ಆಯುಧ ಪೂಜೆ ದಿನ ಶನಿವಾರಸಂತೆಯಲ್ಲಿ ಭೀಕರ ಹತ್ಯೆ
ಶನಿವಾರಸಂತೆ, ಅಕ್ಟೋಬರ್ 10: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊನೆ ಕೊಲೆಯಲ್ಲಿ ಅಂತ್ಯವಾದ ಘಟನೆ ಆಯುಧ ಪೂಜೆ ದಿನ ನಡೆದಿದೆ. ಇಲ್ಲಿನ ಶನಿವಾರ ಸಂತೆಯ ಗುಂಡೂರಾವ್ ಬಡಾವಣೆ ನಿವಾಸಿ ಶೇಖರ್(45) ಅವರು ಮೃತ ದುರ್ದೈವಿ.
ಸೋಮವಾರ ಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಆಯುಧ ಪೂಜೆಗಾಗಿ ಕಾರ್ ವಾಶ್ ಮಾಡಿಸಲು ಅಬ್ದುಲ್ ರಬ್ಬು ಅವರ ಸರ್ವೀಸ್ ಸೆಂಟರ್ ಗೆ ಶೇಖರ್ ಅವರು ಬಂದಿದ್ದರು. ಬಹಳ ಹೊತ್ತಾದರೂ ತಮ್ಮ ಕಾರನ್ನು ತೊಳೆಯದೆ ಬೇರೆಯವರ ಕಾರನ್ನು ತೊಳೆಯುತ್ತಿದ್ದ ಅಬ್ದುಲ್ ಮೇಲೆ ಶೇಖರ್ ಕೂಗಾಡಿದ್ದಾರೆ. ಇಬ್ಬರಿಗೂ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಅಲ್ಲಿದ್ದ ಸಾರ್ವಜನಿಕರು, ಗ್ಯಾರೇಜಿನ ಹುಡುಗರು ಇಬ್ಬರ ಜಗಳ ಬಿಡಿಸಿದ್ದಾರೆ.

ಆದರೆ, ಅಬ್ದುಲ್ ತನ್ನ ಮನೆಯಿಂದ ಗನ್ ತರೆಸಿಕೊಂಡು ಶೇಖರ್ ಮೇಲೆ ಗುಂಡು ಹಾರಿಸಿದ್ದಾರೆ. ತಕ್ಷಣವೇ ಶೇಖರ್ ಅವರನ್ನು ಆಸ್ಪತ್ರೆಗೆ ಸೇರಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಶೇಖರ್ ಅವರು ಮೃತಪಟ್ಟಿದ್ದು ದೃಢಪಡುತ್ತಿದ್ದಂತೆ ಶೇಖರ್ ಅವರ ಕುಟುಂಬಸ್ಥರು, ಅಭಿಮಾನಿಗಳು ಆಕ್ರೋಶಗೊಂಡು ಸರ್ವೀಸ್ ಸೆಂಟರ್ ಧ್ವಂಸಗೊಳಿಸಿದರು.
ಶನಿವಾರಸಂಸ್ಥೆ ಪೊಲೀಸ್ ಠಾಣೆ ಎದುರು ಶವವನ್ನು ಇಟ್ಟು ನ್ಯಾಯಕ್ಕಾಗಿ ಆಗ್ರಹಿಸಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಬ್ದುಲ್ ರಬ್ಬುನನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.












Click it and Unblock the Notifications