ಮಂಡ್ಯ ಸಂಸದ ಸಿ ಎಸ್ ಪುಟ್ಟರಾಜು ವಿರುದ್ಧ ಲೋಕಾಯುಕ್ತಕ್ಕೆ ದೂರು!
ಮಂಡ್ಯ, ಜೂನ್ 06 : ಗಣಿಗಾರಿಕೆಯ ಧೂಳು ಇದೀಗ ಜೆಡಿಎಸ್ ಪಕ್ಷಕ್ಕೂ ಮೆತ್ತಿಕೊಳ್ಳುವುದು ಖಚಿತವಾಗುತ್ತಿದೆ. ಚುನಾವಣೆ ಬರುತ್ತಿದ್ದಂತೆಯೇ ಜೆಡಿಎಸ್ ಪಕ್ಷದ ಮುಖಂಡ, ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ವಿರುದ್ಧ ಅಕ್ರಮ ಗಣಿಗಾರಿಕೆಯ ಆರೋಪ ಕೇಳಿಬಂದಿದೆ.
ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಎಂಬುವರು ಇದೀಗ ಸಂಸದ ಸಿ.ಎಸ್.ಪುಟ್ಟರಾಜು ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.[ಶಾಸಕ-ನಟ ಅಂಬರೀಶ್ ಮೇಲೆ ಲೋಕಾಯುಕ್ತಕ್ಕೆ ದೂರು]
ಸುಮಾರು ಎರಡು ದಶಕದಿಂದಲೂ ಚಿನಕುರಳಿ ಹಾಗೂ ಹೊನಗಾನಹಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ಸರ್ಕಾರ ತಕ್ಷಣವೇ ಕ್ರಮ ವಹಿಸಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು. ಇದಕ್ಕೆ ಪ್ರೇರಣೆ ನೀಡಿದ ವಿವಿಧ ಇಲಾಖೆಗಳ ಅಧಿಕಾರಿಗಳ ಮತ್ತು ಸಿಬ್ಬಂದಿ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಲೋಕಾಯುಕ್ತಕ್ಕೆ ಸಮಗ್ರ ದಾಖಲೆಗಳನ್ನು ಸಲ್ಲಿಸಿರುವುದಾಗಿಯೂ ಅವರು ಹೇಳಿದ್ದಾರೆ.
ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದ ಸರ್ವೆ ನಂ.127 ಹಾಗೂ ಚಿನಕುರಳಿ ಗ್ರಾಮದ ಸರ್ವೆ ನಂ.80ರಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವ ಬಗ್ಗೆ ಪರಿಶೀಲನೆ ನಡೆಸಿ ಹೊನಗಾನಹಳ್ಳಿ ಗ್ರಾಪಂಗೆ 22,57,39,500 ರು. ಹಾಗೂ ಚಿನಕುರಳಿ ಗ್ರಾಪಂಗೆ 6,52,90,500 ರು. ರಾಜಧನ ಪಾವತಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದಂಡ ವಿಧಿಸಿದ್ದರು.
ಆದರೆ, ಆ ರಾಜಧನ ಇದುವರೆಗೂ ಪಾವತಿಯಾಗಿಲ್ಲ ಎಂಬ ಮಾಹಿತಿಯನ್ನು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಹೊರ ಹಾಕಿದ್ದಾರೆ.
1994ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಪುಟ್ಟರಾಜು ಅವರು 2004, 2008ರಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಇವರ ಅಣ್ಣ ಚಿಕ್ಕರಾಮೇಗೌಡ ಚಿನಕುರಳಿ ಗ್ರಾಪಂ ಅಧ್ಯಕ್ಷರಾಗಿದ್ದು, ಬಳಿಕ ಅವರ ಮಗ ಸಿ.ಅಶೋಕ್ ಕೂಡ ಗ್ರಾಪಂ ಅಧ್ಯಕ್ಷರಾಗಿದ್ದರು.
ಆಗ ರಾಜಕೀಯ ಪ್ರಭಾವ ಬೀರಿ ಮೆ.ಎಸ್.ಟಿ.ಜೆ. ಸ್ಟೋನ್ ಕ್ರಷರ್ ಹೆಸರಿನಲ್ಲಿ ಕಲ್ಲು ಗಣಿ ಗುತ್ತಿಗೆಗಳನ್ನು ಬೇಬಿ ಬೆಟ್ಟದ ಕಾವಲ್ ಸರ್ವೇ ನಂ.1ರಲ್ಲಿ ಕಲ್ಲು ಗಣಿ ಗುತ್ತಿಗೆ ಸಂಖ್ಯೆ 648ರಲ್ಲಿ 10 ಎಕರೆಯನ್ನು 5 ಜುಲೈ 2003ರಂದು ಹತ್ತು ವರ್ಷಗಳ ಅವಧಿಗೆ ಹಾಗೂ ಕಲ್ಲು ಗಣಿ ಗುತ್ತಿಗೆ ಸಂಖ್ಯೆ 649ರಲ್ಲಿ 11 ನವೆಂಬರ್ 2003ರಂದು 5 ಎಕರೆ 20 ಗುಂಟೆ ಜಮೀನನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮಂಜೂರು ಮಾಡಿಸಿದ್ದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ರಾಜಕೀಯ ಪ್ರಭಾವ ಹಣದ ಆಮಿಷಕ್ಕೆ ಒಳಗಾಗಿ ಅಕ್ರಮ ನಡೆಸಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.