ಕೆರೆಗಳಿಗೆ ನೀರು ತುಂಬಿಸ್ತಾ ಇರೋದೇ ಸುಮಲತಾ, ನಾವು ಅಡ್ಡಾಡ್ಕೊಂಡು ಇದ್ದೀವಿ
Recommended Video
ಮಂಡ್ಯ, ಅ 16: "ಮಂಡ್ಯಲ್ಲಿ ನಮ್ಮದೇನಿದೆ, ಮಳವಳ್ಳಿಯ ಕೆರೆಗಳಿಗೆ ನೀರು ತುಂಬಿಸುತ್ತಾ ಇರೋದೇ ಸುಮಲತಾ ಮೇಡಂ" ಎಂದು ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ವ್ಯಂಗ್ಯವಾಡಿದ್ದಾರೆ.
"ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡ್ರನ್ನು ಬಿಟ್ಟು, ಮಿಕ್ಕ ಯಾವ ಶಾಸಕರೂ ಕೆಲಸ ಮಾಡುತ್ತಿಲ್ಲ. ಸುಮ್ಮನೆ ವೈಟ್ ಎಂಡ್ ವೈಟ್ ಬಟ್ಟೆ ಹಾಕಿಕೊಂಡು ಅಡ್ಡಾಡಿಕೊಂಡಿದ್ದೇವೆ" ಎಂದು ಅನ್ನದಾನಿ, ವ್ಯಂಗ್ಯವಾಗಿ ಸುಮಲತಾಗೆ ತಿರುಗೇಟು ನೀಡಿದ್ದಾರೆ.
"ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಗೆದ್ದೆ ಎಂದು, ಎಂಟು ಜನ ಶಾಸಕರು ಕೆಲಸ ಮಾಡಬಾರದು ಎನ್ನುವ ಕಾನೂನು ಏನಾದರೂ ಇದೆಯಾ" ಎಂದು ಸುಮಲತಾ, ಎರಡು ದಿನಗಳ ಹಿಂದೆ ಹೇಳಿಕೆಯನ್ನು ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅನ್ನದಾನಿ, "ಕೆರೆಗೆ ನೀರು ತುಂಬಿಸುವುದು ಅವರೇ, ಕೆರೆಗೆ ಪೂಜೆ ಮಾಡುವುದೂ ಅವರೇ.. ನಮ್ಮದೇನಿದ್ದರೂ, ಊಟಮಾಡಿಕೊಂಡು ಹಾಯಾಗಿ ತಿರುಗಾಡಿಕೊಂಡಿರುವುದು" ಎಂದು ಹೇಳಿದ್ದಾರೆ.
"ಇಡೀ ನಮ್ಮ ಮಳವಳ್ಳಿ ತಾಲೂಕಿನ ಕೆಲಸಗಳನ್ನೆಲ್ಲಾ ಅವರೇ ತಮ್ಮ ಹೆಗಲ ಮೇಲೆ ಹಾಕಿಕೊಂಡು ಮಾಡಿಕೊಂಡು ಬರುತ್ತಿದ್ದಾರೆ. ನಾವೇನೂ ಇಲ್ಲಿ ಕೆಲಸಕಾರ್ಯಗಳನ್ನು ಮಾಡುತ್ತಿಲ್ಲ" ಎಂದು ಅನ್ನದಾನಿ ವ್ಯಂಗ್ಯವಾಡಿದ್ದಾರೆ.
"ನಮ್ಮ ಮೇಡಂಗೆ (ಸುಮಲತಾ) ಸಿಕ್ಕಾಪಟ್ಟೆ ರಾಜಕೀಯ ಪ್ರಬುದ್ದತೆಯಿದೆ. ಹಾಗಾಗಿಯೇ, ಅವರು ಚುನಾವಣೆಯಲ್ಲಿ ಗೆದ್ದಿದ್ದು" ಎಂದು ಅನ್ನದಾನಿ, ಸುಮಲತಾ ವಿರುದ್ದ ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.












Click it and Unblock the Notifications