ಪುತ್ರನ ಸಂಸದ ಮಾಡದೆ ಸೈನಿಕನಾಗಿ ಮಾಡಿ: ಸುಮಲತಾ ತಿರುಗೇಟು
Recommended Video

ಮೈಸೂರು, ಏಪ್ರಿಲ್ 14: ದೇಶ ಪ್ರೇಮವಿದ್ದರೆ ಮಾನ್ಯ ಮುಖ್ಯ ಮಂತ್ರಿಗಳು ತನ್ನ ಪುತ್ರನನ್ನು ಮಂಡ್ಯದಿಂದ ಗೆಲ್ಲಿಸಿ ಸಂಸದನ್ನಾಗಿ ಮಾಡುವ ಬದಲಿಗೆ ಸೈನಿಕನಾಗಿ ಮಾಡಬಹುದಿತ್ತು ಎಂದು ಸುಮಲತಾ ಅಂಬರೀಶ್ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ತಾಲೂಕಿನ ಹಲಗೂರು ಹೋಬಳಿಯ ಗೊಲ್ಲರಹಳ್ಳಿ, ಚಿಕ್ಕಎಲಚಗೆರೆ, ದೊಡ್ಡಎಲಚಗೆರೆ, ಬ್ಯಾಡರಹಳ್ಳಿ ಕರಲಕಟ್ಟೆ ಮತ್ತು ಹಲಗೂರಿನಲ್ಲಿರೋಡ್ ಶೋ ಮುಖಾಂತರ ಮತ ಯಾಚಿಸಿ ಹಲಗೂರಿನ ವೃತ್ತದಲ್ಲಿ ಮತನಾಡಿದ ಅವರು ಹಿಂದಿನ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರೈತರಿಗೆ ನೀಡಿದ ಭರವಸೆಗಳು ಸುಳ್ಳು ಎಂಬುದು ಇದೀಗ ಸಾಬೀತಾಗಿದೆ ಎಂದು ಸಿಎಂ ವಿರುದ್ಧ ಹರಿಹಾಯ್ದರು.
ನಾವು ಸುಖವಾಗಿ ಊಟ, ನಿದ್ರೆ, ಮಾಡಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದೇವೆ ಇದಕ್ಕೆ ನಮ್ಮ ದೇಶ ಗಡಿಕಾಯುತ್ತಿರುವ ಸೈನಿಕರೇ ಕಾರಣರಾಗಿದ್ದಾರೆ. ಆದರೆ ನಮ್ಮ ಮುಖ್ಯಮಂತ್ರಿಯವರು ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂಬ ಕೀಳುಮಟ್ಟದ ಮಾತನ್ನಾಡುತ್ತಾರೆ. ಜವಬ್ದಾರಿ ಇರುವವರು ಮಾತನಾಡುವ ಮಾತೇ ಇದು ಎಂದು ಸುಮಲತಾ ಕಿಡಿಕಾರಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದೇಶ ಭಕ್ತಿ ಎಂಬುದು ಇವರಿಗೇನು ಗೊತ್ತಿದೆ. ದೇಶ ಭಕ್ತಿ ಇರುವವರು ಯೋಧರಾಗುತ್ತಾರೆ. ಇವರಿಗೆ ಕಾಳಜಿ ಇದ್ದರೆ ಮಗನನ್ನು ಸಂಸದನನ್ನು ಮಾಡುವ ಬದಲು ಸೈನಿಕನಾಗು ಎಂದು ಹೇಳಬಹುದಿತ್ತಲ್ಲವೆ ಎಂದು ಸುಮಲತಾ ಟಾಂಗ್ ನೀಡಿದರು.

ನನ್ನ ಮೇಲೆ ಮಾಡುತ್ತಿರುವ ಆರೋಪ ಸರೀನಾ?
ಸಿಎಂ ಬರೀ ದಬ್ಬಾಳಿಕೆ ಮತ್ತು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಮಾಧ್ಯಮದವರ ಮೇಲೆ ನಮ್ಮ ಕಾರ್ಯಕರ್ತರು ಹಲ್ಲೆ ನಡೆಸಿದರೆ ನಾನು ಹೊಣೆಗಾರನಲ್ಲ ಎಂಬ ಬೇಜವಬ್ದಾರಿ ಹೇಳಿಕೆ ನೀಡುತ್ತಾರೆ. ನನ್ನ ಮೇಲೆ ನಾನೇ ಕಲ್ಲು ಹೊಡೆಸಿಕೊಂಡು ನಾನೇ ಅವರ ಮೇಲೆ ಆರೋಪ ಮಾಡುತ್ತೇನೆ ಎನ್ನುವ ಆರೋಪ ಮಾಡುತ್ತೇನೆ ಎಂದು ಹೇಳುತ್ತಾರಲ್ಲ ಇದು ಸರೀನಾ ಎಂದು ಸುಮಲತಾ ಪ್ರಶ್ನಿಸಿದರು.

ಅಂಬರೀಶ್ ಕನಸು ನನಸು ಮಾಡುವೆ
ಇಡೀ ಸರ್ಕಾರವನ್ನು ಎದುರು ಹಾಕಿಕೊಂಡು ನಾನೊಬ್ಬಳೇ ನಿಮ್ಮ ಧೈರ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ ಇದು ಇತಿಹಾಸವಾಗಲಿದೆ. ನನ್ನನ್ನು ಆಶೀರ್ವದಿಸಿ, ಜಿಲ್ಲೆಯ ಅಭಿವೃದ್ಧಿಗೆ ಅಂಬರೀಶ್ ಅವರು ಏನು ಕನಸು ಕಂಡಿದ್ದಾರೋ ಅದನ್ನು ನನಸು ಮಾಡುವ ಆಸೆ ಹೊಂದಿದ್ದು, ನಿಮ್ಮ ಸಹಕಾರ ನೀಡಿ ಎಂದು ಸುಮಲತಾ ಅವರು ಜನರಲ್ಲಿ ಮನವಿ ಮಾಡಿದರು.

ಕುತಂತ್ರ ರಾಜಕಾರಣಿಗಳನ್ನು ದೂರವಿಡಿ
ಡಾ.ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಸ್ಮಾರಕ ಮಾಡಿಸಲು ಈಗ ನೆನಪಾಗುತ್ತಿದೆ, ಇಲ್ಲಿಯವರೆಗೂ ಎಲ್ಲಿ ಹೋಗಿತ್ತು ಈ ಅಭಿಮಾನ? ಎಂದ ಸುಮಲತಾ ಅಭಿಮಾನಿಗಳು ದಡ್ಡರಲ್ಲ, ಅವರು ಸಹ ಎಲ್ಲವನ್ನೂ ನೋಡುತ್ತಿದ್ದಾರೆ. ಈ ರೀತಿಯ ಕುತಂತ್ರ ರಾಜಕಾರಣಿಗಳನ್ನು ದೂರವಿಡಿ ಎಂದು ತಿಳಿಸಿದರು.

ಗಮನ ಸೆಳೆಯುತ್ತಿರುವ ಸುಮಲತಾ
ಮಂಡ್ಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬರೀಶ್ ಪತ್ನಿ ಸುಮಲತಾ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಒಂದೆಡೆ ಕ್ಷೇತ್ರದ ಎಂಟು ಜೆಡಿಎಸ್ ಶಾಸಕರು ನಿಖಿಲ್ ಗೆಲುವಿಗೆ ತಂತ್ರ ರೂಪಿಸುತ್ತಿದ್ದರೆ, ಇನ್ನೊಂದೆಡೆ ಸುಮಲತಾ ಏಟಿಗೆ ಎದಿರೇಟು ನೀಡುತ್ತಾ ಗಮನ ಸೆಳೆದಿದ್ದಾರೆ.












Click it and Unblock the Notifications