ಕೊಡಗಿನಲ್ಲಿ ತಗ್ಗಿದ ಪ್ರವಾಹ ಮುಂದುವರೆದ ಮಳೆ
ಮಡಿಕೇರಿ, ಜುಲೈ 22 : ಪುನರ್ವಸು ಮಳೆ ಅಬ್ಬರಿಸಿದ ಪರಿಣಾಮ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತಲ್ಲದೆ, ಸಾಕಷ್ಟು ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೀಗ ಮಳೆಯ ಆರ್ಭಟ ಕೊಂಚಮಟ್ಟಿಗೆ ತಗ್ಗಿದಂತೆ ಕಂಡು ಬಂದರೂ ಮಳೆ ಸುರಿಯುತ್ತಲೇ ಇದೆ.
ಪುನರ್ವಸು ಮಳೆ ಮುಗಿದು ಜು.20ರಿಂದ ಪುಷ್ಯ ಮಳೆ ಆರಂಭವಾಗಿದೆ. ಈ ಮಳೆಯೂ ಕೂಡ ಅಬ್ಬರಿಸುವ ಮಳೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಧಾರಾಕಾರ ಮಳೆ ಸುರಿದರು ಅಚ್ಚರಿಪಡುವಂತಿಲ್ಲ. ಆದರೆ, ಈಗಾಗಲೇ ಮಳೆಯಿಂದಾದ ಅನಾಹುತದಿಂದ ಚೇತರಿಸಿಕೊಳ್ಳಲು ಇಲ್ಲಿನವರು ಪರದಾಡುತ್ತಿದ್ದಾರೆ.
ಕೊಡಗಿನಲ್ಲಿ ಮಳೆಯ ರೌದ್ರಾವತಾರಕ್ಕೆ ಬೆಚ್ಚಿದ ಜನರು!
ಕಳೆದ ವಾರ ಸುರಿದ ಮಳೆಯ ಅನಾಹುತದಿಂದಾಗಿ ಇನ್ನೂ ಕೂಡ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಸರಿಯಾಗಿಲ್ಲ. ಚೆಸ್ಕಾಂಗೆ ನೂರಾರು ಕೋಟಿ ಹಾನಿಯಾಗಿದೆ. ತೋಟ, ಗದ್ದೆ, ಮನೆಗಳಿಗೆ ಹಾನಿಯಾಗಿವೆ. ಬಿರುಗಾಳಿಗೆ ಹೆದರಿಕೊಂಡೇ ಜನ ಜೀವನ ಸಾಗಿಸುತ್ತಿದ್ದಾರೆ. ಕಾವೇರಿ ನದಿಯಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಪ್ರಮಾಣ ಇಳಿಕೆಯಾದಂತೆ ಗೋಚರಿಸುತ್ತಿದೆ.
42ಮಿ.ಮೀ. ಮಳೆ : ಬಿಡುವು ನೀಡುತ್ತಾ ಮಳೆ ಸುರಿಯುತ್ತಿದ್ದು ಜಿಲ್ಲೆಯಲ್ಲಿ ಸರಾಸರಿ 42 ಮಿ.ಮೀ. ಮಳೆಯಾಗುತ್ತಿದೆ. ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣವನ್ನು ನೋಡಿದರೆ ಮಡಿಕೇರಿ ತಾಲೂಕಿನಲ್ಲಿ ಮಳೆ ಸ್ವಲ್ಪ ಜಾಸ್ತಿಯಾಗಿದೆ.
ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡರಷ್ಟು ಮಳೆ ಸುರಿದಿದೆ. ಕಳೆದ ಒಂದು ದಿನದ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣವನ್ನು ನೋಡುವುದಾದರೆ ಜಿಲ್ಲೆಯಲ್ಲಿ ಸರಾಸರಿ 42 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 61 ಮಿ.ಮೀ,. ವಿರಾಜಪೇಟೆ ತಾಲೂಕಿನಲ್ಲಿ 21 ಮಿ.ಮೀ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 44 ಮಿ.ಮೀ. ಮಳೆ ಸುರಿದಿದೆ.
11,067 ಕ್ಯುಸೆಕ್ ನೀರು : ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದ್ದು ಸದ್ಯ 11,067 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ ನದಿಗೆ 8600 ಕ್ಯುಸೆಕ್ ಮತ್ತು ನಾಲೆಗೆ 868 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.
ಚಿತ್ರಗಳು : ಹಾರಂಗಿಯಿಂದ ಹಾಲ್ನೊರೆಯುಕ್ಕಿಸುತ್ತಾ ಹರಿದ ನೀರು
ಕೊಡಗಿನಲ್ಲಿ ಮುಂದಿನ ದಿನಗಳು ನಡು ಮಳೆಗಾಲದ ದಿನಗಳಾಗಿದ್ದು, ಈಗಾಗಲೇ ಇಲ್ಲಿ ಕಕ್ಕಡ (ಆಟಿ) ಮಾಸ ಆರಂಭವಾಗಿದೆ. ಈ ಸಮಯದಲ್ಲಿ ಮಳೆಯ ಅಬ್ಬರ ಜಾಸ್ತಿ, ಜತೆಗೆ ಜನಕ್ಕೆ ಕೈತುಂಬಾ ಕೆಲಸ ಕಾರ್ಯಗಳಿರುವ ಸಮಯವಾಗಿದೆ.
ಇದೇ ಸಮಯದಲ್ಲಿ ಇಲ್ಲಿನ ಭತ್ತದ ಗದ್ದೆಗಳಲ್ಲಿ ನಾಟಿ ಕಾರ್ಯಗಳು ನಡೆಯುತ್ತವೆ. ಪುಷ್ಯ ಮತ್ತು ಆಶ್ಲೇಷ ಮಳೆಗಳು ಅಬ್ಬರಿಸಿ ಸುರಿಯುವುದನ್ನು ಕಾಣಬಹುದಾಗಿದೆ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಇನ್ನುವುದು ಇಲ್ಲಿನವರ ಅಭಿಪ್ರಾಯವಾಗಿದೆ.
ಈಗಾಗಲೇ ಮಳೆ ಮಾಡಿದ ಅನಾಹುತದಿಂದ ಚೇತರಿಸಿಕೊಳ್ಳಲಾಗದ ಮಂದಿ ಅಯ್ಯೋ ಮಳೆ ಅಬ್ಬರಿಸಿ ಸುರಿಯದಿದ್ದರೆ ಸಾಕಪ್ಪಾ ಎನ್ನುತ್ತಿದ್ದಾರೆ. ಮಳೆ ಹೆಚ್ಚಾದರೆ ಇಲ್ಲಿನ ಮುಖ್ಯ ಬೆಳೆ ಕಾಫಿ ಉದುರುವ, ಕರಿಮೆಣಸಿಗೆ ಸೊರಗುರೋಗ ಬಾಧಿಸುವ ಭಯವೂ ಕಾಡತೊಡಗಿದೆ.
ಭೂಮಿಯಲ್ಲಿ ಬಿರುಕು : ಮಳೆಯ ಕಾರಣ ಅಂತರ್ಜಲ ಹೆಚ್ಚಾದ ಕಾರಣ ಮತ್ತು ಭೂಮಿ ತೇವಗೊಂಡು ಮಣ್ಣು ಸಡಿಲವಾಗುತ್ತಿರುವುದರಿಂದ ಕೆಲವೆಡೆ ಗುಡ್ಡ ಕುಸಿಯುತ್ತಿದ್ದರೆ ಭೂಮಿ ಬಾಯಿಬಿಡುತ್ತಿದ್ದು, ಇದರಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ.
ಮಡಿಕೇರಿ ಬಳಿಯ ಗಾಳಿಬೀಡು ವ್ಯಾಪ್ತಿಯ ಮೊಣ್ಣಂಗೇರಿ ಬಳಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಪಕ್ಕದ ಮಂಜುನಾಥ್ ಎಂಬುವರ ಮನೆಯಲ್ಲೂ ಬಿರುಕು ಕಾಣಿಸಿದೆ. ಒಟ್ಟಾರೆ ಮಳೆ ಕೊಡಗಿನಲ್ಲಿ ಆತಂಕವನ್ನು ಸೃಷ್ಠಿಸಿದೆ.