ಶ್ರೀರಂಗಪಟ್ಟಣದಲ್ಲಿ ದುಪ್ಪಟ್ಟು ವಾಹನ ಶುಲ್ಕ ವಸೂಲಿ:ಆರೋಪ
ಮಂಡ್ಯ, ಮೇ 6: ಮಂಡ್ಯದ ಶ್ರೀರಂಗಪಟ್ಟಣ ದಿನನಿತ್ಯ ಸಾವಿರಾರು ಪ್ರವಾಸಿಗರು ಸಂದರ್ಶಿಸುವ ಪವಿತ್ರ ಸ್ಥಳ. ಇಲ್ಲಿ ನೂರಾರು ವಾಹನಗಳು ದಿನನಿತ್ಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲುತ್ತವೆ. ಆದರೆ ಈ ವಾಹನ ನಿಲುಗಡೆ ಸ್ಥಳದಲ್ಲಿ ನಿಗದಿತ ಮೊತ್ತಕ್ಕಿಂತ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ.
ದೇವಾಲಯದ ಆಡಳಿತ ಮಂಡಳಿಯು ಟೆಂಡರ್ ನಲ್ಲಿ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚು ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.
ಬಸ್, ಮಿನಿ ಬಸ್ ಗೆ 50 ರೂ, ಕಾರು ಜೀಪುಗಳಿಗೆ 30 ರೂ ವಾಹನ ನಿಲುಗಡೆ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ ವಾಹನ ನಿಲುಗಡೆ ಸ್ಥಳದ ಟೆಂಡರ್ ದಾರ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿಗದಿಪಡಿಸಿರುವ ಶುಲ್ಕ ಪ್ರಮಾಣಕ್ಕಿಂತ ಅತ್ಯಧಿಕ ಮೊತ್ತದ ಶುಲ್ಕವನ್ನು ವಾಹನಗಳ ಮಾಲೀಕರು, ಚಾಲಕರಿಂದ ಸಂಗ್ರಹಿಸುತ್ತಿದ್ದಾರೆ. ಇದು ಸ್ಥಳೀಯರು ಹಾಗೂ ವಾಹನ ಚಾಲಕರ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಟೆಂಡರ್ ನಲ್ಲಿ ನಿಗದಿಪಡಿಸಿರುವುದಕ್ಕಿಂತ ಅಧಿಕ ಪ್ರಮಾಣದ ವಾಹನ ನಿಲುಗಡೆ ಶುಲ್ಕವನ್ನು ನಮೂದಿಸಿರುವ ರಶೀದಿಗಳು ಸ್ಥಳೀಯರಿಗೆ ದೊರೆತಿದೆ. ಗುತ್ತಿಗೆದಾರರು ವಾಹನ ಚಾಲಕರಿಂದ ಟೆಂಪೋ ಟ್ರಾವೆಲರ್ ವಾಹನವೊಂದಕ್ಕೆ 100 ರೂ. ಬಸ್ ಒಂದಕ್ಕೆ 150ರಿಂದ 200 ರೂ. ಕಾರು ಮತ್ತು ಜೀಪು 40 ರೂ. ನಿಗದಿಗಿಂತ ದುಪ್ಪಟ್ಟು ಹಣ ವಸೂಲು ಮಾಡುತ್ತಿದ್ದಾರೆ. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಂದ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡಿ ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ.
ಟೆಂಡರ್ ನಲ್ಲಿ ನಿಗದಿಪಡಿಸಿರುವುದಕ್ಕಿಂತ ಅಧಿಕ ಪ್ರಮಾಣದ ವಾಹನ ನಿಲುಗಡೆ ಶುಲ್ಕವನ್ನು, ನಮೂದಿಸಿರುವ ರಶೀದಿಗಳು ಸ್ಥಳೀಯರಿಗೆ ದೊರೆತಿವೆ. ಇನ್ನೊಂದು ಮುಖ್ಯ ವಿಷಯವೆಂದರೆ, ವಾಹನ ನಿಲುಗಡೆ ಪ್ರದೇಶದ ಶುಲ್ಕದ ರಶೀದಿ ವಿಭಿನ್ನವಾಗಿದ್ದು, ಕೆಲವರ ರಶೀದಿಗಳಲ್ಲಿ ಕರ್ನಾಟಕ ಸರ್ಕಾರ ಎಂದು ಮುದ್ರಿಸಿದ್ದಾರೆ. ಇನ್ನು ಕೆಲ ರಶೀದಿಗಳಲ್ಲಿ ರಂಗನಾಥ ದೇವಾಲಯ ಎಂದಷ್ಟೇ ನಮೂದಿಸಲಾಗಿದೆ. ಇದು ಸಹ ಟೆಂಡರ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ದೂರಲಾಗುತ್ತಿದೆ.












Click it and Unblock the Notifications