ದುಬಾರೆಯ ಕಾವೇರಿ ನದಿಯಲ್ಲಿ ರಾಫ್ಟಿಂಗ್ ಮತ್ತೆ ಆರಂಭ
ಮಡಿಕೇರಿ, ಜುಲೈ 02 : ದುಬಾರೆಯ ಕಾವೇರಿ ನದಿಯಲ್ಲಿ ರಾಫ್ಟಿಂಗ್ ಅನ್ನು ಪುನಃ ಆರಂಭಿಸಲಾಗುತ್ತದೆ. ಒಂದು ತಿಂಗಳಿನಲ್ಲಿ ಜಲಕ್ರೀಡೆ ಆರಂಭವಾಗುವ ನಿರೀಕ್ಷೆ ಇದ್ದು, ಕೊಡಗು ಜಿಲ್ಲಾಡಳಿತ ಹಲವು ಷರತ್ತುಗಳನ್ನು ಹಾಕಿದೆ.
ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ರಾಫ್ಟಿಂಗ್ ಕ್ರೀಡೆ ಆರಂಭಿಸಲು ಹಲವು ಷರತ್ತುಗಳನ್ನು ಹಾಕಿದ್ದಾರೆ. ಜಿಲ್ಲಾಡಳಿತ ದುಬಾರೆಯಲ್ಲಿ ರಾಫ್ಟಿಂಗ್ ನಡೆಸಲು ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಫ್ಟಿಂಗ್ ಆರಂಭಿಸಲು ಹೊಸ ಷರತ್ತುಗಳನ್ನು ಹಾಕಲಾಗಿದೆ. ಅರಣ್ಯ, ಪ್ರವಾಸೋದ್ಯಮ ಇಲಾಖೆಗಳಿಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ದುಬಾರೆಯಲ್ಲಿ ರಾಫ್ಟಿಂಗ್ ಪುನಃ ಆರಂಭಿಸಿದರೆ ಒಂದು ಗುಂಪಿಗೆ 600 ರೂ.ಗಿಂತ ಹೆಚ್ಚಿನ ದರವನ್ನು ನಿಗದಿ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಒಟ್ಟು 48 ದೋಣಿಗಳಿಗೆ ರಾಫ್ಟಿಂಗ್ ಮಾಡಲು ಅವಕಾಶ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಪ್ರಕೃತಿ ನಿರ್ಮಿತ ದ್ವೀಪ, ಕಾವೇರಿ ನದಿ, ಆನೆ ಶಿಬಿರ ಮುಂತಾದ ಕಾರಣಗಳಿಂದಾಗಿ ದುಬಾರೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ದೇಶ-ವಿದೇಶದ ಹಲವು ಪ್ರವಾಸಿಗರು ದುಬಾರೆಗೆ ಆಗಮಿಸುತ್ತಾರೆ. ರಾಫ್ಟಿಂಗ್ ಆರಂಭವಾದ ಬಳಿಕ ದುಬಾರೆಯಲ್ಲಿ ಶುಲ್ಕ ಹೆಚ್ಚು ಎಂದು ಪ್ರವಾಸಿಗರು ದೂರಿದ್ದರು.
ಪ್ರವಾಸಿಗನ ಹತ್ಯೆ : 2018ರಲ್ಲಿ ರಾಫ್ಟಿಂಗ್ ಸಿಬ್ಬಂದಿ ಹೈದರಾಬಾದ್ನಿಂದ ಆಗಮಿಸಿದ್ದ ಪ್ರವಾಸಿಗನ ಮೇಲೆ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಘಟನೆ ಬಳಿಕ ರಾಫ್ಟಿಂಗ್ ಸ್ಥಗಿತಗೊಳಿಸಲಾಗಿತ್ತು.











Click it and Unblock the Notifications