ಕೊಡಗು: ಪ್ರವಾಹ ಹಾಗೂ ಭೂ ಕುಸಿತ ಸ್ಥಳ ಗುರುತಿಸಿದ ಜಿಲ್ಲಾಡಳಿತ
ಮಡಿಕೇರಿ, ಜೂನ್ 16: ಮಲೆನಾಡು ಪ್ರದೇಶ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಅರ್ಭಟ ಹೆಚ್ಚಾಗುವ ಕಾರಣದಿಂದ ಕೊಡಗು ಜಿಲ್ಲಾಡಳಿತ ಪ್ರವಾಹ ಹಾಗೂ ಭೂಕುಸಿತ ಉಂಟಾಗುವ ಸಂಭವನೀಯ ಸ್ಥಳಗಳನ್ನು ಗುರುತಿಸಿದೆ.
ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ನಾಪೋಕ್ಲುವಿನ 771 ಕುಟುಂಬದ 2688 ಜನರು, ಮಡಿಕೇರಿ ನಗರ ವ್ಯಾಪ್ತಿಯ 381 ಕುಟುಂಬದ 1948 ಜನರು, ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ, ಹುದಿಕೇರಿ, ಬಾಳೆಲೆ ಹೋಬಳಿಯ 192 ಕುಟುಂಬದ 660 ಜನರು, ಕುಶಾಲನಗರ ನಗರ ವ್ಯಾಪ್ತಿಯ 347 ಕುಟುಂಬದ 1366 ಜನರನ್ನು ಸ್ಥಳಾಂತರಿಸಬೇಕಿದೆ.
ಅದೇ ರೀತಿ ಸೋಮವಾರಪೇಟೆ ಹೋಬಳಿಯ ಕುಶಾಲನಗರ, ಸುಂಟಿಕೊಪ್ಪ, ಶಾಂತಳ್ಳಿ, ಕೊಡ್ಲಿಪೇಟೆ ವ್ಯಾಪ್ತಿಯ 796 ಕುಟುಂಬದ 2796 ಜನರು, ವೀರಾಜಪೇಟೆ ತಾಲ್ಲೂಕು ಅಮ್ಮತ್ತಿ ಹೋಬಳಿಯ 213 ಕುಟುಂಬದ 922 ಜನರು, ವೀರಾಜಪೇಟೆ ಗ್ರಾಮಾಂತರದ 112 ಕುಟುಂಬದ 442 ಜನರು, ವೀರಾಜಪೇಟೆ ನಗರದ 66 ಕುಟುಂಬಗಳು ಸ್ಥಳಾಂತರಗೊಳ್ಳಬೇಕಾದ ಪಟ್ಟಿಯಲ್ಲಿವೆ.
ಜಿಲ್ಲೆಯಲ್ಲಿ ಮಳೆ ಹೆಚ್ಚಾದರೆ 77 ಕಾಳಜಿ ಕೇಂದ್ರ ಸೇರಿದಂತೆ 5 ತಾಲ್ಲೂಕಿನ ಎಲ್ಲ ಹೋಬಳಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಕೇಂದ್ರಗಳನ್ನು ಗುರುತಿಸಿದೆ. ಮಳೆ ಹೆಚ್ಚಾಗಿ, ಸಮಸ್ಯೆ ಸಂಭವಿಸಿದರೆ ತ್ವರಿತವಾಗಿ ಕಾಳಜಿ ಕೇಂದ್ರಕ್ಕೆ ಬೇಕಾದ ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರವಾಹ ಹಾಗೂ ಭೂ ಕುಸಿತ ಅವಘಡಗಳು ಸಂಭವಿಸಿದರೆ ರಕ್ಷಣೆ ಮಾಡಲು ಎನ್ಡಿಆರ್ಎಫ್ ತಂಡಗಳು ಸನ್ನದ್ಧವಾಗಿವೆ.