ಅಪಘಾತವಾದ ವ್ಯಕ್ತಿಗೆ ನೆರವಾದ ದರ್ಶನ್ ಪುಟ್ಟಣ್ಣಯ್ಯ
ಮೇಲುಕೋಟೆ, ಮೇ 01: ಅಪಘಾತಕ್ಕೀಡಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಗೆ ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ನೆರವಾಗಿದ್ದಾರೆ. ದರ್ಶನ್ ಅವರ ಮಾನವೀಯತೆಗೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿ ಬಂದಿದೆ.
ಮೇಲುಕೋಟೆ ಕ್ಷೇತ್ರ : ರೈತರ ಪಾಲಿನ ಏಕೈಕ ಆಶಾಕಿರಣ
ರಸ್ತೆ ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಡ್ಯ ತಾಲೂಕು ಬಿ.ಹಟ್ನ ಗ್ರಾಮದ ಶಂಕರ್ (32) ಎಂದು ಗುರುತಿಸಲಾಗಿದೆ.
ತಮ್ಮ ಗದ್ದೆಯಲ್ಲಿ ಕೆಲ್ಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಶಂಕರ್ ಅವರಿಗೆ ಸೋಮವಾರ ರಾತ್ರಿ ವೇಳೆ ಸಾರಿಗೆ ಬಸ್ ಡಿಕ್ಕಿ ಹೊಡೆದಿತ್ತು. ರಸ್ತೆ ಮಧ್ಯೆ ಬಿದ್ದಿದ್ದ ಶಂಕರ್ ಅವರನ್ನು ಕಂಡ ದರ್ಶನ್ ಅವರು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ್ದಾರೆ.
ದಿವಂಗತ ರೈತನಾಯಕ ಕೆ.ಎಸ್ .ಪುಟ್ಟಣ್ಣಯ್ಯನವರ ಮಗ ದರ್ಶನ್ ಪುಟ್ಟಣ್ಣಯ್ಯ ಅವರು ಮಂಡ್ಯದಿಂದ ದುದ್ದ ಹೋಬಳಿಯ ಬೇವುಕಲ್ಲು ಗ್ರಾಮಕ್ಕೆ ಪ್ರಚಾರ ಕಾರ್ಯಕ್ಕೆ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಭಾರಿ ಮಳೆ, ಗಾಳಿಯ ನಡುವೆ ಸಾಗುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಯಾರು ಸಹಾಯಕ್ಕೆ ಬಾರದೆ ಶಂಕರ್ ರಸ್ತೆಯ ಪಕ್ಕ ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದನ್ನು ಕಂಡು ದರ್ಶನ್ ನೆರವಿಗೆ ಧಾವಿಸಿದ್ದಾರೆ. ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲದೆ ವೈದ್ಯರ ಜೊತೆ ಮಾತನಾಡಿ ಸೂಕ್ತ ಚಿಕಿತ್ಸೆಗೆ ನೆರವಾಗಿದ್ದಾರೆ.