Kodagu Rain: ಪುನರ್ವಸು ಅಬ್ಬರಕ್ಕೆ ನಲುಗಿದ ಕೊಡಗಿನ ಜನ: ಹೆಚ್ಚಿದ ಅನಾಹುತ
ಮಡಿಕೇರಿ, ಜುಲೈ 16: ಕೊಡಗಿನಲ್ಲಿ ಪುನರ್ವಸು ಮಳೆಯ ಅಬ್ಬರ ಜೋರಾಗಿದೆ. ಮಳೆ ಕೊನೆಯ ಹಂತದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಕಾರಣ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರೆ, ಮತ್ತೊಂದೆಡೆ ಮನೆಗೋಡೆ ಕುಸಿತ ಸೇರಿದಂತೆ ಹಲವು ಅನಾಹುತಗಳು ಸಂಭವಿಸುತ್ತಿವೆ. ಇದೆಲ್ಲದರ ನಡುವೆ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಜಲಾಶಯದಿಂದ ಸುಮಾರು 20ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಈ ರುದ್ರರಮಣೀಯ ದೃಶ್ಯ ಮನಮೋಹಕವಾಗಿದೆ.
ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸಂಗಮ ಜಲಾವೃತವಾಗಿದೆ. ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಹೆಚ್ಚು ಮಳೆಯಾದ ಕಾರಣ ನಾಪೋಕ್ಲು ರಸ್ತೆ ಜಲಾವೃತವಾದರೂ ಅಚ್ಚರಿಪಡಬೇಕಾಗಿಲ್ಲ. ಇನ್ನು ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ತುಂಬಿ ಹರಿಯುತ್ತಿದ್ದ ಸ್ಥಳಕ್ಕೆ ತಾಲೂಕು ತಹಸಿಲ್ದಾರ್ ಕಿರಣ್ ಗೌರಯ್ಯ ಮತ್ತು ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇದೆಲ್ಲದರ ನಡುವೆ ಮಡಿಕೇರಿ ಹೋಬಳಿ ಮರಗೋಡು ಗ್ರಾಮದ ಎಂ.ಕೆ.ಅಣ್ಣುರವರ ವಾಸದ ಮನೆಗೆ ಮಳೆಯಿಂದ ಹಾನಿಯಾಗಿದ್ದು, ಸ್ಥಳಕ್ಕೆ ತಹಸೀಲ್ದಾರ್ ಪ್ರವೀಣ್ ಕುಮಾರ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು ಭೇಟಿ ನೀಡಿ ವೀಕ್ಷಿಸಿದರು. ಈ ಕುಟುಂಬವನ್ನು ಬೇರೊಂದು ಮನೆಗೆ ಸ್ಥಳಾಂತರಿಸಿದ್ದಾರೆ.
ಸೋಮವಾರಪೇಟೆ ಹೋಬಳಿಯ ನೇಗಳ್ಳಿ ಕರ್ಕಳ್ಳಿ ಗ್ರಾಮದ ನಿವಾಸಿ ಜಯಂತಿ ಎಂಬುವರ ಮನೆ ಮೇಲೆ ಮರ ಬಿದ್ದು ಮನೆಯ ಮೇಲ್ಛಾವಣಿ ಹಂಚುಗಳು ಹಾಗೂ ಹಿಂಭಾಗದ ಗೂಡೆಯು ಪೂರ್ಣ ಹಾನಿಯಾಗಿದೆ. ಸುಂಟಿಕೊಪ್ಪ ಅಂದೋಗೋವಿಯಲ್ಲಿ ಅಬ್ಬಾಸ್ ಎಂಬುವರ ಮನೆಯ ಶೀಟ್ ಗಳು ಗಾಳಿಯಿಂದ ಹಾರಿಹೋಗಿವೆ. ಶನಿವಾರ ಸಂತೆ ಗೌಡಳ್ಳಿ ಗ್ರಾಮ ಪಂಚಾಯತಿಯ ಚನ್ನಪುರ ಗ್ರಾಮದ ರಮೇಶ್ ಎಂಬುವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ.

ಜಿಲ್ಲೆಯಾದ್ಯಂತ ಹಲವು ಅವಘಡಗಳು
ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ ಆಯುಷ್ಯ ಎಂಬುವರ ಮನೆಯ ಗೋಡೆಯ ಒಂದು ಭಾಗ ಮಳೆಯಿಂದ ಕುಸಿದಿದೆ. ಕುಶಾಲನಗರ ತಾಲೂಕು ಅತ್ತೂರು ಗ್ರಾಮದ ಅಚ್ಚಯ್ಯ ಎಂಬುವರ ಮನೆಯ ಮೇಲ್ಚಾವಣಿಗೆ ಹಾನಿಯಾಗಿದ್ದು ಒಂದು ಭಾಗ ಗೋಡೆ ಕುಸಿದಿದೆ. 7ನೇ ಹೊಸಕೋಟೆಯ ಚಿಕ್ಕಂಜಿ ರಸ್ತೆಯಲ್ಲಿ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ತೆರುವು ಕಾರ್ಯಾಚರಣೆ ನಡೆದಿದೆ.
ಉಳಿದಂತೆ ಜಿಲ್ಲೆಯ ವಿವಿಧತೆ ಸಣ್ಣಪುಟ್ಟ ಮರದ ಕೊಂಬೆಗಳು ಮುರಿದು ಬಿದ್ದಿದ್ದು , ಕೆಲವು ಕಡೆ ಕಾಂಪೌಂಡಿನ ಕಲ್ಲುಗಳು ಜಾರಿದ್ದು, ಲೈಟ್ ಕಂಬ ಮುಳುಗಿ ಬಿದ್ದಿದ್ದು ಕೆಲವು ಕಡೆ ಬಾಗಿ ನಿಂತಿದ್ದು ಹೀಗೆ ಹತ್ತು ಹಲವು ಘಟನೆಗಳು ನಡೆದಿವೆ. ಈಗಾಗಲೇ ಜಿಲ್ಲಾಡಳಿತದಿಂದ ಪ್ರವಾಸಿ ಸ್ಥಳಗಳಲ್ಲಿ ಮುನ್ನೆಚ್ಚರಿಕ ಕ್ರಮವನ್ನು ಕೈಗೊಂಡಿದೆ. ವಿಪತ್ತು ನಿರ್ವಹಣಾ ತಂಡದ ಮೂಲಕ ಎನ್ ಡಿ ಆರ್ ಎಫ್ ತಂಡ ಅನಾಹುತಗಳನ್ನು ತಡೆಯುವಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಮುಂದೆ ಸಂಭವಿಸಬಹುದಾದ ಎಲ್ಲಾ ರೀತಿಯ ನೆರವು ಕಾರ್ಯಾಚರಣೆಗೆ ಸನ್ನದ್ಧವಾಗಿದೆ.

ವಿದ್ಯುತ್ ಅವಘಡಗಳತ್ತ ಎಚ್ಚರವಿರಲಿ
ಗಾಳಿ ಮಳೆ ಇದ್ದು, ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ಅಥವಾ ವಿದ್ಯುತ್ ತಂತಿ ಒಂದಕ್ಕೊಂದು ಹೊಡೆದುಕೊಂಡು ತಂತಿ ತುಂಡಾಗಿ ರಸ್ತೆ ಯಲ್ಲಿ ಬಿದ್ದಿರುವ ಸಾಧ್ಯತೆಗಳಿರುವುದರಿಂದ ಈ ರೀತಿಯ ಯಾವುದೇ ಮಾಹಿತಿಗಳಿದ್ದಲ್ಲಿ ದೂರವಾಣಿ ಸಂಖ್ಯೆ 9449598665 ಗೆ ಕರೆ ಮಾಡಿ ಮಾಹಿತಿ ತಿಳಿಸಲು ಕೋರಿದೆ. ತುಂಡಾದ ತಂತಿಯ ಬಗ್ಗೆ ಎಚ್ಚರಿಕೆಯಿಂದಿರಲು ಚೆಸ್ಕಾಂ ಮನವಿ ಮಾಡಿದೆ.
ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ ಒಂದು ದಿನದ ಅವಧಿಯಲ್ಲಿ ಸರಾಸರಿ 58.85 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 1188.07 ಮಿ.ಮೀ ಮಳೆ ಸುರಿದಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 1739.21 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 1221.25 ಮಿ.ಮೀ ಪೊನ್ನಂಪೇಟೆ ತಾಲ್ಲೂಕಿನಲ್ಲಿ 1132.69 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ 1036.01 ಮಿ.ಮೀ. ಕುಶಾಲನಗರ ತಾಲ್ಲೂಕಿನಲ್ಲಿ 811.20 ಮಿ.ಮೀ ಮಳೆಯಾಗಿದೆ.
ಭಯದಲ್ಲಿ ದಿನಕಳೆಯುತ್ತಿರುವ ಜಿಲ್ಲೆಯ ಜನ
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಶಾಂತಳ್ಳಿ 140, ಭಾಗಮಂಡಲ 120, ಸೋಮವಾರಪೇಟೆ ಕಸಬಾ 94.40, ಮಡಿಕೇರಿ ಕಸಬಾ 88.80 ಮಿ.ಮೀ, ಮಳೆ ಸುರಿದಿದೆ. 2,859 ಅಡಿಯ ಹಾರಂಗಿ ಜಲಾಶಯದಲ್ಲಿ ಸದ್ಯ 2854.77 ಅಡಿಯಷ್ಟಿದೆ. ಸದ್ಯ ಹತ್ತು ಸಾವಿರ ಕ್ಯೂಸೆಕ್ ನಿಂತ ಹೆಚ್ಚಿನ ಒಳ ಹರಿವು ಇರುವ ಕಾರಣ ಜಲಾಶಯದಿಂದ 20ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ ಪರಿಣಾಮ ಜಲಾಶಯದ ತಳಮಟ್ಟದಲ್ಲಿರುವ ಕಿರುಸೇತುವೆ ಮುಳುಗಡೆಯಾಗಿದೆಯಲ್ಲದೆ, ಕಾವೇರಿ ನದಿ ನೀರು ಗದ್ದೆಗೆ ನುಗ್ಗಿದೆ. ಒಟ್ಟಾರೆ ಕೊಡಗಿನಲ್ಲಿ ಮಳೆಯಿಂದ ಆವಾಂತರ ಹೆಚ್ಚುತ್ತಲೇ ಇದ್ದು ಭಯದ ವಾತಾವರಣ ನಿರ್ಮಾಣವಾಗಿರುವುದಂತು ನಿಜ.












Click it and Unblock the Notifications