ಟಿಪ್ಪು ಕೊಡವರನ್ನು ಕೊಂದಿಲ್ಲ : ಎ.ಕೆ. ಸುಬ್ಬಯ್ಯ
ಮಡಿಕೇರಿ, ನವೆಂಬರ್ 3: ಟಿಪ್ಪು ಜಯಂತಿಗೆ ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಟಿಪ್ಪು ಜಯಂತಿ ಪರವಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಎ.ಕೆ.ಸುಬ್ಬಯ್ಯ ಬ್ಯಾಟ್ ಬೀಸಿದ್ದಾರೆ.
ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಹಾಲೇರಿ ವಂಶಸ್ಥ ರಾಜಮನೆತನವನ್ನು ಅಧಿಕಾರದಿಂದ ಟಿಪ್ಪು ಪದಚ್ಯುತಗೊಳಿಸಿದ ಮತ್ತು ಟಿಪ್ಪು ಸುಲ್ತಾನ್ ವಿರುದ್ಧ ದಂಗೆ ಎದ್ದವರನ್ನು ಮಾತ್ರ ಆತ ಹತ್ಯೆಮಾಡಿದ್ದಾನೆ ಹೊರತು, ಕೊಡವರನ್ನು ಹತ್ಯೆಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ. ಅಧಿಕಾರ ಕಳೆದುಕೊಂಡಿದ್ದ ಹಾಲೇರಿ ರಾಜವಂಶಸ್ಥರನ್ನು ಪುನರ್ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ರಾಜನಿಷ್ಠೆ ತೋರಿ ದಂಗೆ ಎದ್ದವರನ್ನು ಟಿಪ್ಪು ಸುಲ್ತಾನ್ ಹತ್ಯೆಗೈದಿದ್ದಾನೆ ಹೊರತು ಕೇವಲ ಕೊಡವ ಸಮುದಾಯದವರನ್ನು ಹತ್ಯೆ ಮಾಡಲಿಲ್ಲ್ಲ. ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಟಿಪ್ಪುವಿನ ಸೈನಿಕರೆ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದರು.
ನ.10 ರಂದು ರಾಜ್ಯಾದ್ಯಂತ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ, ಟಿಪ್ಪುವಿನ ಕೀರ್ತಿಗೆ ತಕ್ಕಂತೆ ಶಾಂತಿಯುತವಾಗಿ ಜಯಂತಿ ಆಚರಿಸುವುದನ್ನು ತಾವು ಬೆಂಬಲಿಸುವುದಾಗಿ ಸುಬ್ಬಯ್ಯ ಅವರು ಹೇಳಿದರು.
ಕೆಲವರು ಟಿಪ್ಪು ಜಯಂತಿಯ ವಿರುದ್ಧ ಅಪಸ್ವರ ಎತ್ತಿದ್ದಾರೆ, ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆಯ ದೇವಾಲಯವನ್ನು ನಿರ್ಮಿಸಲು ಮುಂದಾದವರು ಕೊಲೆಯ ಸಿದ್ಧಾಂತವನ್ನು ಪ್ರತಿಪಾದಿಸುವವರೇ ಈ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಸುಬ್ಬಯ್ಯ ಆರೋಪಿಸಿದರು.[ಟಿಪ್ಪು ಜಯಂತಿ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ: ಮೋಹನ್ ದಾಸ್ ಪೈ]
ರಾಜ್ಯ ವ್ಯಾಪಿಯಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುವ ಭರಾಟೆಯಲ್ಲಿ ಕೋಮು ಗಲಭೆಗಳನ್ನು ಹುಟ್ಟುಹಾಕುವ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರ ಇದರಲ್ಲಡಗಿದೆ, ಈ ಹಿನ್ನೆಲೆಯಲ್ಲಿ ಜನತೆಯ ನೆಮ್ಮದಿ ಹಾಗೂ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮವನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕೆಂದು ಸುಬ್ಬಯ್ಯ ಆಗ್ರಹಿಸಿದರು. [ಟಿಪ್ಪು ಜಯಂತಿ ಆಚರಿಸುವ ಉದ್ದೇಶವೇನು: ಹೈಕೋರ್ಟ್ ಪ್ರಶ್ನೆ]
ಸಮಾಜ ಘಾತುಕ ಶಕ್ತಿಗಳ ಮತ್ತು ಜಾತ್ಯಾತೀತ ಶಕ್ತಿಗಳ ಸಂಘರ್ಷಕ್ಕೆ ಟಿಪ್ಪು ಜಯಂತಿಯ ಆಚರಣೆಯು ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸುವ ಶಕ್ತಿಗಳ ವಿರುದ್ಧ ನಡೆಯುವ ಹೋರಾಟ ನಿರಂತರಗೊಳ್ಳಲೆಂದು ತಿಳಿಸಿದರು.
ಮತೀಯ ಶಕ್ತಿಗಳ ಕುತಂತ್ರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ.8 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಾತ್ಯಾತೀತ ಶಕ್ತಿಗಳ ಒಕ್ಕೂಟದಿಂದ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications