ಕೊಡಗಿನ ಐಗೂರಲ್ಲಿ ಕುರಾನ್ ಗೆ ಬೆಂಕಿ: ಪೊಲೀಸ್ ಬಂದೋಬಸ್ತ್
ಮಡಿಕೇರಿ, ನವೆಂಬರ್ 14: ಸೋಮವಾರಪೇಟೆಯ ಐಗೂರಿನಲ್ಲಿರುವ ಪ್ರಾರ್ಥನಾ ಮಂದಿರಕ್ಕೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿದ್ದ ಕುರಾನ್ ಗೆ ಬೆಂಕಿ ಹೊತ್ತಿಸಿ, ಪರಾರಿಯಾಗಿದ್ದಾರೆ. ಐಗೂರು ಜಂಕ್ಷನ್ ನಲ್ಲಿ ಗ್ರಾಮ ಪಂಚಾಯಿತಿ ಕಟ್ಟಡದ ಪಕ್ಕದಲ್ಲಿರುವ ಪ್ರಾರ್ಥನಾ ಮಂದಿರದ ಹೆಂಚುಗಳನ್ನು ತೆಗೆದು ಒಳ ನುಗ್ಗಿದ ಕಿಡಿಗೇಡಿಗಳು, ಅಲ್ಲಿದ್ದ ಹತ್ತಕ್ಕೂ ಹೆಚ್ಚು ಕುರಾನ್, ಚಾಪೆ-ಚಾದರಗಳಿಗೆ ಬೆಂಕಿ ಇಟ್ಟು, ಪರಾರಿಯಾಗಿದ್ದಾರೆ.
ಹತ್ತು ದಿನಗಳಿಂದ ಪ್ರಾರ್ಥನಾ ಮಂದಿರವನ್ನು ಮುಚ್ಚಲಾಗಿತ್ತು. ಅಬ್ದುಲ್ ರಹಮಾನ್ ಎಂಬವರು ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ಸಂದರ್ಭದಲ್ಲಿ ಬೆಂಕಿಯಲ್ಲಿ ಸುಟ್ಟು ಕರಕಲಾದ ಕುರಾನ್ ಪ್ರತಿಗಳು ಕಂಡುಬಂದಿದ್ದವು. ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಮಹಜರು ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.[ಮುಳಬಾಗಿಲು: ಕುರಾನ್ ಹರಿದ ಯುವಕನ ಹೊಡೆದು ಹತ್ಯೆ]
ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳ ಬಂಧನಕ್ಕೆ ಹೊಸತೋಟ ಮುಸ್ಲಿಂ ಜಮಾಅತ್ ವಾರದ ಗಡುವು ನೀಡಿದ್ದರೆ, ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಸ್ಥಾನೀಯ ಬಿಜೆಪಿ ಸಮಿತಿ ಆಗ್ರಹಿಸಿದೆ. ಕೆಲ ದಿನಗಳ ಹಿಂದೆಯೇ ಘಟನೆ ನಡೆದಿರುವ ಸಂಶಯವಿದ್ದು, ಪ್ರಾರ್ಥನಾ ಮಂದಿರ ಬೀಗ ಹಾಕಿರುವುದನ್ನು ಗಮನಿಸಿರುವ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಮಡಿಕೇರಿಯಿಂದ ವಿಧ್ವಂಸಕ ಕೃತ್ಯ ತಪಾಸಣಾ ಕೇಂದ್ರದ ಸಿಬ್ಬಂದಿ, ಪೊಲೀಸ್ ಶ್ವಾನದಳ ಆಗಮಿಸಿ, ಪರಿಶೀಲನೆ ನಡೆಸಿದೆ. ಹೊಸತೋಟ- ಐಗೂರಿನಲ್ಲಿ ಕೋಮು ಸಾಮರಸ್ಯ ನೆಲೆಸಿದ್ದು, ಇದನ್ನು ಕದಡಲು ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿವೆ. ಪ್ರಸಕ್ತ ಸಾಲಿನ ಟಿಪ್ಪು ಜಯಂತಿ ದಿನದಂದು ಕರೆ ನೀಡಿದ್ದ ಕೊಡಗು ಬಂದ್ ಬೆಂಬಲಿಸುವಂತೆ ಬಿಜೆಪಿ ಐಗೂರು ಸ್ಥಾನೀಯ ಸಮಿತಿ ವತಿಯಿಂದ ಮನವಿ ಮಾಡಿದ ಮೇರೆ ಮುಸ್ಲಿಂ ಸಮುದಾಯ ಬೆಂಬಲ ನೀಡಿತ್ತು.[ಮೈಸೂರಿನಲ್ಲಿ ಸಿಕ್ಕ ಕುರಾನ್ ಜಮ್ಮುವಿನಲ್ಲಿ ಕಳುವಾಗಿದ್ದಲ್ಲ]
ಆ ಕಾರಣಕ್ಕೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇದನ್ನು ಸಹಿಸದ ಕಿಡಿಗೇಡಿಗಳು ಕೋಮು ಸಾಮರಸ್ಯ ಹಾಳುಗೆಡವಲು ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ಐಗೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಚ್ಚಂಡ ಅಶೋಕ್ ಅಭಿಪ್ರಾಯಿಸಿದ್ದಾರೆ.
ಪ್ರಾರ್ಥನಾ ಮಂದಿರದೊಳಕ್ಕೆ ನುಗ್ಗಿ ಕುರಾನ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾವದೇ ರಾಜಕೀಯ ಪಕ್ಷ, ಧರ್ಮ, ಜಾತಿಗೆ ಸೇರಿದವರಾಗಿದ್ದರೂ ತಕ್ಷಣ ಬಂಧಿಸಿ ಸತ್ಯಾಂಶ ಬಯಲಿಗೆಳೆಯಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.[ಖುರಾನ್ ಪಠಿಸದ ಪುತ್ರನ ಕೊಂದುಸುಟ್ಟ ಮಹಾತಾಯಿ]
ಪ್ರಾಥಮಿಕ ತನಿಖೆಯಿಂದ ಕಿಡಿಗೇಡಿಗಳ ಸುಳಿವು ಲಭಿಸಿದೆ. ಸದ್ಯ ಐಗೂರಿನಲ್ಲಿ ಶಾಂತಿ ನೆಲೆಸಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲಾ ಅಪರಾಧ ಪತ್ತೆದಳಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ. ಡಿಸಿಐಬಿ ಇನ್ ಸ್ಪೆಕ್ಟರ್ ಕರೀಂ ರಾವ್ತರ್ ತನಿಖೆ ನಡೆಸುತ್ತಿದ್ದಾರೆ.