ಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ಹರಾಜು
ಮಂಡ್ಯ, ಡಿಸೆಂಬರ್ 9: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಈಗಾಗಲೇ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಆ ಮೂಲಕ ಸ್ಥಳೀಯ ಜನರು ಅಧಿಕಾರಕ್ಕೇರಲು ಹಲವು ಕಾರ್ಯತಂತ್ರಗಳನ್ನು ಮಾಡುತ್ತಿದ್ದಾರೆ.
ಆದರೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವದ ಅನರ್ಥವಾಗುತ್ತಿದ್ದು, ಅವಿರೋಧವಾಗಿ ಆಯ್ಕೆ ಮಾಡುವ ನೆಪದಲ್ಲಿ, ಗ್ರಾಮ ಪಂಚಾಯತಿ ಅಭ್ಯರ್ಥಿ ಸ್ಥಾನವನ್ನು ಹರಾಜು ಹಾಕಲಾಗುತ್ತಿದೆ.
ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ಮೂರು ಕಾಸಿಗೆ ಹರಾಜಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯತ್ವ ಸ್ಥಾನಗಳು ಲಕ್ಷ-ಲಕ್ಷ ರೂ. ಗಳಿಗೆ ಹರಾಜು ಮಾಡಲಾಗಿದ್ದು, ಜಿಲ್ಲೆಯ ಲಾಳನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರಕೆರೆ ಗ್ರಾಮದ 3 ಸ್ಥಾನಗಳು ಬಹಿರಂಗವಾಗಿ ಹರಾಜು ಮಾಡಲಾಯಿತು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಲಾಳನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರಕೆರೆ ಗ್ರಾಮದಲ್ಲಿ ಕುರಿ-ಮೇಕೆಗಳ ಹರಾಜಿನ ರೀತಿ ಗ್ರಾ.ಪಂ ಸ್ಥಾನಗಳು ಹರಾಜು ಹಾಕಲಾಯಿತು.
ಮನೆಯೊಂದರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಿದರಕೆರೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮೂರು ವಾರ್ಡ್ ಗಳಿಗೆ ಹರಾಜು ಮಾಡಿದ್ದು, ಗ್ರಾ.ಪಂ ಸ್ಥಾನಗಳನ್ನು ಹರಾಜು ಹಾಕುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಇದೀಗ ಮತದಾರರು ಚುನಾವಣಾಧಿಕಾರಿಗಳ ನಡೆಯನ್ನು ಗಮನಿಸುತ್ತಿದ್ದಾರೆ.












Click it and Unblock the Notifications