ಕೊಡಗಿನಲ್ಲಿ ಆಶಾಭಾವನೆ ಮೂಡಿಸಿದ ಮಳೆ
ಮಡಿಕೇರಿ, ಆಗಸ್ಟ್ 20 : ಕೊಡಗಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದು ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
ಕೊಡಗಿನಲ್ಲಿ ಧಾರಾಕಾರ ಮಳೆ: ಕೆಆರ್ ಎಸ್ ಒಳ ಹರಿವು ಹೆಚ್ಚಳ
ಮಳೆ ಕಡಿಮೆಯಾದ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿತ್ತು. ಇದೀಗ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳ ಕಂಡು ಬಂದಿದೆ. ತೊರೆ ಹಳ್ಳ, ಕೊಳ್ಳಗಳಲ್ಲೂ ನೀರು ಕಾಣಿಸಿಕೊಂಡಿದೆ. ಇದೇ ರೀತಿ ಮಳೆ ಸುರಿದರೆ ಕಾವೇರಿ ಧುಮ್ಮಿಕ್ಕಿ ಹರಿದು ಕೆ.ಆರ್.ಎಸ್ ಜಲಾಶಯದ ಒಳ ಹರಿವು ಹೆಚ್ಚಾಗುವ ಸಾಧ್ಯತೆಯಿದೆ.
ಕಳೆದ ವರ್ಷ ಈ ವೇಳೆಯಲ್ಲಿ ಸುರಿಯುವ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಜೂನ್ ಮತ್ತು ಜುಲೈ ತಿಂಗಳಲ್ಲಿ ಉತ್ತಮ ಮಳೆ ಸುರಿದಿತ್ತಾದರೂ ಬಳಿಕ ಮಳೆ ಸುರಿಯದ ಕಾರಣದಿಂದ ಕೆ.ಆರ್.ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಾರದೆ ಭರ್ತಿಯಾಗಿರಲಿಲ್ಲ.
ಕಳೆದ ಎರಡು ವರ್ಷಗಳಿಂದ ಕೆ.ಆರ್.ಎಸ್ ಜಲಾಶಯ ಭರ್ತಿಯಾಗಿಲ್ಲ. ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಕೆಆರ್ ಎಸ್ ಜಲಾಶಯ ಭರ್ತಿಯಾಗುತ್ತಿದೆ.
ಬೆಂಗಳೂರಲ್ಲಿ ಮಳೆ, ವಿಕೇಂಡ್ ಮಸ್ತಿಗೆ ಬ್ರೇಕ್
ಕೆಲವು ವರ್ಷಗಳ ಹಿಂದೆ ಅಕ್ಟೋಬರ್ ತಿಂಗಳಲ್ಲಿ ಜಲಾಶಯ ಭರ್ತಿಯಾದ ನಿದರ್ಶನವೂ ಇದೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಬಂದರೆ ಕೆ.ಆರ್.ಎಸ್ ಜಲಾಶಯ ಭರ್ತಿಯಾಗಬಹುದೆಂಬ ನಿರೀಕ್ಷೆ ಕಾವೇರಿ ಕಣಿವೆಯ ಜನರದ್ದಾಗಿದೆ.
ಶನಿವಾರದಿಂದ ಭಾನುವಾರದ ತನಕ ಸುರಿದ ಮಳೆಯನ್ನು ಗಮನಿಸುವುದಾದರೆ ಜಿಲ್ಲೆಯಲ್ಲಿ ಸರಾಸರಿ 28.4 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 46.7 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 11.6 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 26.9 ಮಿ.ಮೀ ಮಳೆಯಾಗಿದೆ.
ಇನ್ನು 2,859 ಅಡಿಗಳ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ 2856.47 ಅಡಿಗಳಷ್ಟಿದೆ. ನೀರಿನ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, 7525 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಇದೇ ರೀತಿ ನೀರು ಹರಿದು ಬಂದಿದ್ದೇ ಆದರೆ ಹೆಚ್ಚಿನ ನೀರನ್ನು ನದಿಗೆ ಬಿಡುವುದು ಅನಿವಾರ್ಯವಾಗಲಿದೆ. ಕೊಡಗಿನ ಕಾವೇರಿ, ಲಕ್ಷ್ಮಣತೀರ್ಥ ನದಿಗಳ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದು ಆಶಾಭಾವನೆ ಮೂಡಿಸುತ್ತಿದೆ.