ಶ್ರೀರಂಗಪಟ್ಟಣ-ಗುಡ್ಡೆಹೊಸೂರು; ಶೀಘ್ರವೇ 4 ಪಥ ರಸ್ತೆ ಕಾಮಗಾರಿ ಆರಂಭ
ಮಡಿಕೇರಿ, ಫೆಬ್ರವರಿ 07; ಮಂಡ್ಯದ ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರು ತನಕ 4 ಪಥದ ರಸ್ತೆ ನಿರ್ಮಾಣಕ್ಕೆ ಮೇ ಅಥವಾ ಜೂನ್ ತಿಂಗಳಲ್ಲಿ ಚಾಲನೆ ದೊರೆಯಲಿದೆ. ಸುಮಾರು 4 ಸಾವಿರ ಕೋಟಿ ರೂ.ಗಳ ಯೋಜನೆ ಇದಾಗಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈ ಕುರಿತು ಮಾಹಿತಿ ನೀಡಿದ್ದಾರೆ. "ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಯೋಜನೆಗೆ ಭೂ ಸ್ವಾಧೀನ ಕಾರ್ಯ ಆರಂಭಗೊಂಡಿದೆ. ಎರಡೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ" ಎಂದು ಹೇಳೀದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೊಡಗು ಮತ್ತು ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಿದೆ. ಆ ನಿಟ್ಟಿನಲ್ಲಿ ರಸ್ತೆ, ಸಾರಿಗೆ ಸಂಪರ್ಕಕ್ಕೆ ಒತ್ತು ನೀಡಲಾಗಿದೆ" ಎಂದು ಪ್ರತಾಪ್ ಸಿಂಹ ತಿಳಿಸಿದರು.

Recommended Video
"ಶ್ರೀರಂಗಪಟ್ಟಣ ಬಳಿ ಡಿವಿಯೇಷನ್ ನೀಡಿ, ಶ್ರೀರಂಗಪಟ್ಟಣದಿಂದ ಪಿರಿಯಾಪಟ್ಟಣದ ತನಕ ಪ್ಯಾಕೇಜ್ 3 ಮತ್ತು ಪಿರಿಯಾಪಟ್ಟಣದಿಂದ ಗುಡ್ಡೆಹೊಸೂರು ತನಕ ಪ್ಯಾಕೇಜ್ 2ರಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ" ಎಂದು ಸಂಸದರು 4 ಪಥದ ರಸ್ತೆ ಕಾಮಗಾರಿ ವಿವರಿಸಿದರು.
"ಈ ಯೋಜನೆಯು ದೊಡ್ಡ ಮೊತ್ತದ ಟೆಂಡರ್ ಕಾಮಗಾರಿ ಆಗಿರುವುದರಿಂದ 3 ತಿಂಗಳ ಕಾಲಾವಕಾಶ ಬೇಕಿದೆ. ರಸ್ತೆ ನಿರ್ಮಾಣ ಸಂಬಂಧ ಈಗಾಗಲೇ ಗುರುತಿಸಿರುವ ರಸ್ತೆ ಪಥದ ಮಾರ್ಗದಲ್ಲಿ ಭೂಮಿ ಸೇರಿದಂತೆ ಬೆಲೆ ಬಾಳುವ ಗಿಡ ಮರಗಳಿಗೆ ಬೆಲೆ ನಿಗದಿಮಾಡಿ ಪರಿಹಾರ ನೀಡಬೇಕಿದೆ. ಆ ನಿಟ್ಟಿನಲ್ಲಿ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ" ಎಂದರು.
"ನಾಲ್ಕು ಪಥ ರಸ್ತೆಯ ಹೆಚ್ಚಿನ ಕಾಮಗಾರಿಯು ಮೈಸೂರು ಜಿಲ್ಲೆ ವ್ಯಾಪ್ತಿಗೆ ಬರಲಿದೆ, ಕೊಡಗು ಜಿಲ್ಲೆಯಲ್ಲಿ ಸ್ವಲ್ಪ ಭಾಗ ಮಾತ್ರ ಬರಲಿದೆ. ಒಟ್ಟಾರೆ ಸುಸಜ್ಜಿತ ರಸ್ತೆ ನಿರ್ಮಾಣ ಆಗಲಿದೆ" ಎಂದು ಕೊಡಗು-ಮೈಸೂರು ಸಂಸದರು ಭರವಸೆ ನೀಡಿದರು.
ಬೆಂಗಳೂರು-ಮೈಸೂರು ರಸ್ತೆ; ಸಂಸದ ಪ್ರತಾಪ್ ಸಿಂಹ ಬೆಂಗಳೂರು-ಮೈಸೂರು 10 ಪಥದ ರಸ್ತೆ ಯೋಜನೆ ಬಗ್ಗೆ ಮಾತನಾಡಿದರು. "ಬೆಂಗಳೂರು-ಮೈಸೂರು 10 ಪಥದ ರಸ್ತೆಯು 9500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕಾಮಗಾರಿ ಮುಂದಿನ ದಸರಾ ವೇಳೆಗೆ ಪೂರ್ಣಗೊಳ್ಳಲಿದೆ. ಈ ಯೋಜನೆ 6 ಪಥದ ಎಕ್ಸ್ಪ್ರೆಸ್ ರಸ್ತೆ ಹೊಂದಿರುತ್ತದೆ" ಎಂದರು.
ಮೈಸೂರು ಗ್ಯಾಸ್ ಪೈಪ್ಲೈನ್; ಗ್ಯಾಸ್ ಪೈಪ್ಲೈನ್ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಂಸದರು, "ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಾದ್ಯಂತ ನೀರು ಮಾದರಿಯಲ್ಲಿ ಪ್ರತಿಮನೆಗೂ ಗ್ಯಾಸ್ ಪೈಪ್ಲೈನ್ ಅಳವಡಿಸಬೇಕು ಎಂಬುದು ಅವರ ದೂರದೃಷ್ಟಿ ಆಗಿದೆ" ಎಂದು ಹೇಳಿದರು.
"ಸದ್ಯ ರಾಜ್ಯದ 20 ನಗರಗಳಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಗ್ಯಾಸ್ ಪೈಪ್ಲೈನ್ ಅನ್ನು ಹಂತ ಹಂತವಾಗಿ ಎಲ್ಲಾ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆ ಆಗಲಿದೆ" ಎಂದು ವಿವರಣೆ ನೀಡಿದರು.
ರೈಲ್ವೆ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, "ಕುಶಾಲನಗರದ ವರೆಗೆ ರೈಲು ನಿರ್ಮಾಣ ಕಾಮಗಾರಿ ಆಗಲಿದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ 50ರಷ್ಟು ಹಣ ಭರಿಸಬೇಕಿದೆ. ಸುಮಾರು 1,854 ಕೋಟಿ ರೂ. ಅಂದಾಜು ಮಾಡಲಾಗಿದೆ" ಎಂದರು.
ಈ ಬಾರಿಯ ಬಜೆಟ್ನಲ್ಲಿ ಮೈಸೂರು-ಕುಶಾಲನಗರ ರೈಲು ಯೋಜನೆಗೆ 1000 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಹಿಂದೆ ರೈಲ್ವೆ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ 87.2 ಕಿ. ಮೀ. ಮಾರ್ಗದ ನಿರ್ಮಾಣಕ್ಕೆ 1,854 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಭೂ ಸ್ವಾಧೀನಕ್ಕೆ 247.65 ಹೆಕ್ಟೇರ್ ಒಣ ಭೂಮಿ ಮತ್ತು 275.15 ಹೆಕ್ಟೇರ್ ನೀರಾವರಿ ಭೂಮಿ ಅಗತ್ಯವಿದೆ ಎಂದು ಸಮೀಕ್ಷೆ ಹೇಳಿದೆ.
ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ ಸಂಸದರು, "ಸಮಾನತೆ ಮತ್ತು ಭ್ರಾತೃತ್ವಕ್ಕೆ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರವನ್ನು ಎಲ್ಲರೂ ಪಾಲಿಸಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು" ಎಂದು ಹೇಳಿದರು.












Click it and Unblock the Notifications