ತವರು ಬೂಕನಕೆರೆಗೆ ಹೊರಟ ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಜುಲೈ 27: ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹುಟ್ಟೂರು ಬೂಕನಕೆರೆ ಕಡೆಗೆ ತೆರಳಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ನಿವಾಸದಿಂದ ಜಕ್ಕೂರು ಏರ್ಬೇಸ್ ತೆರಳಿದ್ದು, ಮಂಡ್ಯ ಜಿಲ್ಲೆಯ, ಕೆಆರ್ ಪೇಟೆಯಲ್ಲಿರುವ ಬೂಕನಕೆರೆಗೆ ಇಂದು ಭೇಟಿ ನೀಡಲಿದ್ದಾರೆ.
ಯಡಿಯೂರಪ್ಪ ಎಂಬ ಹೆಸರಿನವನಾದ ನಾನು ಬೂಕನಕೆರೆಯಿಂದ ಬಂದವನು...!
ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಒಂದು ವರ್ಷದಿಂದ ಹಲವು ಕಸರತ್ತುಗಳ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಮತ್ತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಯಡಿಯೂರಪ್ಪ ಅವರು ಬೆಳಗ್ಗೆ 9.30ಕ್ಕೆ ದವಳಗಿರಿ ನಿವಾಸದಿಂದ ತೆರಳಿದ್ದಾರೆ, ವಿಶೇಷ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿದ್ದಾರೆ. ಬೂಕನಕೆರೆ ಗವಿಮಠದ ಸಿದ್ದಲಿಂಗ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಬಳಿಕ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು ಮೇಲು ಕೋಟೆಯಿಂದ ಮಧ್ಯಾಹ್ನ 2.20ಕ್ಕೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರು ರಾಜಕೀಯ ನೆಲೆ ಕಂಡವರು. ಆದರೆ ಅವರ ಹುಟ್ಟೂರು ಬೂಕನಕೆರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಿಂದ 13 ಕಿ.ಮೀ ದೂರದಲ್ಲಿರುವ ಬೂಕನಕೆರೆ ಸಣ್ಣ ಊರು. ಇಲ್ಲೇ ಸಮೀಪದ ಭೂ ವರಾಹ ಸ್ವಾಮಿ ದೇವಸ್ಥಾನ ಪ್ರಮುಖ ಐತಿಹ್ಯ ಸ್ಥಳವಿದೆ.
ಐದಾರು ಸಾವಿರ ಜನಸಂಖ್ಯೆಯಿರುವ ಬೂಕನಕೆರೆಯಲ್ಲಿ 500-600 ಕುಟುಂಬಗಳು ಈಗ ವಾಸವಿದೆ.