೆ ದೇಗುಲದ ಅಗ್ನಿಅವಘಡ ತಂದ ಆತಂಕ!
ಮಂಡ್ಯ, ಜೂನ್ 08: ಮೇಲುಕೋಟೆಯ ಶ್ರೀ ಯೋಗನರಸಿಂಹಸ್ವಾಮಿ ಬೆಟ್ಟದ ರಾಜಗೋಪುರದ ಬಾಗಿಲಿಗೆ ಬೆಂಕಿ ತಗುಲಿದ ಪರಿಣಾಮ ಲಘು ಪ್ರಮಾಣದಲ್ಲಿ ಹಾನಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಚಂದ್ರಗ್ರಹಣದ ದಿನದಂದು ಈ ದುರ್ಘಟನೆ ನಡೆದಿದೆ. ಈ ಘಟನೆಯನ್ನು ಕೆಲವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿಕೊಂಡು ಆತಂಕ ಪಡುತ್ತಿರುವುದು ಕೆಲವೆಡೆ ಕಂಡು ಬರುತ್ತಿದೆ. ಬಾಗಿಲಿಗೆ ಬೆಂಕಿ ತಗುಲಲು ಭಕ್ತರು ಬಾಗಿಲ ಮೇಲೆ ಕರ್ಪೂರ ಹಚ್ಚಿದ್ದೇ ಕಾರಣ ಎನ್ನಲಾಗುತ್ತಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ದೇವಾಲಯದಲ್ಲಿ ಒಂದೆರಡು ಸಿಬ್ಬಂದಿ ಮಾತ್ರ ಇದ್ದರೆಂದು ಹೇಳಲಾಗುತ್ತಿದ್ದು, ಅವರು ರೂಢಿಯಂತೆ ರಾಜಗೋಪುರದ ಬಾಗಿಲು ಮತ್ತು ಒಳಭಾಗದ ಬಾಗಿಲು ಹಾಕಿ ದೇವಾಲಯದ ಒಳಾವರಣದಲ್ಲಿದ್ದರು. ಪೂಜೆ ಮುಗಿದು ಬಾಗಿಲು ಹಾಕಿದ ನಂತರ ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ ಭಕ್ತರು ಬಾಗಿಲ ಮೇಲೆ ಕರ್ಪೂರ ಹಚ್ಚಿ, ಆ ಬೆಂಕಿ ಬಾಗಿಲಿಗೆ ತಗುಲಿದೆ.

ಬಾಗಿಲಲ್ಲಿ ಬೆಂಕಿಯ ಹೊಗೆ ಕಾಣಿಸಿಕೊಂಡ ತಕ್ಷಣ ನಂದಿಸಿದ್ದರಿಂದ ಅನಾಹುತ ತಪ್ಪಿದೆ. ಚೆಲುವನಾರಾಯಣಸ್ವಾಮಿ ದೇವಾಲಯದಂತೆ ಗೋಪುರದ ಬಾಗಿಲಲ್ಲಿ ಸಿಪಾಯಿ, ಒಳಭಾಗದಲ್ಲಿ ಕಾವಲುಗಾರರು ಎಚ್ಚರವಹಿಸಿ ಕರ್ತವ್ಯ ನಿರ್ವಹಿಸಬೇಕಿದ್ದರೂ ಈ ನಿಯಮವನ್ನು ಯೋಗನರಸಿಂಹಸ್ವಾಮಿ ಪಾಲಿಸದೆ ಇರುವುದೇ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಅಗ್ನಿ ಅನಾಹುತ ನಡೆದಿದ್ದರಿಂದ ಆಗಮೋಕ್ತ ವಿಧಿ-ವಿಧಾನಗಳನ್ನು ನೆರವೇರಿಸಿ ಶಾಂತಿಹೋಮ ಹಾಗೂ ಅಭಿಷೇಕ ನಡೆಸಿ ಪ್ರಾಯಶ್ಚಿತ್ತ ಮಾಡಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ಘಟನೆ ನಡೆಯಲು ಸಿಬ್ಬಂದಿಯ ಅಜಾಗರೂಕತೆಯೇ ಕಾರಣವಾಗಿದ್ದು, ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಅಲ್ಲದೆ ಸಶಸ್ತ್ರ ಪೊಲೀಸರನ್ನು ದೇವಾಲಯದ ಭದ್ರತೆಗೆ ನಿಯೋಜಿಸಬೇಕೆಂಬ ಆಗ್ರಹವೂ ಕೇಳಿ ಬಂದಿದೆ.












Click it and Unblock the Notifications