ಮಡಿಕೇರಿ: ದುಬಾರೆಯ ರಿವರ್ ರಾಫ್ಟಿಂಗ್ ಗೆ ಲಗಾಮು ಸರಿಯೇ?
ಮಡಿಕೇರಿ, ಜುಲೈ 8: ಕುಶಾಲನಗರ ಸಮೀಪದ ದುಬಾರೆಯ ಕಾವೇರಿನದಿಯಲ್ಲಿ ಮಳೆಗಾಲದಲ್ಲಿ ನಡೆಯುತ್ತಿದ್ದ ರಿವರ್ ರಾಫ್ಟಿಂಗ್ ಗೆ ಲಗಾಮು ಹಾಕಲು ಜಿಲ್ಲಾಡಳಿತ ಮುಂದಾಗಿದೆ.
ಮಳೆಗಾಲ ಆರಂಭವಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದಂತೆಯೇ ದುಬಾರೆಯಲ್ಲಿ ಸಾಹಸ ಕ್ರೀಡೆಯಲ್ಲೊಂದಾದ ರಿವರ್ ರಾಫ್ಟಿಂಗ್ ಆರಂಭವಾಗುವುದು ಇತ್ತೀಚೆಗಿನ ವರ್ಷಗಳಲ್ಲಿ ಸಾಮಾನ್ಯವಾಗಿತ್ತು. ಇದು ಒಂದಷ್ಟು ಜನಕ್ಕೆ ಉದ್ಯೋಗವನ್ನು ಕಲ್ಪಿಸಿತ್ತು. ಸ್ಥಳೀಯ ಹಲವರು ಇದರಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು. ತರಬೇತಿ ಹೊಂದಿದ ಗೈಡ್ ಗಳು ದೂರದಿಂದ ಆಗಮಿಸಿದ ಪ್ರವಾಸಿಗರನ್ನು ರಾಫ್ಟ್ ನಲ್ಲಿ ಕರೆದೊಯ್ಯುತ್ತಿದ್ದರು.

ರಿವರ್ ರಾಫ್ಟಿಂಗ್ ಅಸೋಸಿಯೇಷನ್ ಹೇಳುವ ಪ್ರಕಾರ ಇಲ್ಲಿ 16 ಮಂದಿ 60 ರಾಫ್ಟರ್ ಗಳನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಇದನ್ನು ನಂಬಿಕೊಂಡು 150 ಬಡಕುಟುಂಬಗಳು ಬದುಕು ನಡೆಸುತ್ತಿವೆಯಂತೆ. ಇತ್ತೀಚೆಗಿನ ವರ್ಷಗಳಲ್ಲಿ ಈ ರಾಫ್ಟಿಂಗ್ ಬಹಳಷ್ಟು ಜನರನ್ನು ಆಕರ್ಷಿಸುತ್ತಿದ್ದು, ದೇಶ ವಿದೇಶಗಳ ಮಂದಿ ಇಲ್ಲಿ ರಾಫ್ಟಿಂಗ್ ಗೆ ಮುಗಿಬೀಳುತ್ತಿದ್ದಾರೆ. ಹೀಗಿರುವಾಗಲೇ ಈ ಬಾರಿ ಜಿಲ್ಲಾಡಳಿತ ಟೆಂಡರ್ ಮೂಲಕ ರಾಫ್ಟಿಂಗ್ ನಡೆಸಲು ಅನುಮತಿ ನೀಡಲು ಮುಂದಾಗಿರುವುದು ಹಾಲಿ ರಾಫ್ಟಿಂಗ್ ನಡೆಸುವ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರಾಗಿರುವ ಆರ್.ವಿ.ಡಿಸೋಜ ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, 12 ತಿಂಗಳ ಕಾಲಾವಧಿಗೆ ಗುತ್ತಿಗೆ ನೀಡುತ್ತಿದ್ದು, ಟೆಂಡರ್ ನಲ್ಲಿ ಭಾಗವಹಿಸುವವರು 3 ಲಕ್ಷ ಇಎಂಡಿ ಪಾವತಿಸುವಂತೆ ಷರತ್ತುಗಳನ್ನು ಹಾಕಲಾಗಿದೆ. ಇದರಿಂದ ಪ್ರವಾಸಿಗರ ಭದ್ರತೆ ಸಿಗುವುದಲ್ಲದೆ, ಸರ್ಕಾರದ ಬೊಕ್ಕಸಕ್ಕೆ ಹಣ ಬರಲಿದೆ ಎನ್ನುವುದು ಜಿಲ್ಲಾಧಿಕಾರಿಗಳ ಆಲೋಚನೆಯಾಗಿದೆ.
ಆದರೆ ಜಿಲ್ಲಾಧಿಕಾರಿಗಳ ತೀರ್ಮಾನಕ್ಕೆ ಪ್ರತಿಕ್ರಿಯೆ ನೀಡಿರುವ ರಾಫ್ಟಿಂಗ್ ಉದ್ಯಮ ನಡೆಸುವ ಸ್ಥಳೀಯ ಉದ್ಯಮಿ ಹೋಟೆಲ್ ದುಬಾರೆ ಇನ್ ಮಾಲೀಕರಾದ ಕೆ.ಎಸ್.ರತೀಶ್ ಅವರು ಕಳೆದ ಹಲವು ವರ್ಷಗಳಿಂದ ಈ ಸಾಹಸಿ ಕ್ರೀಡೆಯನ್ನು ನಿಯಮಾನುಸಾರ ನಡೆಸಿಕೊಂಡು ಬಂದಿದ್ದೇವೆ. ಹಲವು ಇಲಾಖೆಗಳಿಂದ ಅನುಮತಿ ಪಡೆದು ಸ್ಥಳೀಯರೇ ರಾಫ್ಟಿಂಗ್ ನಡೆಸುವುದರೊಂದಿಗೆ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶ ದೊರೆತಿದೆ. ಸ್ವಚ್ಛತೆ ಹಾಗೂ ಪ್ರವಾಸಿಗರ ಭದ್ರತೆ ದೃಷ್ಟಿಯಿಂದ ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುವುದಾಗಿ ಹೇಳಿದ್ದಾರೆ.
ಇನ್ನು ದುಬಾರೆ ರಿವರ್ ರಾಫ್ಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಸಿ.ಎಲ್.ವಿಶ್ವ ಅವರು ಟೆಂಡರ್ ಸ್ಥಗಿತಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮತ್ತು ಕಾನೂನಾತ್ಮಕ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ದುಬಾರೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ರಾಫ್ಟರ್ ಗಳು ಅಗತ್ಯ ಅನುಮತಿಗಳನ್ನು ಪಡೆದು ಕೊಂಡಿರುವುದಲ್ಲದೆ, ಇರುವ 60 ಮಂದಿ ಮಾಸಿಕ ತಲಾ 600 ರೂ.ಗಳಂತೆ 36 ಸಾವಿರ ರೂ.ಗಳನ್ನು ಪಾವತಿಸುತ್ತಿದ್ದಾರೆ. ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ 60 ಗೈಡ್ ಗಳು, ರಕ್ಷಣಾ ಸಿಬ್ಬಂದಿಗಳನ್ನು ನಾವು ನಿಯುಕ್ತಿಗೊಳಿಸಿ ಕ್ರಮಬದ್ಧವಾಗಿ ರಾಫ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಹೊರಗಿನವರಿಗೆ ರಾಫ್ಟಿಂಗ್ ನಡೆಸಲು ಅನುವು ಮಾಡಿಕೊಡುವ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರಿಗೆ ಮನವಿ ಮಾಡುವುದಾಗಿ ಸಿ.ಎಲ್.ವಿಶ್ವ ಹೇಳಿದ್ದಾರೆ. ಸದ್ಯ ಜಿಲ್ಲಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.











Click it and Unblock the Notifications