ಒಂದು ವಾರದಲ್ಲಿ ಮಂಡ್ಯದ ನಾಲ್ವರು ಜೆಡಿಎಸ್ ಕಾರ್ಯಕರ್ತರ ಕೊಲೆ!
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಳ ಜಗಳ ಮುಂದುವರೆದಿದ್ದು. ಕೇವಲ ಒಂದು ವಾರದಲ್ಲಿ 4 ಜೆಡಿಎಸ್ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಸಾಲು-ಸಾಲು ಕೊಲೆಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿದೆ ಎಂದು ಹೇಳಲ
ಮಂಡ್ಯ, ಜನವರಿ. 02 : ಸಕ್ಕರೆ ನಾಡು ಮಂಡ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿಕ್ಕಪುಟ್ಟ ವಿಚಾರಗಳಿಗೂ ಹೆಣ ಬೀಳಿಸುವ ಮಟ್ಟಿಗೆ ಪರಿಸ್ಥಿತಿ ಬಂದು ನಿಂತಿದೆ.
ಸಣ್ಣ ವಿಚಾರಗಳು ರಾಜಕೀಯ ರೂಪ ಪಡೆದುಕೊಂಡು ಬಲಿಪಡೆಯುವ ಮಟ್ಟಕ್ಕೆ ಹೋಗುತ್ತಿವೆ. ಒಂದು ವಾರದಲ್ಲಿ ನಾಲ್ಕು ಮಂದಿ ಜೆಡಿಎಸ್ ಕಾರ್ಯಕರ್ತರು ಹೆಣವಾಗಿ ಹೋಗಿದ್ದಾರೆ.
ಡಿಸೆಂಬರ್ 24ರಂದು ಬೆಳಗ್ಗೆ ಜೆಡಿಎಸ್ ಕಾರ್ಯಕರ್ತ ಕುಮಾರ್ ಅಲಿಯಾಸ್ ಕೇಬಲ್ ಕುಮಾರ್ ನನ್ನು ಹಣಕಾಸಿನ ವಿಚಾರದಲ್ಲಿ ಅಪ್ರಾಪ್ತ ಹುಡುಗರು ಹಾಡಹಗಲೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು,
ಡಿಸೆಂಬರ್ 25ರಂದು ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ನೀರಿನ ವಿಚಾರಕ್ಕೆ ಆರಂಭವಾದ ಜಗಳ ರಾಜಕೀಯಕ್ಕೆ ತಿರುಗಿ ಹಳೇ ದ್ವೇಷವನ್ನು ಜೆಡಿಎಸ್ ಕಾರ್ಯಕರ್ತರಾದ ನಂದೀಶ್ ಮತ್ತು ಮುತ್ತುರಾಜ್ ಅವರನನ್ನು ಮುಗಿಸುವ ಮೂಲಕ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಹಂತಕರು ಬಲಿಪಡೆದಿದ್ದರು.
ಆ ಕಿಚ್ಚು ಇನ್ನೂ ಆರಿಲ್ಲ ಅದಾಗಲೇ ಡಿಸೆಂಬರ್ 31ರ ರಾತ್ರಿ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿಯಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತ ಹರೀಶ್ ಅಲಿಯಾಸ್ ಗುಂಡನನ್ನು ಅದೇ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಕೊಲೆ ಮಾಡಿದ್ದಾರೆ.
ಸದ್ಯ ನಾಲ್ಕು ಮಂದಿ ಜೆಡಿಎಸ್ ಕಾರ್ಯಕರ್ತರು ಬಲಿಯಾಗಿದ್ದು, ಇದು ಹೀಗೆಯೇ ಮುಂದುವರೆದರೆ ಜೀವನ ಮಾಡೋದಾದ್ರು ಹೇಗೆ ಎಂಬ ಭಯ ಜಿಲ್ಲೆಯ ಜನತೆಯನ್ನು ಕಾಡತೊಡಗಿದೆ.
ಬೇರೆಡೆಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ ದರೋಡೆ, ವೇಶ್ಯಾವಾಟಿಕೆ, ಕೊಲೆಗಳು ಹೆಚ್ಚಾಗುತ್ತಿದ್ದು, ಅಪರಾಧ ಪ್ರಕರಣವನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಗುಪ್ತದಳ ಇಲಾಖೆಯ ವೈಫಲ್ಯ ಜಿಲ್ಲೆಯಲ್ಲಿ ರೌಡಿಸಂ ತಲೆ ಎತ್ತಲು ಕಾರಣವಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಹೊಂದಿದ್ದು ಎರಡು ಪಕ್ಷಗಳು ತಮ್ಮ ಹಿಡಿತ ಸಾಧಿಸಲು ಪ್ರಯತ್ನ ಪಡುತ್ತಿವೆ.
ಈ ನಡುವೆ ನಾಯಕರು ಬೆಚ್ಚಗೆ ಮಲಗಿದ್ದರೆ ಗ್ರಾಮಗಳಲ್ಲಿ ರಾಜಕೀಯ ದ್ವೇಷಗಳು ಹೊಗೆಯಾಡುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಒಬ್ಬರನೊಬ್ಬರು ಕತ್ತಿ ಮಸೆಯುತ್ತಿದ್ದಾರೆ.
ಕಳೆದೊಂದು ವರ್ಷದ ಹಿಂದೆ ನಡೆದ ಗ್ರಾಪಂ ಚುನಾವಣೆಯ ಸಂದರ್ಭ ಹುಟ್ಟಿಕೊಂಡು ದ್ವೇಷದ ಕಿಡಿ ಇನ್ನೂ ಹೊಗೆಯಾಡುತ್ತಲೇ ಇದ್ದು, ಕಾರಣವಲ್ಲದ ಕಾರಣಗಳಿಗೆ ಬಲಿತೆಗೆದುಕೊಂಡು ಗ್ರಾಮಗಳಲ್ಲಿ ಅಶಾಂತಿಯನ್ನು ಹುಟ್ಟು ಹಾಕುತ್ತಿದೆ.
ಮದ್ದೂರಿನ ತೊಪ್ಪನಹಳ್ಳಿಯಲ್ಲಿ ನಡೆದ ಘಟನೆಯನ್ನು ಹತ್ತಿರದಿಂದ ನೋಡಿದ ಮಂದಿ ಇನ್ನೂ ಸುಧಾರಿಸಿಕೊಂಡಿಲ್ಲ. ಆಗಲೇ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತ ಹರೀಶ್ ನನ್ನು ಬಲಿ ಪಡೆಯಲಾಗಿದೆ.
ಕೊಲೆ ಮಾಡಿದ ಯೋಗೇಶ್ ಹಾಗೂ ರಕ್ಷಿತ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಯುತ್ತಿದೆ. ಆದರೆ ಗ್ರಾಮದಲ್ಲಿ ಪರಿಸ್ಥಿತಿ ಮಾತ್ರ ಬಿಗುವಿನಿಂದ ಕೂಡಿದೆ.
ಘಟನೆಯ ಬಳಿಕ ಉದ್ರಿಕ್ತಗೊಂಡ ಜನ ಕಾಂಗ್ರೆಸ್ ಕಾರ್ಯಕರ್ತರ ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಒಂದು ಎತ್ತಿನಗಾಡಿ, ಟಾಟಾ ಏಸ್, ಒಂದು ಅಶೋಕ್ ಲೈಲ್ಯಾಂಡ್ ವಾಹನ ಸುಟ್ಟು ಹೋಗಿದೆ.
ಉದ್ರಕ್ತರನ್ನು ನಿಯಂತ್ರಿಸಲು ಹೋದ ಡಿವೈಎಸ್ಪಿ ಜನಾರ್ಧನ್ ಅವರ ಮೇಲೆಯೂ ಖಾರದ ಪುಡಿ ಎರಚಲಾಗಿದೆ. ಸಧ್ಯ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿರುವುದರಿಂದ ಪರಿಸ್ಥಿತಿ ತಹಬದಿಗೆ ಬಂದಿದೆಯಾದರೂ ಯಾವಾಗ ಏನಾಗಬಹುದೆಂಬ ಭಯ ಜನತೆಯನ್ನು ಕಾಡುತ್ತಿದೆ.