11 Nomination Rejected in Mandya: ಮಂಡ್ಯ ಜಿಲ್ಲೆಯಲ್ಲಿ 11 ನಾಮಪತ್ರಗಳು ತಿರಸ್ಕೃತ: ಇಲ್ಲಿದೆ ಸಂಪೂರ್ಣ ವಿವರ
ಮಂಡ್ಯ, ಏಪ್ರಿಲ್ 21: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಚುನಾವಣೆಗೆ ಇಲಾಖೆಗೆ ಸಲ್ಲಿಕೆಯಾಗಿದ್ದ 11 ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕರುನಾಡು ಪಕ್ಷದ ಹೆಚ್.ಕೆ ಕೃಷ್ಣ ನಾಮಪತ್ರ, ಪಕ್ಷೇತರ ಅಭ್ಯರ್ಥಿ ಆರ್.ನಾಗೇಶ್ ನಾಮಪತ್ರ, ಭಾರತೀಯ ಬೆಳಕು ಪಕ್ಷದ ನಾಗರಾಜಮೂರ್ತಿ ಸಿ.ಎಂ ನಾಮಪತ್ರ ಸೇರಿದಂತೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 03 ನಾಮತ್ರಗಳು ತಿರಸ್ಕೃತವಾಗಿದೆ. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 03 ನಾಮಪತ್ರಗಳು ತಿರಸ್ಕೃತವಾಗಿದ್ದು, ಆಮ್ ಆದ್ಮಿ ಪಕ್ಷದ ಮಂಜುಳ, ಪಕ್ಷೇತರ ಅಭ್ಯರ್ಥಿ ಎನ್ ಸಿ ಪುಟ್ಟರಾಜು, ಪಕ್ಷೇತರ ಅಭ್ಯರ್ಥಿ ನದೀಂ ಬೇಗ್ ನಾಮಪತ್ರಗಳು ತಿರಸ್ಕೃತವಾಗಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಪುಟ್ಟಸ್ವಾಮಿ ಅವರ ನಾಮಪತ್ರ ತಿರಸ್ಕೃತವಾಗಿದೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಪುಷ್ಪ ಬಿ ನಾಮಪತ್ರ ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದು, ಮೇಲುಕೋಟೆ, ನಾಗಮಂಗಲ ಹಾಗೂ ಕೆ.ಆರ್. ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಯಾವುದೇ ನಾಮಪತ್ರಗಳು ತಿರಸ್ಕೃತವಾಗಿಲ್ಲ ಎಂದು ವಿವರಿಸಿದ್ದಾರೆ.
ರಾಜಕೀಯ ಸಭೆ, ಸಮಾರಂಭಗಳ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
ಮಂಡ್ಯ: ಜಿಲ್ಲೆಯಲ್ಲಿ ರ್ಯಾಲಿ, ರಾಜಕೀಯ ಸಭೆ, ಸಮಾರಂಭಗಳು ನಡೆಯುತ್ತಿದೆ. ಚುನಾವಣಾಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ವಹಿಸುವಂತೆ ಎಂದು ಜಿಲ್ಲಾಧಿಕಾರಿ ಡಾ: ಹೆಚ್.ಎನ್. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
ರಾಜಕೀಯ ಪಕ್ಷಗಳು ವಿವಿಧ ಸಭೆ ಸಮಾರಂಭಗಳಿಗೆ ಅನುಮತಿ ನೀಡುವಾಗ ಸುವಿಧಾ ಆ್ಯಪ್ ಮೂಲಕ ನೀಡಬೇಕು. ಅನುಮತಿಯನ್ನು ಕಡ್ಡಾಯವಾಗಿ ಚುನಾವಣಾಧಿಕಾರಿಗಳು ಮಾತ್ರ ನೀಡಬೇಕು ಎಂದು ತಿಳಿಸಿದರು.
ಅಂಚೆ ಮತದಾನಕ್ಕೆ 12 ಡಿ ಅರ್ಜಿಯನ್ನು 80ಕ್ಕಿಂತ ಹೆಚ್ಚಿನ ವಯೋಮಾನ, ವಿಕಲಚೇತನರು, ಅಗತ್ಯ ಸೇವಾ ವಲಯದ ಮತದಾರರು, ಮತಗಟ್ಟೆ ಅಧಿಕಾರಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಂಗಡಿಸಿ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು ತಿಳಿಸಿದರು.
ಮತಗಟ್ಟೆ ಸಿಬ್ಬಂದಿಗೆ ಮೇ 2ರಂದು ತರಬೇತಿ ನಡೆಯಲಿದ್ದು, ತರಬೇತಿ ನಡೆಯುವ ಸ್ಥಳದಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಹಾಗೂ ಸಂಜೆ 5 ರ ನಂತರ ಮತದಾನಕ್ಕೆ ಅವಕಾಶವಿರುವುದಿಲ್ಲ. ಮೇ 3, 4, ಮತ್ತು 5 ರಂದು ತಾಲೂಕು ಕಚೇರಿ ಅಥವಾ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸ್ಥಳ ನಿಗದಿ ಮಾಡಿ ಅಗತ್ಯ ಸೇವಾ ವಲಯ ಹಾಗೂ ತರಬೇತಿಯ ದಿನ ಅಂಚೆ ಮತದಾನ ಮಾಡಲು ಸಾಧ್ಯವಾಗದೆ ಇರುವ ಮತಗಟ್ಟೆ ಸಿಬ್ಬಂದಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಸ್.ಹೆಚ್.ಕೀರ್ತನ, ಮಂಡ್ಯ ತಹಶೀಲ್ದಾರ್ ವಿಜಯ್ಕುಮಾರ್, ನಗರಸಭಾ ಆಯುಕ್ತ ಆರ್. ಮಂಜುನಾಥ್, ಮುಡಾ ಆಯುಕ್ತರಾದ ಐಶ್ವರ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್. ನಿರ್ಮಲ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications