ಸುಂಟಿಕೊಪ್ಪದ ಕಾಫಿ ತೋಟದಲ್ಲಿ ಗಾಂಜಾ ಬೆಳೆದಿದ್ದವನ ಬಂಧನ
ಮಡಿಕೇರಿ, ಅಕ್ಟೋಬರ್ 25: ಕಾಫಿ ತೋಟದ ಮಧ್ಯೆ ಗಾಂಜಾ ಬೆಳೆಸಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಸುಂಟಿಕೊಪ್ಪ ಠಾಣೆ ಪೊಲೀಸರು, ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಕಾಫಿ ತೋಟದಲ್ಲಿ ಗಾಂಜಾ ಬೆಳೆಯಲಾಗಿತ್ತು.
ಅಂದಗೋವೆ ಗ್ರಾಮದ ಚಿಕ್ಕಂಡ ರಂಜನ್ ಬಂಧಿತ ಆರೋಪಿ. ಈತ ಹಣದಾಸೆಗಾಗಿ ತನ್ನ ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಅದನ್ನು ಪೋಷಿಸಿಕೊಂಡು ಬಂದಿದ್ದ ರಂಜನ್, ಕಟಾವು ಮಾಡಿ ಹಣ ಸಂಪಾದಿಸುವ ಬಗ್ಗೆ ಆಲೋಚಿಸಿದ್ದ. ಆದರೆ ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ವಿಚಾರವನ್ನು ಗೋಪ್ಯವಾಗಿಡಲಾಗಿತ್ತು. ಆದರೂ ಅದನ್ನು ಕೆಲವರು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.[ಮಾದಕವಸ್ತು ಜಾಲದಲ್ಲಿ ವಾಯುಪಡೆಯ ವಿಂಗ್ ಕಮಾಂಡರ್ ಅಂದರ್]
ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಅದರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂ ಸೋಮವಾರಪೇಟೆ ಡಿವೈಎಸ್ ಪಿ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಸಬ್ ಇನ್ ಸ್ಪೆಕ್ಟರ್ ಲಿಂಗಪ್ಪ ಹಾಗೂ ಸಿಬ್ಬಂದಿ, ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ದಾಳಿ ಮಾಡಿದ್ದು ಆರೋಪಿ ಚಿಕ್ಕಂಡ ರಂಜನ್ ಬಂಧಿಸಿ ಕಾಫಿ ತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.