ಕೊರೊನಾ ಪರೀಕ್ಷೆ ನಡೆಸಲು ಹೋದಾಗ ನಿಂದನೆ: ಆಶಾ ಕಾರ್ಯಕರ್ತೆ ಆತ್ಮಹತ್ಯೆ ಯತ್ನ
ಶ್ರೀರಂಗಪಟ್ಟಣ, ಏಪ್ರಿಲ್ 24: ಕೊರೊನಾ ಪರೀಕ್ಷೆ ನಡೆಸಲು ಹೋಗಿದ್ದ ಸಂದರ್ಭ ಆಶಾ ಕಾರ್ಯಕರ್ತೆಯೊಬ್ಬರನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಆತನ ತಂದೆ ಹೀಯಾಳಿಸಿದ್ದು, ಇದರಿಂದ ಮನನೊಂದ ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಠಾಣಾ ವ್ಯಾಪ್ತಿಯ ಹುರಳಿ ಕ್ಯಾತನಹಳ್ಳಿ ಗ್ರಾಮದಲ್ಲಿ ಗುರುವಾರ ಆಶಾ ಕಾರ್ಯಕರ್ತೆ ಮೀನಾಕ್ಷಿ ಎಂಬುವರು ಕೊರೊನಾ ಪರೀಕ್ಷೆ ನಡೆಸಲು ತೆರಳಿದ್ದರು. ಈ ಸಂದರ್ಭ ಕೋಪಗೊಂಡ ಗ್ರಾಪಂ ಸಿಬ್ಬಂದಿ ಹಾಗೂ ಆತನ ತಂದೆ ಆಕೆ ವಿರುದ್ಧ ಹರಿಹಾಯ್ದಿದ್ದಾರೆ. ನಂತರ ಗ್ರಾಮದಲ್ಲಿ ಸೇರಿದ ಕೆಲ ಜನ ಕಾರ್ಯಕರ್ತೆಯನ್ನು ನಿಂದಿಸಿದ್ದಾರೆ.
ಈ ಘಟನೆಯಿಂದ ಮನನೊಂದು ಮೀನಾಕ್ಷಿ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈಚೆಗೆ ಮೈಸೂರಿನ ಮಹದೇಶ್ವರ ನರ್ಸಿಂಗ್ ಹೋಂನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಆಗ ಹುರಳಿ ಕ್ಯಾನತಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಆ ಆಸ್ಪತ್ರೆಗೆ ಹೋಗಿ ಬಂದಿದ್ದರು. ಹೀಗಾಗಿ ಆ ಮಾಹಿತಿಯಿಂದ ಆಶಾಕಾರ್ಯಕರ್ತೆ ಮೀನಾಕ್ಷಿ ಅವರು ಗ್ರಾಮಕ್ಕೆ ಪರೀಕ್ಷೆ ಮಾಡುವ ಸಲುವಾಗಿ ಬಂದಿದ್ದರು.

ಮೀನಾಕ್ಷಿ ಅವರು ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿದ್ದ ಇವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ. ಅರಕೆರೆ ಪೊಲೀಸ್ ಠಾಣೆಯ ದೂರು ದಾಖಲಾಗಿದೆ.
ಮೀನಾಕ್ಷಿ ಅವರನ್ನು ನೋಡಲು ಮಾಜಿ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿದ್ದರು."ಆಶಾ ಕಾರ್ಯಕರ್ತೆಯರಿಗೆ ತೊಂದರೆ ಕೊಡುವ ಪ್ರಕರಣ ಹೆಚ್ಚಾಗುತ್ತಿದೆ. ಅವರಿಗೆ ಸೂಕ್ತ ಭದ್ರತೆ ನೀಡಬೇಕಿದೆ. ಸರ್ಕಾರಕ್ಕೆ ಗಂಭೀರತೆ ಇಲ್ಲ" ಎಂದು ಟೀಕಿಸಿದ್ದಾರೆ.












Click it and Unblock the Notifications