ಕಬ್ಬಿನ ಬೆಲೆ ನಿಗದಿ ಬೆಂಬಲಿಸಿ ರೈತರ ಹೋರಾಟಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಸಾಥ್
ಮಂಡ್ಯ, ನವೆಂಬರ್29: ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂಪಾಯಿ ನಿಗದಿ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ 23ನೇ ದಿನ ಪೂರೈಸಿದೆ.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸ್ವಾಮೀಜಿ ಬೆಂಬಲದಿಂದ ಈ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ರೈತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೈತರ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ದೇಶದ ಆಹಾರ ಸಾರ್ವಭೌಮತ್ವದಲ್ಲಿ ಕೃಷಿ ಹಾಗೂ ರೈತರು ಮಹತ್ವದ ಪಾತ್ರ ವಹಿಸುತ್ತಾರೆ. ಆದರೆ ಪ್ರಸ್ತುತ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನಿಷ್ಟ ಲಾಭವೂ ಸಿಗದಾಗ ಕೃಷಿಯಿಂದ ವಿಮುಖವಾಗುವ ನಿರ್ಧಾರ ಮಾಡುತ್ತಾರೆ. ಯುವಜನರು ಗ್ರಾಮೀಣ ಪ್ರದೇಶವನ್ನು ತೊರೆದು ವಲಸೆ ಹೋಗುವಂತಾಗುತ್ತದೆ. ಮಾತ್ರವಲ್ಲದೆ ಆಹಾರ ಸಾರ್ವಭೌಮತ್ವಕ್ಕೆ ಧಕ್ಕೆಯುಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ಅವರು, ರೈತರು ಬೆಳೆ ಬೆಳೆಯಲು ಖರ್ಚು ಮಾಡುತ್ತಿರುವ ದರಕ್ಕೂ ಹಾಗೂ ಬರುತ್ತಿರುವ ಹಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಾಕಿದ ಬಂಡವಾಳವೂ ಸಿಗದಂತಹ ಸ್ಥಿತಿ ಬರುತ್ತಿದೆ. ಪರಿಣಾಮ ರೈತರಿಗೆ ಸಮಸ್ಯೆಯಾಗುತ್ತಿರುವುದರಿಂದ ಸರ್ಕಾರ ನೆರವಿಗೆ ಬರಬೇಕು. ಈ ಹಿನ್ನೆಲೆಯಲ್ಲಿ ಆದಾಯ ಮತ್ತು ಖರ್ಚಿನ ವ್ಯತ್ಯಾಸ ಗಮನಿಸಿ ಎಸ್ಎಪಿ ದರ ನೀಡಲು ಕ್ರಮ ವಹಿಸಬೇಕು. ಕೃಷಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಲು ನೆರವಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ. ಇನ್ನು ಕಬ್ಬು ಹಾಗೂ ಹಾಲಿನ ದರ ನಿಗದಿ ಸಂಬಂಧ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಲಾಗುವುದು ಎಂದು ಭರವಸೆ ನೀಡಿದರು.
ಕಬ್ಬಿನ ಬೆಲೆ ನಿಗದಿಗೆ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲಿಸಿ ಮಂಡ್ಯ ತಾಲೂಕು ಹಳೇಬೂದನೂರು, ಚಿಕ್ಕಮಂಡ್ಯ, ಹಲ್ಲೇಗೆರೆ, ಉಪ್ಪಾರಕನಹಳ್ಳಿ ಗ್ರಾಮಸ್ಥರು ಹಾಗೂ ಕೀರೆಮಡಿ ಒಕ್ಕೂಟದ ಮಹಿಳೆ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ರೈತ ಮಹಿಳೆಯರು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದರು.
23ನೇ ದಿನದ ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಪ್ರಸನ್ನ ಎನ್.ಗೌಡ, ಶಿವಳ್ಳಿ ಚಂದ್ರು, ಪುಟ್ಟಸ್ವಾಮಿ, ಮಧು, ಅಪ್ಪಾಜಿ, ಸರಿತಾ, ಶೋಭಾ, ಶ್ರುತಿ, ಸುಜಾತಾ, ದೀಪಿಕಾ, ಲಿಂಗರಾಜು, ಮಹಾಲಿಂಗೇಗೌಡ, ಪಾಪಣ್ಣ, ಸುಬ್ಬಣ್ಣ, ವಕೀಲ ಬೂದನೂರು ಬೊಮ್ಮಯ್ಯ ಸೇರಿದಂತೆ ಇತರ ರೈತರು ಭಾಗಿಯಾಗಿದ್ದರು.












Click it and Unblock the Notifications