ಎಸ್.ಎಂ. ಕೃಷ್ಣರ ರಾಜಕೀಯ ಅನುಭವ ಸದ್ಬಳಕೆ ಮಾಡಿಕೊಳ್ಳುವಲ್ಲಿ ಬಿಜೆಪಿ ವಿಫಲ- ಕಾಂಗ್ರೆಸ್ ಆರೋಪ
ಮಂಡ್ಯ ಜನವರಿ 9: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ರಾಜಕೀಯ ಅನುಭವವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಎಸ್. ಗುರುಚರಣ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮಂಡ್ಯ ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಚಿತ್ರದುರ್ಗದಲ್ಲಿ ನಡೆಯಲಿದ್ದ ಕಾಂಗ್ರಗೆಸ್ ಪರಿಶಿಷ್ಟ ಜಾತಿ, ಪಂಗಡಗಳ ಐಕ್ಯತಾ ಸಮಾವೇಶಕ್ಕೆ ಭಾಗವಹಿಸಲು ತೆರಳುತ್ತಿದ್ದ ಬಸ್ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಎಸ್.ಎಂ. ಕೃಷ್ಣ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಆ ಅನುಭವವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಬಿಜೆಪಿ ನಾಯಕರು ಎಡವಿದ್ದಾರೆ. ಹೀಗಾಗಿ ಬೇಸತ್ತ ಕೃಷ್ಣ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಲು ಕಾರಣವಿರಬಹುದು ಎಂದರು.
ರಾಜಕಾರಣದಲ್ಲಿ ನಮ್ಮ ದೊಡ್ಡಪ್ಪ ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ವಿದೇಶಾಂಗ ಸಚಿವರಾಗಿ ಸುದೀರ್ಘವಾಗಿ ರಾಜಕಾರಣ ಮಾಡಿದ್ದಾರೆ. ಅವರು ರಾಜಕಾರಣದಲ್ಲಿ ಇದ್ದಷ್ಟೂ ದಿನವೂ ಸಹ, ಜನರ ಧನಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದೆಲ್ಲವನ್ನೂ ಬಿಜೆಪಿಯವರು ಗಣನೆಗೆ ತೆಗುದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಎಸ್.ಎಂ. ಕೃಷ್ಣ ರಾಜಕೀಯ ನಿವೃತ್ತಿಯ ನಂತರವೂ ಅವರ ಆಶೀರ್ವಾದ ಬಿಜೆಪಿ ಪಕ್ಷದ ಮೇಲಿರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಎಸ್. ಗುರುಚರಣ್, ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗದ ಸಿ.ಟಿ. ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರಿಂದ ಮತಿಭ್ರಮಣೆಗೊಂಡು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ಉಪಸ್ಥಿತರಿದ್ದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಆಶಾಗೋಪಿ ಮಾತನಾಡಿ, ಕರ್ನಾಟಕದ ರಾಜಕೀಯದಲ್ಲಿ ಲಾಭಿ ನಡೆಸದ ವ್ಯಕ್ತಿಯೆಂದರೆ ಎಸ್.ಎಂ. ಕೃಷ್ಣ ಮಾತ್ರ. ಅವರ ಅಸ್ತಿತ್ತವವನ್ನು ಬಳಸಿಕೊಳ್ಳದ ಬಿಜೆಪಿಯವರು ಕೃಷ್ಣ ಅವರಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ನಾಗೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಕಾಂಗ್ರೆಸ್ ಪರಿಶಿಷ್ಟ ಜಾತಿ ಪಂಗಡಗಳ ಜಿಲ್ಲಾಧ್ಯಕ್ಷ ಸುರೇಶ್ಕಂಠಿ, ಮುಖಂಡರಾದ ಎಂ.ಸಿ. ಸಿದ್ದು ಹಾಗೂ ನಾಗಭೂಷಣ್ ಉಪಸ್ಥಿತರಿದ್ದರು.