ಕೇರಳದಲ್ಲಿ ವಿಮಾನ ನಿಲ್ದಾಣ.. ಕೊಡಗಿನವರಿಗೆ ವರದಾನ..
ಮಡಿಕೇರಿ, ಆಗಸ್ಟ್ 21: ಮುಂದಿನ ಮಾರ್ಚ್ ವೇಳೆಗೆ ಸೇವೆಗೆ ಸಿದ್ಧವಾಗಲಿರುವ ಕೇರಳದ ಮಟ್ಟನೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೊಡಗಿನವರಿಗೆ ವರದಾನವಾಗಲಿದೆ.
ಕೊಡಗಿನವರು ನೂರಾರು ಕಿ.ಮೀ. ದೂರದ ಮಂಗಳೂರು ಅಥವಾ ಬೆಂಗಳೂರು ವಿಮಾನ ನಿಲ್ದಾಣವನ್ನೇ ಆಶ್ರಯಿಸಬೇಕಾಗಿತ್ತು. ಆದರೆ ಮಟ್ಟನೂರು ವಿಮಾನ ನಿಲ್ದಾಣ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೇವಲ 90 ಕಿ.ಮೀ. ದೂರದಲ್ಲಿರುವುದರಿಂದ ಅನುಕೂಲವಾಗಿದೆ.[ಕೊಡಗಿನಲ್ಲೂ ತಮಿಳು, ಮಲಯಾಳಂ ಶಾಲೆ ಇದೆ ಕಣ್ರೀ...]

ಈಗಾಗಲೇ ಕೇರಳದ ಮಟ್ಟನೂರಿನಲ್ಲಿ ಸುಮಾರು 2,000 ಎಕರೆ ಪ್ರದೇಶದಲ್ಲಿ 1892 ಕೋಟಿ ರು. ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತುತ್ತಿದ್ದು, 2017ರ ಏಪ್ರಿಲ್ ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ. ವಿಮಾನ ನಿಲ್ದಾಣಕ್ಕೆ ಇನ್ನೂ 4000 ಮೀಟರ್ ರನ್ ವೇ ಸೇರಿಸುವ ಪ್ರಸ್ತಾವ ಇದೆ ಎನ್ನಲಾಗಿದೆ.
ಪ್ರವಾಸೋದ್ಯಮಕ್ಕೆ ಅನುಕೂಲ: ಮಟ್ಟನೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿರುವುದರಿಂದ ಕೊಡಗಿನಲ್ಲಿ ಪ್ರವಾಸೋದ್ಯಮದ ಚಟುವಟಿಕೆ ಗರಿಗೆದರಲಿದೆ. ಜತೆಗೆ ಪುಷ್ಪೋದ್ಯಮ, ರಫ್ತು ಹಾಗೂ ಇತರ ಕ್ಷೇತ್ರಗಳಿಗೂ ಪ್ರಯೋಜನವಾಗಲಿದೆ. ಈ ಕುರಿತಂತೆ ಈಗಾಗಲೇ ಕೇರಳದ ಕಣ್ಣೂರಿನಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಮೈಸೂರು-ಮಂಗಳೂರು ಹಾಗೂ ಕೇರಳ ಚೇಂಬರ್ಸ್ ನ ಪದಾಧಿಕಾರಿಗಳ ಸಭೆ ನಡೆಸಿ, ಹಲವು ಸಲಹೆಗಳನ್ನು ಪಡೆಯಲಾಗಿದೆ.[ಕೃಷಿ ಸಚಿವ ಕೃಷ್ಣಬೈರೇಗೌಡ ಭತ್ತ ನಾಟಿ ಮಾಡಿದ್ದೆಲ್ಲಿ?]

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ತುಳಸಿ ದಾಸ್ ಕೊಡಗಿನ ಜನತೆ ಸಹಕಾರ ಕೋರಿದ್ದಾರೆ. ಮಟ್ಟನೂರು ವಿಮಾನ ನಿಲ್ದಾಣ ಭಾರತದಲ್ಲೇ ಅತ್ಯುತ್ತಮ ಹಾಗೂ ಬೃಹತ್ ನಿಲ್ದಾಣವಾಗಿ ಮಾರ್ಪಾಡಾಗಲಿದ್ದು, ಪ್ರಯಾಣಿಕ ಸ್ನೇಹಿ ಧ್ಯೇಯ
ಹೊಂದಿರುವುದಾಗಿ ತಿಳಿಸಿದ್ದಾರೆ.
ತೆರಿಗೆ ಇಳಿಸಬೇಕು: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಪರವಾಗಿ ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್ ಮಾತನಾಡಿ ಕೊಡಗು ಮಟ್ಟನೂರು ರಸ್ತೆ ವಿಸ್ತರಣೆಯಾಗಬೇಕು, ಬಾಡಿಗೆ ವಾಹನಗಳಿಗೆ ಕೇರಳ ಸರಕಾರ ವಿಧಿಸುತ್ತಿರುವ ತೆರಿಗೆಯನ್ನು ಇಳಿಸಬೇಕು, ಕೊಡಗಿನಲ್ಲೇ ಕಚೇರಿ ತೆರೆದು ಪ್ರವಾಸಿಗರಿಗೆ ಅನುಕೂಲ ಮಾಡಬೇಕೆಂದು ಸಲಹೆ ನೀಡಿದ್ದಾರೆ.[ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ : ತನಿಖೆ ತೀವ್ರ]
ಕೊಡಗು ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಪರವಾಗಿ ಮಾತನಾಡಿದ ಉಪಾಧ್ಯಕ್ಷ ಬೇರೆರ ಮಂಜುನಾಥ್, ಕೊಡಗು- ಕೇರಳ ರಸ್ತೆ ಮಧ್ಯದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೊಟೇಲ್ ಗಳನ್ನು ಸ್ಥಾಪಿಸಬೇಕು ಎಂದರೆ, ವಕೀಲ ಆರ್.ಕೆ. ನಾಗೇಂದ್ರ ಬಾಬು ಅವರು ವಿಮಾನ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕ ಹೆಚ್ಚಾಗದಂತೆ ನೋಡಿಕೊಳ್ಳಲು ಸಲಹೆ ನೀಡಿದ್ದಾರೆ.
ಎಲ್ಲರ ಸಲಹೆಗಳನ್ನು ಸಭೆಯಲ್ಲಿ ಸ್ವೀಕರಿಸಲಾಗಿದೆ. ಮುಂದಿನ ಮಾರ್ಚ್ ವೇಳೆಗೆ ವಿಮಾನ ನಿಲ್ದಾಣ ಸೇವೆಗೆ ಲಭ್ಯವಾದರೆ ಹೆಚ್ಚಿನ ಪ್ರಯೋಜನ ಕೊಡಗಿನವರಿಗೆ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.












Click it and Unblock the Notifications