ಪುಟ್ಟ ಜಿಲ್ಲೆ ಕೊಡಗು ಸೋಂಕುರಹಿತ ಜಿಲ್ಲೆಯಾದ ಹಿಂದಿನ ರಹಸ್ಯವೇನು?
ಮಡಿಕೇರಿ, ಏಪ್ರಿಲ್ 21: ರಾಜ್ಯದಲ್ಲಿ ವಿಶಿಷ್ಟ ಸಂಸ್ಕೃತಿ ಹೊಂದಿರುವ ಪುಟ್ಟ ಜಿಲ್ಲೆ ಕೊಡಗು. ಆದರೆ ಕೊರೊನಾ ಎಂಬ ಮಹಾಮಾರಿ ಈ ಪುಟ್ಟ ಊರಿನ ನೆಮ್ಮದಿಯನ್ನೇ ಕಸಿದುಕೊಂಡಿತ್ತು. ಕೊರೊನಾ ಹರಡುವುದನ್ನು ತಡೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸುತ್ತಿದ್ದಂತೆಯೇ ಜಿಲ್ಲೆಯ ಜನರು ಬೆಚ್ಚಿ ಬಿದ್ದರು. ಕಳೆದ ಎರಡು ವರ್ಷಗಳಿಂದ ಭೀಕರ ಮಳೆ ಮತ್ತು ಭೂ ಕುಸಿತಕ್ಕೆ ಸಿಲುಕಿ ನಲುಗಿಹೋಗಿದ್ದ ಈ ಜಿಲ್ಲೆಗೆ ಮತ್ತೆ ಕೊರೊನಾ ಕಂಟಕವೇ ಆಗಿತ್ತು.
ಅಪಾರ ಆಸ್ತಿ ಪಾಸ್ತಿಯ ನಷ್ಟ ಅನುಭವಿಸಿದ್ದ ಜನ ಈಗಷ್ಟೆ ಜಿಲ್ಲೆಯ ವ್ಯಾಪಾರ ವಹಿವಾಟಿನಿಂದ ಒಂದಷ್ಟು ಚೇತರಿಕೆ ಕಾಣುತ್ತಿದ್ದರು. ಈ ಸಮಯದಲ್ಲೇ ಲಾಕ್ ಡೌನ್ ಆದರೆ ಜನತೆ ಏನು ಮಾಡಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಜೊತೆಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಪಾಸಿಟಿವ್ ಪ್ರಕರಣ ಇನ್ನಷ್ಟು ಚಿಂತೆಗೀಡುಮಾಡಿತ್ತು. ಆದರೆ ಇದೀಗ ಕೊಡಗು ಸೋಂಕುರಹಿತ ಜಿಲ್ಲೆಯಾಗಿ ಪರಿವರ್ತನೆ ಆಗಿದೆ.

ಆರಂಭದಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ
ಸರ್ಕಾರದ ಆದೇಶವನ್ನು ಪಾಲಿಸಲು ಜಿಲ್ಲಾಡಳಿತ ಆರಂಭದಲ್ಲೇ ಎಲ್ಲಾ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡಿತ್ತು. ಕೂಡಲೇ ಜಿಲ್ಲೆಯ ಎಲ್ಲ ಗಡಿಗಳನ್ನೂ, ಮುಖ್ಯವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಗಡಿಗಳನ್ನೂ ಸಂಪೂರ್ಣ ಬಂದ್ ಮಾಡಲಾಯಿತು. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳ ನಡುವೆ ಮಾರ್ಚ್ 19ರಂದು ಜಿಲ್ಲೆಗೆ ಮೊದಲನೆಯದು ಎನ್ನಲಾದ ಕೊರೊನಾ ಪ್ರಕರಣವೊಂದು ವರದಿ ಅಯಿತು. ರೋಗಿಯು ಕೊಡಗಿನ ಕೊಂಡಂಗೇರಿ ನಿವಾಸಿಯಾಗಿದ್ದು, ಕೊಲ್ಲಿ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ. ರಜೆಯಲ್ಲಿ ಬಂದಿದ್ದಾಗ ಜ್ವರ ಮತ್ತು ಗಂಟಲು ನೋವು ಬಂದಿತ್ತು. ಕೂಡಲೇ ಜಿಲ್ಲಾಡಳಿತ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಗಂಟಲು ದ್ರವ ಪರೀಕ್ಷೆಗಾಗಿ ಪುಣೆಗೆ ಕಳಿಸಿಕೊಡಲಾಯಿತು.

ಸೀಲ್ ಡೌನ್ ಆದ ಸೋಂಕಿತ ವ್ಯಕ್ತಿಯಿದ್ದ ಇಡೀ ಗ್ರಾಮ
ಇದಾದ ನಂತರವೇ ಆರಂಭಗೊಂಡಿದ್ದು ಜಿಲ್ಲಾಡಳಿತದ ಸವಾಲಿನ ಕೆಲಸ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೂಡಲೇ ಸೋಂಕಿತ ವ್ಯಕ್ತಿಯ ಗ್ರಾಮವಾದ ಕೊಂಡಂಗೇರಿಯ 75 ಮನೆಗಳನ್ನೂ ಸಂಪೂರ್ಣ ಸೀಲ್ ಡೌನ್ ಮಾಡಿಸಿದರು. ಈ ಗ್ರಾಮದ ಜನಸಂಖ್ಯೆ ಸುಮಾರು 300 ಆಗಿದ್ದು, ಯಾರೂ ಒಳಗೆ ಹೋಗದಂತೆ ಮತ್ತು ಯಾರೂ ಹೊರಗೆ ಬರದಂತೆ ಸಂಪೂರ್ಣ ಪೊಲೀಸ್ ಭದ್ರತೆ ಏರ್ಪಾಡು ಮಾಡಲಾಯಿತು. ಜತೆಗೆ ಸೋಂಕಿತನ ಕುಟುಂಬವನ್ನೂ ಸಂಪೂರ್ಣ ಪರೀಕ್ಷೆ ಮಾಡಿಸಲಾಯಿತು. ಅದೃಷ್ಟವತಾಶ್ ಯಾರಿಗೂ ಸೋಂಕು ಹರಡಿರಲಿಲ್ಲ. ಅಧಿಕಾರಿಗಳ ಜತೆಗೇ ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಪ್ರಬಲ ವಿರೋಧದಿಂದ ಕೇರಳ ಸಂಪರ್ಕ ತಡೆಯಿತು
ಈ ನಡುವೆ ಕೇರಳದಿಂದ ಜಿಲ್ಲೆಯನ್ನು ಹಾದು ಮೈಸೂರಿಗೆ ತಲುಪುವ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿರುವುದನ್ನು ತೆರೆಸಬೇಕೆಂದು ಕೇರಳದ ರಾಜಕಾರಣಿಗಳಿಂದ ಪ್ರಬಲವಾದ ಲಾಬಿಯೇ ಆರಂಭವಾಯಿತು. ಅಷ್ಟೇ ಅಲ್ಲ ಈ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದರು. ಆದರೆ ಜಿಲ್ಲೆಯ ಜನತೆ ಜತೆಗೆ ಸಂಸದ ಪ್ರತಾಪ ಸಿಂಹ, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇದನ್ನು ಪ್ರಬಲವಾಗಿ ವಿರೋಧಿಸಿದ್ದರಿಂದ ಜಿಲ್ಲೆಗೆ ಕೇರಳದ ಜನರು ಬರುವುದು ತಪ್ಪಿತು.

ಕಟ್ಟುನಿಟ್ಟಾಗಿ ಎಲ್ಲಾ ಸೂಚನೆ ಪಾಲಿಸಿದ್ದ ಜಿಲ್ಲಾಡಳಿತ
15 ದಿನಗಳ ಕ್ವಾರಂಟೈನ್ ನಂತರ ಜಿಲ್ಲೆಯ ಏಕೈಕ ಕೋವಿಡ್ ಸೋಂಕಿತ ವ್ಯಕ್ತಿಯು ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ. ಆದರೆ ಕಳೆದ ವಾರ ಪುನಃ ತನಗೆ ಜ್ವರ ಎಂದು ಹೇಳಿ ಸ್ವಯಂ ಪ್ರೇರಣೆಯಿಂದಲೇ ಆಸ್ಪತ್ರೆಗೆ ದಾಖಲಾದ. ಪುನಃ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಕಳಿಸಿದಾಗ ನೆಗೆಟಿವ್ ವರದಿ ಬಂದಿದ್ದು ಜಿಲ್ಲಾಡಳಿತಕ್ಕೆ ನೆಮ್ಮದಿ ತಂದಿತ್ತು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಜನತೆಗೆ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಸೂಚಿಸಿದ ಎಲ್ಲ ಸೂಚನೆಗಳನ್ನೂ ಕಟ್ಟು ನಿಟ್ಟಾಗಿ ಪಾಲಿಸಿದ ಕಾರಣದಿಂದಲೇ ಇಂದು ಕೊಡಗು ಸೋಂಕು ರಹಿತರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಈ ಯಶಸ್ಸಿಗೆ ಜಿಲ್ಲೆಯ ಜನತೆ ಮತ್ತು ಚುನಾಯಿತ ಪ್ರತಿನಿಧಿಗಳ ಸಹಕಾರವೂ ಮುಖ್ಯ ಕಾರಣ ಎಂದ ಅವರು ಮುಂದೆಯೂ ಇದೇ ರೀತಿ ಕೊರೊನಾ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ರೆಸಾರ್ಟ್ ಪರವಾನಗಿ ರದ್ದುಗೊಳಿಸಿದ ಜಿಲ್ಲಾಡಳಿತ
ಈ ನಡುವೆ ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಪ್ಯಾಡಿಂಗ್ ಟನ್ ರೆಸಾರ್ಟ್ ನಲ್ಲಿ ಮೈಸೂರಿನ ಮಾಜಿ ಸಚಿವರ ಸಂಬಂಧಿಗಳೆನ್ನಲಾದ ಆರು ಜನರ ತಂಡ ನಿಯಮ ಉಲ್ಲಂಘಿಸಿ ತಂಗಿತ್ತು. ಕೂಡಲೇ ಅವರ ಮೇಲೆ ಮೊಕದ್ದಮೆ ದಾಖಲು ಮಾಡಿಕೊಂಡು ರೆಸಾರ್ಟ್ ನ ಪರವಾನಗಿ ರದ್ದುಗೊಳಿಸಿ ಬೀಗ ಮುದ್ರೆ ಹಾಕಲಾಗಿದೆ. ಕಟ್ಟು ನಿಟ್ಟಿನ ಕ್ರಮಗಳಿಂದಲೇ ಇಂದು ಜಿಲ್ಲೆಯು ಕೊರೊನಾ ಮುಕ್ತವಾಗಿದೆ. ಇದರ ಹಿಂದೆ ಶ್ರಮಿಸಿದ ಅಧಿಕಾರಿ ವರ್ಗ ನಿಜಕ್ಕೂ ಅಭಿನಂದನಾರ್ಹರಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಸೋಂಕಿನ ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಮಾಹಿತಿ ನೀಡಿರುವುದು ಜಿಲ್ಲೆಯ ಹೆಸರು ದೇಶಾದ್ಯಂತ ಪ್ರಸರಿಸಿದೆ. ಇದು ಹೀಗೇ ಮುಂದುವರಿಯಲಿ ಎಂದು ಆಶಿಸೋಣ...












Click it and Unblock the Notifications