ಕುಂಭದ್ರೋಣ ಮಳೆ: ಕೊಡಗಿನಾದ್ಯಂತ ಪ್ರವಾಹ ಭೀತಿ, ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ
ಮಡಿಕೇರಿ, ಆಗಸ್ಟ್ 06: ಕೊಡಗಿನಾದ್ಯಂತ ಕುಂಭದ್ರೋಣ ಮಳೆಸುರಿಯುತ್ತಿರುವುದುರಿಂದ ಕಾವೇರಿಯ ಮೂಲಸ್ಥಾನ ತಲಕಾವೇರಿಯಲ್ಲಿರುವ ಬ್ರಹ್ಮಗಿರಿಬೆಟ್ಟ ಕುಸಿದಿದ್ದು, ಪರಿಣಾಮ ಎರಡು ಮನೆಗಳು ಮಣ್ಣಿನಡಿ ಸಿಲುಕಿ, ತಲಕಾವೇರಿಯ ಅರ್ಚಕರು ಸೇರಿದಂತೆ ಮನೆಯಲ್ಲಿದ್ದ ಐವರು ನಾಪತ್ತೆಯಾಗಿರುವುದಾಗಿ ಹೇಳಲಾಗಿದ್ದು, ಸ್ಥಳಕ್ಕೆ ತೆರಳಿರುವ ಎನ್.ಡಿ.ಆರ್.ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ.
Recommended Video
ಕಳೆದ ವರ್ಷವೇ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ವೇಳೆ ಬಿರುಕು ಬಿಟ್ಟ ಸ್ಥಳಕ್ಕೆ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ ನೀರು ಒಳ ಹೋಗದಂತೆ ತಡೆಯಲಾಗಿತ್ತು. ಇತ್ತೀಚೆಗೆ ತಲಕಾವೇರಿ ರಸ್ತೆಯಲ್ಲಿ ಬರೆ ಕುಸಿತವಾಗಿತ್ತು. ಇದೀಗ ಕುಸಿತಗೊಂಡಿರುವ ಪ್ರದೇಶದಲ್ಲಿ ಮೂರು ಮನೆಯಿದ್ದು, ಎರಡು ಮನೆಗಳು ನೆಲಸಮವಾಗಿವೆ. ಇದು ರಾತ್ರಿ ವೇಳೆ ನಡೆದ ಘಟನೆಯಾಗಿದ್ದು, ಇಲ್ಲಿ ಜನ ವಿರಳವಾಗಿರುವ ಕಾರಣ ಬೆಳಿಗ್ಗೆ ಈ ಘಟನೆ ಜನರಿಗೆ ತಿಳಿದಿದೆ.

ರಕ್ಷಣಾ ಕಾರ್ಯಕ್ಕೆ ಸವಾಲಾದ ಮಳೆ
ಬೆಟ್ಟ ಕುಸಿತದ ಸಂದರ್ಭ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್ ನಾರಾಯಣ ಆಚಾರ್ ಮತ್ತು ಅವರ ಪತ್ನಿ, ಆನಂದತೀರ್ಥ ಮತ್ತು ಇಬ್ಬರು ಅರ್ಚಕರು ಮನೆಯಲ್ಲಿದ್ದರು ಎನ್ನಲಾಗಿದೆ. ಇನ್ನು ಘಟನೆಯಲ್ಲಿ ಎರಡು ಕಾರು, 20 ಕ್ಕೂ ಹೆಚ್ಚು ಹಸುಗಳು ಮಣ್ಣುಪಾಲಾಗಿವೆ. ಬೆಟ್ಟವು ಸುಮಾರು 6 ಕಿ.ಮೀ ಉದ್ದಕ್ಕೆ ಕುಸಿದು ಬಿದ್ದಿರುವುದರಿಂದ ಮಣ್ಣನ್ನು ತೆರವುಗೊಳಿಸಿ ರಕ್ಷಣಾಕಾರ್ಯ ನಡೆಸುವುದು ರಕ್ಷಣಾ ಪಡೆಗಳಿಗೆ ಸವಾಲಾಗಿದೆ.
ಹಾಗೆ ನೋಡಿದರೆ ಕಳೆದ ಭಾನುವಾರದಿಂದ ಕೊಡಗಿನಲ್ಲಿ ಮಳೆ ಒಂದೇ ಸಮನೆ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ತಲೆದೋರಿದೆ. ಭಾಗಮಂಡಲ ಸಂಪೂರ್ಣ ಜಲವಾವೃತಗೊಂಡಿದ್ದು, ಭಗಂಡೇಶ್ವರ ದೇಗುಲದ ತನಕ ನೀರು ಬಂದಿದೆ.

ಮಳೆಯಿಂದ ಜಲಾವೃತಗೊಂಡ ಭಾಗಮಂಡಲ
ಇನ್ನು ಭಾಗಮಂಡಲ ಸಂಪೂರ್ಣ ನೀರಿನಿಂದ ಆವೃತವಾಗಿ ಹೊರಗಿನ ಸಂಪರ್ಕವನ್ನು ಕಡಿದುಕೊಂಡಿದೆ. ತಲಕಾವೇರಿಯಲ್ಲಿ ಅನಾಹುತ ಸಂಭವಿಸಿದ್ದರೂ ಅಲ್ಲಿಗೆ ಭಾಗಮಂಡಲ ಮೂಲಕವೇ ತೆರಳಬೇಕಾಗಿದೆ. ಆದರೆ ನೀರಿನಿಂದ ಆವೃತವಾಗಿರುವ ಕಾರಣ ಕಾರ್ಯಾಚರಣೆ ನಡೆಸುವುದು ಕೂಡ ರಕ್ಷಣಾ ತಂಡಗಳಿಗೆ ಕಷ್ಟದ ಕೆಲಸವಾಗಿ ಪರಿಣಮಿಸಿದೆ. ಈಗಾಗಲೇ ಭಾರೀ ಗಾಳಿ ಬೀಸಿದ ಪರಿಣಾಮ ಜಿಲ್ಲೆಯಾದ್ಯಂತ ಮರಗಳು ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಇದರಿಂದ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಪ್ರದೇಶ ಕತ್ತಲಿನಿಂದ ಕೂಡಿದೆ.

ಉಕ್ಕಿಹರಿಯುತ್ತಿರುವ ನದಿ-ತೊರೆಗಳು
ಭಾರೀ ಮಳೆಯಿಂದ ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಹಾಗೂ ತೊರೆಗಳು ತುಂಬಿ ಹರಿಯುತ್ತಿದೆ. ಕೆಲವೆಡೆ ಬರೆ ಕುಸಿತಗೊಂಡಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ಮಡಿಕೇರಿ ವ್ಯಾಪ್ತಿಯ ಕೆಲವೆಡೆ ಭೂಕುಸಿತ ಸಂಭವಿಸಿದೆ.
ಜಿಲ್ಲೆಗೊಂದು ಸುತ್ತು ಹೊಡೆದರೆ ಭಾಗಮಂಡಲ-ಮಡಿಕೇರಿ ಮತ್ತು ಭಾಗಮಂಡಲ-ಅಯ್ಯಂಗೇರಿ ರಸ್ತೆ ಮೇಲೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಕರಡಿಗೋಡು ಗ್ರಾಮದಲ್ಲಿನ ಜನವಸತಿ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಈಗಾಗಲೇ ಗಂಜಿ ಕೇಂದ್ರದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.

ಕಗ್ಗತ್ತಲಲ್ಲಿ ಜನ
ಹೊದ್ದೂರು-ನಾಪೋಕ್ಲು, ಮೂರ್ನಾಡು-ಬಲಮುರಿ ಮುಖ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಭ್ಯತ್ ಮಂಗಲ ಗ್ರಾಮದ ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸಿದ್ದಾಪುರ ಬಳಿಯ ನೆಲ್ಯಹುದಿಕೇರಿಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಎರಡು ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅಪಾಯದ ಅಂಚಿನಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಸಮಾರೋಪಾದಿಯಲ್ಲಿ ಸಾಗುತ್ತಿದೆ.

ಕುಶಾಲನಗರದ ಬಡಾವಣೆಗಳಿಗೆ ನುಗ್ಗಿದ ನೀರು
ಹಾರಂಗಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿರುವುದರಿಂದ ಕುಶಾಲನಗರದ ಕೆಲವು ಬಡಾವಣೆಗಳಿಗೆ ನೀರು ನುಗ್ಗಿದೆ. ಗುಡ್ಡೆಹೊಸೂರು ಬಳಿಯಿರುವ ತೂಗು ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದ್ದು, ಈಗಾಗಲೇ ನೀರು ಕಾಫಿತೋಟ, ಗದ್ದೆ ಪ್ರದೇಶಗಳು, ಜನವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಜಿಲ್ಲೆಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ಮೂರು ವರ್ಷಗಳಿಂದ ಆಗಸ್ಟ್ ತಿಂಗಳು ಕೊಡಗಿನವರ ಪಾಲಿಗೆ ಮರಣ ಮೃದಂಗ ಬಾರಿಸುತ್ತಿರುವುದು ಆತಂಕಕಾರಿಯಾಗಿದೆ.












Click it and Unblock the Notifications