Deepavali 2024: ದೀಪಾವಳಿಯಂದು ಗುಹ್ಯದ ಕಾವೇರಿ ನದಿಯಲ್ಲಿ ಸ್ನಾನ ಮಾಡುವುದೇಕೆ?
ಮಡಿಕೇರಿ, ಅಕ್ಟೋಬರ್ 30: ಕೊಡಗಿನಲ್ಲಿ ಕೇವಲ ಮೂರು ಹಬ್ಬವನ್ನು ಮಾತ್ರ ಆಚರಿಸಲಾಗುತ್ತದೆಯಾದರೂ ಇತರೆ ಹಬ್ಬವನ್ನು ಕೆಲವರು ಆಚರಿಸಿದರೆ ಉಳಿದಂತೆ ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದ್ದು ಆ ದಿನದಂದು ದೇಗುಲಗಳಿಗೆ ತೆರಳಿ ಪೂಜೆ ಮಾಡಿಸಿಕೊಂಡು ಬರಲಾಗುತ್ತದೆ. ಎಲ್ಲೆಡೆ ದೀಪಾವಳಿಗೆ ಪಟಾಕಿ ಸಿಡಿಸಿದರೆ ಕೊಡಗಿನಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಹುತ್ತರಿ ಹಬ್ಬದಂದು ಪಟಾಕಿ ಸಿಡಿಸಲಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಹೊರ ಊರಿನವರು ಬಂದು ನೆಲೆ ನಿಂತ ಕಾರಣ ಅವರವರ ಅನುಕೂಲಕ್ಕೆ ತಕ್ಕಂತೆ ಹಬ್ಬಾಚರಣೆಗಳು ನಡೆಯುತ್ತವೆ.
ಇನ್ನು ದೀಪಾವಳಿಯಂದು ಕೊಡಗಿನ ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ಕೊಡಗಿನ ಗುಹ್ಯದ ಕಾವೇರಿ ನದಿಯಲ್ಲಿ ದೀಪಾವಳಿಯಂದು ಸ್ನಾನ ಮಾಡಿದರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ. ಇಲ್ಲಿ ಪ್ರತಿವರ್ಷವೂ ದೀಪಾವಳಿ ಸಮಯದಲ್ಲಿ ವಾರ್ಷಿಕ ಹಬ್ಬ ನಡೆಯುತ್ತದೆ. ಈ ವೇಳೆ ಐದು ದಿನಗಳ ಕಾಲ ನಡೆಯುವ ಹಬ್ಬ ವಿಶಿಷ್ಟ ವಿಭಿನ್ನವಾಗಿರುತ್ತದೆ. ದೀಪಾವಳಿ ಅಮಾವಾಸ್ಯೆಯಂದು ಇಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮಿಂದರೆ ಪಾಪ ನಾಶವಾಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

ಗುಹ್ಯದಲ್ಲಿ ನರಕ ಚತುರ್ದಶಿಯಂದು ಅಗಸ್ತ್ಯೇಶ್ವರನಿಗೆ ನೆರಪು ಇದ್ದು, ಅಮಾವಾಸ್ಯೆಯಂದು ನಡೆಯುವ ಜಳಕದೊಂದಿಗೆ ಉತ್ಸವವು ಪೂರ್ಣಗೊಳ್ಳುತ್ತದೆ. ಇಲ್ಲಿನ ಗುಹೆಗಳಲ್ಲಿ ಋಷಿಗಳು ತಪಸ್ಸು ಮಾಡಿದ ಕಾರಣ ಗುಹ್ಯ ಎಂಬ ಹೆಸರು ಬಂದಿತೆನ್ನುತ್ತಾರೆ. ಮತ್ತೆ ಕೆಲವರ ಅಭಿಪ್ರಾಯದ ಪ್ರಕಾರ ಕಾವೇರಿ ನದಿಯ ಆಳದಲ್ಲಿ ಹಿಂದಿನ ಕಾಲದ ದೇವಾಲಯವೊಂದು ಮುಳುಗಿ ಹೋಗಿದ್ದು, ಆ ಗುಟ್ಟು ಇನ್ನೂ ಯಾರಿಗೂ ತಿಳಿದಿಲ್ಲವೆಂದು, ಹಾಗಾಗಿ 'ಗುಹ್ಯ' ಹೆಸರು ಬಂದಿದೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ವಿಷ್ಣು ಗುಟ್ಟಾಗಿ ಅಡಗಿದ ಜಾಗ ಗುಹ್ಯವಾಯಿತು ಎನ್ನಲಾಗುತ್ತಿದೆ.
ಅಗಸ್ತ್ಯರ ಕೋರಿಕೆಗೆ ಸ್ಪಂದಿಸಿ ಕಾವೇರಿ
ಇಲ್ಲಿರುವ ಅಗಸ್ತ್ಯ, ದೇವಾಲಯ ವೃತ್ತಾಕಾರದಲ್ಲಿದ್ದು, ಗರ್ಭಗುಡಿಯ ಈಶ್ವರ ಲಿಂಗವು ಸ್ವತಃ ಅಗಸ್ತ್ಯ ಮುನಿಗಳೇ ಪ್ರತಿಷ್ಠಾಪಿಸಿದ್ದು ಎಂಬ ನಂಬಿಕೆ ಭಕ್ತರಲ್ಲಿದೆ. ಅಗಸ್ತ್ಯ ಮುನಿಗಳು ತನ್ನ ಬಳಿಯಲ್ಲಿ ಇಲ್ಲದ ಸಮಯದಲ್ಲಿ ಲೋಕ ಕಲ್ಯಾಣಕ್ಕೆ ಪ್ರಸಕ್ತ ಸಮಯವೆಂದು ತಲಕಾವೇರಿಯಿಂದ ನದಿಯಾಗಿ ಹರಿದು ಬಂದ ಕಾವೇರಿ ಗುಹ್ಯದ ಬಳಿ ಪತಿ ಅಗಸ್ತ್ಯೆಶ್ವರನ ಕೋರಿಕೆ ಮೇರೆಗೆ ನಿಂತು ಬಳಿಕ ಹರಿದ ಸ್ಥಳ ಎನ್ನುವುದು ಇಲ್ಲಿಯ ವಿಶೇಷತೆಯಾಗಿದೆ.

ಗುಹ್ಯದ ಸ್ಥಳ ಮಹಿಮೆ ನೋಡುವುದಾದರೆ ಇಲ್ಲಿ ವಿಷ್ಣುಮೂರ್ತಿ ದೇವಾಲಯವಿದ್ದು, ಇದು ಅಗಸ್ತ್ಯೇಶ್ವರ ದೇವಾಲಯಕ್ಕಿಂತಲೂ ಹಿಂದಿನದು ಎಂದು ಹೇಳಲಾಗಿದೆ. ಈ ದೇವಾಲಯ ನಿರ್ಮಾಣವಾದ ಬಗ್ಗೆ ಒಂದು ರೋಚಕ ಕಥೆಯಿದೆ. ಅದು ಏನೆಂದರೆ? ಹಿಂದೆ ದೇವತೆಗಳ ಕಾಲದಲ್ಲಿ ಲೋಕ ಪಾಲಕ ವಿಷ್ಣು ತನ್ನ ಮದುವೆಗಾಗಿ ಕುಬೇರನಲ್ಲಿ ಸಾಲ ಮಾಡಿದ್ದನಂತೆ. ಸಾಲ ಮಾಡಿದ ಹಣದಲ್ಲಿ ಬಹಳ ಅದ್ದೂರಿಯಾಗಿ ವಿಷ್ಣು ಮದುವೆಯಾಗಿದ್ದನಂತೆ.
ವಿಷ್ಣು ಅಡಗಿ ಕುಳಿತಿದ್ದ ಸ್ಥಳವಂತೆ
ಮದುವೆಯಾದ ಬಳಿಕ ಸಾಲ ತೀರಿಸಬೇಕಲ್ಲವೇ? ಕೊಟ್ಟ ಸಾಲವನ್ನು ಮರಳಿ ಕೊಡುವಂತೆ ಕುಬೇರನೂ ಕೇಳತೊಡಗಿದನಂತೆ. ಕುಬೇರನ ಕಾಟವನ್ನು ತಡೆಯಲಾರದ ವಿಷ್ಣು ದೇವ ಲೋಕದಿಂದ ಭೂಲೋಕದತ್ತ ಓಡಿ ಬಂದು ಗುಹ್ಯದಲ್ಲಿ ಅಡಗಿ ಕುಳಿತನಂತೆ. ವಿಷ್ಣುವನ್ನು ಹುಡುಕಿಕೊಂಡು ಭೂಲೋಕಕ್ಕೆ ಬಂದಿದ್ದ ಕುಬೇರ ಗುಹ್ಯಕ್ಕೂ ಬಂದಿದ್ದ ಎಂಬುದು ಕೆಲವರ ನಂಬಿಕೆ ಇದಕ್ಕೆ ಒತ್ತು ನೀಡುವಂತೆ ವರ್ಷಕ್ಕೊಮ್ಮೆ ಕಾವೇರಿ ನದಿಯಲ್ಲಿ ಮೀನೊಂದು ಕಾಣ ಸಿಗುತ್ತದೆ ಎನ್ನಲಾಗಿದೆ.
ದೀಪಾವಳಿ ಸಮಯದಲ್ಲಿ ಜನರೆಲ್ಲ ಇಲ್ಲಿ ನೆರೆದು ಈಶ್ವರನಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಳ್ಳುತ್ತಾರೆ. ಉಳಿದಂತೆ ಇತರೆ ದಿನಗಳಲ್ಲಿ ಪೂಜಾಕೈಂಕರ್ಯಗಳು ನೆರವೇರುತ್ತಿರುತ್ತವೆ. ಗುಹ್ಯ ಕ್ಷೇತ್ರ ಕೊಡಗಿನ ಸಿದ್ದಾಪುರದಿಂದ ಐದು ಕಿ.ಮೀ. ದೂರದಲ್ಲಿದ್ದು, ಸಿದ್ದಾಪುರದಿಂದ ವೀರಾಜಪೇಟೆ ಮಾರ್ಗವಾಗಿ ಎರಡು ಕಿ.ಮೀ ಕ್ರಮಿಸಿ ಇಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ ಮೂರು ಕಿ.ಮೀ ಸಾಗಿದರೆ ಗುಹ್ಯ ಕ್ಷೇತ್ರವನ್ನು ತಲುಪಬಹುದಾಗಿದೆ.












Click it and Unblock the Notifications