ಅಗ್ನಿಪಥ್ ವಿರೋಧಿಸಿ ಹಿಂಸಾಚಾರ: ಕಾಶಿಯಲ್ಲಿ ಅತಂತ್ರರಾದ ಮಂಡ್ಯ ಪ್ರವಾಸಿಗರು
ಮಂಡ್ಯ, ಜೂ.19: ಅಗ್ನಿಪಥ್ ಯೋಜನೆ ವಿರುದ್ಧ ನಡೆಯುತ್ತಿರುವ ಹಿಂಸಾಚಾರದಿಂದ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಪ್ರವಾಸಕ್ಕೆಂದು ಕಾಶಿಗೆ ತೆರಳಿದ್ದ ಮಂಡ್ಯದ 70 ಮಂದಿ ತವರಿಗೆ ವಾಪಸಾಗದೆ ಕಾಶಿಯಲ್ಲೇ ಅತಂತ್ರರಾಗಿದ್ದಾರೆ.
ಕಾಶಿಯಲ್ಲಿರುವ ಜಂಗಮ ಮಠದಲ್ಲಿ ಆಶ್ರಯ ಪಡೆದಿರುವ ಮಂಡ್ಯದ ಜನರು ರಕ್ಷಣೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಇನ್ನೂ ಗಲಾಟೆ, ಹಿಂಸಾಚಾರ ಕಡಿಮೆಯಾಗಿಲ್ಲ. ರೈಲುಗಳ ಸಂಚಾರ ಯಾವಾಗ ಆರಂಭವಾಗಲಿದೆ ಎನ್ನುವುದು ತಿಳಿಯದೆ ಪರಿತಪಿಸುತ್ತಿದ್ದಾರೆ.

ಅಗ್ನಿಪಥ್ ಯೋಜನೆ ವಿರುದ್ಧ ಭುಗಿಲೆದ್ದ ಗಲಾಟೆ
ಮಂಡ್ಯದ 72 ಮಂದಿಯ ತಂಡ ಜೂ.9ರಂದು ಉತ್ತರ ಪ್ರದೇಶದ ಕಾಶಿ ಮತ್ತು ಅಯೋಧ್ಯೆ ಪ್ರವಾಸ ಕೈಗೊಂಡಿದ್ದರು. ಯಾತ್ರೆ ಸಮಯದಲ್ಲಿ ವಾರಣಸಿಯ ಆದಿಚುಂಚನಗಿರಿ ಮಠದಲ್ಲಿ ನೆಲೆಸಿದ್ದರು. ಯಾತ್ರೆ ಮುಗಿಸಿಕೊಂಡು ಜೂ.17ರಂದು ತವರಿಗೆ ವಾಪಸಾಗಬೇಕಿತ್ತು. ಅಷ್ಟರಲ್ಲಿ ಉತ್ತರ ಪ್ರದೇಶದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ಆಕ್ರೋಶ ಭುಗಿಲೆದ್ದಿತು. ಉದ್ರಿಕ್ತರು ರೈಲುಗಳು ಮತ್ತು ರೈಲು ನಿಲ್ದಾಣಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಿದ್ದರಿಂದ ಬೆಂಗಳೂರಿಗೆ ವಾಪಸಾಗಲು ಟಿಕೆಟ್ ಬುಕ್ ಆಗಿದ್ದ ಸಂಗಮಿತ್ರ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದುಗೊಂಡಿತು.
ಇದರಿಂದ ರೈಲು ನಿಲ್ದಾಣಕ್ಕೆ ಬಂದವರು ಅಲ್ಲಿಂದ ಮತ್ತೆ ವಾರಣಸಿಗೆ ವಾಪಸಾದರು. ಮತ್ತೆ ಆದಿ ಚುಂಚನಗಿರಿ ಮಠದಲ್ಲಿ ಆಶ್ರಯ ಪಡೆಯಲು ಹೋದಾಗ ಅಲ್ಲಿ ಭರ್ತಿಯಾಗಿತ್ತು. ಕರ್ನಾಟಕ ಭವನದಲ್ಲೂ ಜಾಗ ಸಿಗಲಿಲ್ಲವೆಂದು ತಿಳಿದುಬಂದಿದೆ.

ಸಿಕ್ಕ ಸಿಕ್ಕ ಕಡೆಗಳಲ್ಲಿ ವಾಸ್ತವ್ಯ
ಕಾಶಿಯಲ್ಲಿ ನಿಲ್ಲಲು ನೆಲೆ ಇಲ್ಲದೆ ಇದೀಗ ಜಂಗಮ ಮಠದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಲ್ಲಿಯೂ ಸಹ ಕಿಕ್ಕಿರಿದ ಜನಸಂದಣಿ ಇದ್ದು, ಹೊರರಾಜ್ಯಗಳಿಂದ ಬಂದವರು ತವರಿಗೆ ಹೋಗಲಾರದೆ ಸಿಕ್ಕ ಸಿಕ್ಕ ಕಡೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಜಂಗಮಮಠದಲ್ಲಿ ಒಂದೇ ಒಂದು ಕೊಠಡಿ ದೊರಕಿದ್ದು, ಅದರಲ್ಲಿ ಐವರು ಮಾತ್ರ ಉಳಿಯಬಹುದಾಗಿದೆ. ಉಳಿದವರೆಲ್ಲರೂ ಮಠದ ಆವರಣದಲ್ಲಿ ನೆಲೆಸಿದ್ದಾರೆ.
ಮಠದಲ್ಲಿ ಬೆಳಗ್ಗೆ ಮತ್ತು ಸಂಜೆ ಊಟವಿದ್ದರೂ ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಜೇಬಿನಲ್ಲಿದ್ದ ಹಣವನ್ನು ಶಾಪಿಂಗ್ಗೆ ಖರ್ಚು ಮಾಡಿಕೊಂಡಿದ್ದಾರೆ. ಹೊರಗೆ ತಿಂಡಿ-ಊಟ ಮಾಡುವುದಕ್ಕೂ ಹಲವರ ಬಳಿ ದುಡ್ಡಿಲ್ಲ. ಅಲ್ಲಿಂದ ತಮ್ಮ ಸ್ನೇಹಿತರು, ಸಂಬಂಧಿಕರಿಗೆ, ಮಕ್ಕಳಿಗೆ ದೂರವಾಣಿ ಕರೆ ಮಾಡಿ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಖರ್ಚಿಗೆ ದಾರಿ ಮಾಡಿಕೊಂಡಿದ್ದಾರೆ.

ಸರಿಯಾದ ಸಮಯಕ್ಕೆ ಸಿಗದ ಊಟ
ಪ್ರವಾಸಕ್ಕೆ ತೆರಳಿರುವವರಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರೂ ಹೆಚ್ಚಿದ್ದಾರೆ. 8-10 ದಿನಕ್ಕೆ ತೆಗೆದುಕೊಂಡು ಹೋಗಿದ್ದ ಮಾತ್ರೆಗಳು ಖಾಲಿಯಾಗಿವೆ. ಸರಿಯಾದ ಸಮಯಕ್ಕೆ ಊಟ ಸಿಗುತ್ತಿಲ್ಲ. ಇಲ್ಲಿನ ಮಾತ್ರೆಗಳು ಅಲ್ಲಿ ಸಿಗದಿರುವುದರಿಂದ ಸಮಸ್ಯೆಯಾಗಿದೆ. ಮಳೆಯೂ ಜೋರಾಗಿ ಬರುತ್ತಿದ್ದು ಮಠದ ಮೂಲೆಯಲ್ಲಿ ಮುದುಡಿಕೊಂಡು ಕೂರುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಕಾಶಿಯಲ್ಲಿ ಅತಂತ್ರರಾದವರು ಹೇಳುವ ಮಾತಾಗಿದೆ. ಕಾಶಿಯಿಂದ ಬಸ್ ಮೂಲಕ ಮತ್ತೊಂದು ರಾಜ್ಯಕ್ಕೆ ಬರುವುದಕ್ಕೂ ಹೆದರುತ್ತಿದ್ದಾರೆ. ದಾರಿ ಮಧ್ಯೆ ಗಲಾಟೆ ಹೆಚ್ಚಾದರೆ ಇನ್ನೂ ಅತಂತ್ರಸ್ಥಿತಿ ಎದುರಿಸಬೇಕಾಗಲಿದೆ ಎಂಬ ಕಾರಣಕ್ಕೆ ಕಾಶಿಯಲ್ಲೇ ಉಳಿದುಕೊಂಡು ರೈಲು ಸಂಚಾರ ಆರಂಭಗೊಳ್ಳುವ ಸಮಯಕ್ಕೆ ಎದುರುನೋಡುತ್ತಿದ್ದಾರೆ.

ಹಣವಿಲ್ಲದೆ ರೈಲಿಗಾಗಿ ಕಾದು ಕುಳಿತ ಮಂದಿ
ಕಾಶಿ ಮತ್ತು ಅಯೋಧ್ಯೆಗೆ ಪ್ರವಾಸಕ್ಕೆ ತೆರಳಿದವರಲ್ಲಿ ಹತ್ತು ಮಂದಿ ವಿಮಾನದ ಮೂಲಕ ತವರು ಸೇರಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ ಎಂದು ಕೆಲವರು ತಿಳಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ ಹೆಚ್ಚು ಹಣ ತಂದವರು ವಿಮಾನದಲ್ಲಿ ತೆರಳುವುದಕ್ಕೆ ಮುಂದಾಗಿದ್ದು, ಹಣವಿಲ್ಲದವರು ರೈಲಿಗಾಗಿ ಕಾದು ಕುಳಿತಿದ್ದಾರೆ. ರೈಲು ಯಾವಾಗ ಆರಂಭವಾಗಲಿದೆಯೋ ಎನ್ನುವುದು ಅವರಿಗೇ ಗೊತ್ತಿಲ್ಲದೆ, ಇದ್ದ ಸ್ಥಳದಲ್ಲಿಯೇ ರಕ್ಷಣೆಗೆ ಮನವಿ ಮಾಡುತ್ತಿದ್ದಾರೆ.











Click it and Unblock the Notifications