ಮೈತ್ರಿ ಸರ್ಕಾರದ್ದು ಈಗ ಯುದ್ಧ ಕಾಲ ಶಸ್ತ್ರಾಭ್ಯಾಸ
ಮಡಿಕೇರಿ, ಜುಲೈ 8: ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಈಗಾಗಲೇ ಬಿಗ್ ಶಾಕ್ನಲ್ಲಿರುವ ದೋಸ್ತಿ ನಾಯಕರು ಸರ್ಕಾರ ಉಳಿಸಿಕೊಳ್ಳಲು ಎಲ್ಲ ರೀತಿಯ ಕೊನೆಯ ಅಸ್ತ್ರಗಳ ಪ್ರಯೋಗ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಯುದ್ಧ ಕಾಲ ಶಸ್ತ್ರಾಭ್ಯಾಸ ಎನ್ನುವಂತಾಗಿದೆ.
ಭಾನುವಾರ ಸಂಜೆ ಬೆಂಗಳೂರಿಗೆ ಬಂದಿಳಿದಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇಲ್ಲಿ ತನಕವೂ ಪ್ರತಿ ಕ್ಷಣವನ್ನು ಹಾಳು ಮಾಡದೆ ರಾಜಕೀಯವಾಗಿ ಏನೆಲ್ಲ ತಂತ್ರಗಳನ್ನು ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ತೆರೆಮರೆಯಲ್ಲಿ ರಾಜೀನಾಮೆ ನೀಡಿ ಮುಂಬೈ ಹೋಟೆಲ್ನಲ್ಲಿರುವ ಅತೃಪ್ತರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿರುವಂತೆ ಕಂಡುಬರುತ್ತಿದೆ. ಆದರೆ ಜೆಡಿಎಸ್ ನಾಯಕರು ಮಾತ್ರ ಅತೃಪ್ತ ಶಾಸಕರ ಮನವೊಲಿಸುವ ಕೆಲಸಕ್ಕೆ ಮುಂದಾದಂತೆ ಕಂಡು ಬರುತ್ತಿಲ್ಲ. ಅವರನ್ನು ಮನವೊಲಿಸುವ ಬದಲಾಗಿ ಇರುವ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಮುಖಂಡರು ರೆಸಾರ್ಟ್ನ ಮೊರೆ ಹೋಗುತ್ತಿರುವುದು ಈಗಿನ ಬೆಳವಣಿಗೆಯಾಗಿದೆ.
ಕೆಲವು ಸಮಯದ ಹಿಂದೆ ಮಡಿಕೇರಿ ಬಳಿಯ ಇಬ್ಬನಿ ರೆಸಾರ್ಟ್ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲಾದವರು ವಿಶ್ರಾಂತಿ ಪಡೆದು ಹೋಗಿದ್ದರು. ಈಗ ಕುಶಾಲನಗರ ಬಳಿಯ ಹೊಸಕೋಟೆಯಲ್ಲಿರುವ ಪ್ಯಾಡಿಂಗ್ ಟನ್ ರೆಸಾರ್ಟ್ಗೆ ಜೆಡಿಎಸ್ ಶಾಸಕರನ್ನು ಕರೆದೊಯ್ಯಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಅಲ್ಲಿ ಮೂರು ದಿನ ವಾಸ್ತವ್ಯ ಹೂಡಲು ಅನುಕೂಲವಾಗುವಂತೆ ರೂಂ ಬುಕಿಂಗ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೆಸಾರ್ಟ್ ಐಷಾರಾಮಿ ರೆಸಾರ್ಟ್ ಆಗಿದ್ದು, ಕಾಫಿ ತೋಟದ ನಡುವೆಯಿದೆ. ಮಡಿಕೇರಿ-ಕುಶಾಲನಗರ ಮುಖ್ಯರಸ್ತೆಯಿಂದ ಸ್ವಲ್ಪ ದೂರದಲ್ಲಿದೆ. ಮಾಹಿತಿ ಪ್ರಕಾರ ಪ್ಯಾಡಿಂಗ್ ಟನ್ ರೆಸಾರ್ಟಿನಲ್ಲಿ ಸುಮಾರು 35 ರೂಮುಗಳನ್ನು ಕಾದಿರಿಸಲಾಗಿದೆಯಂತೆ.

ಆದರೆ ಸದ್ಯದ ಮಾಹಿತಿ ಪ್ರಕಾರ ರೆಸಾರ್ಟ್ನಲ್ಲಿ ಭಾನುವಾರವೇ 35 ಕೊಠಡಿಗಳನ್ನು ಬುಕ್ ಮಾಡಲಾಗಿತ್ತು. ಜತೆಗೆ ಶಾಸಕರು ಬರುತ್ತಾರೆ ಎಂಬ ಮಾಹಿತಿಯಿರುವ ಹಿನ್ನೆಲೆಯಲ್ಲಿ ರೆಸಾರ್ಟ್ಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಆದರೆ ಶಾಸಕರು ಯಾವಾಗ, ಎಷ್ಟು ಹೊತ್ತಿಗೆ ಬರುತ್ತಾರೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ಈ ಬಗ್ಗೆ ರೆಸಾರ್ಟ್ನ ಮೂಲಗಳು ಕೂಡ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.












Click it and Unblock the Notifications