ಪೊನ್ನಂಪೇಟೆ, ಕುಶಾಲನಗರ ತಾಲ್ಲೂಕು ಪಂಚಾಯಿತಿಗೆ ಹೊಸ ಹುದ್ದೆ ಮಂಜೂರು
ಮಡಿಕೇರಿ, ಜನವರಿ 03; ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಪೊನ್ನಂಪೇಟೆ ಮತ್ತು ಕುಶಾಲನಗರ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿ ಕಚೇರಿಗಳಿಗೆ ಹುದ್ದೆಗಳನ್ನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಎರಡು ಹೊಸ ತಾಲೂಕು ಘೋಷಣೆ ಮಾಡಿದರು. ವಿರಾಜಪೇಟೆಯಿಂದ ಪೊನ್ನಂಪೇಟೆ ಹಾಗೂ ಸೋಮವಾರಪೇಟೆಯಿಂದ ಕುಶಾಲನಗರ ತಾಲೂಕು ಅಸ್ತಿತ್ವಕ್ಕೆ ತರಲಾಯಿತು.
ಆದರೆ ಎರಡು ವರ್ಷಗಳು ಕಳೆದರೂ ಸೋಮವಾರಪೇಟೆ, ವಿರಾಜಪೇಟೆ ತಾಲೂಕು ಕಚೇರಿಗೆ ಜನರು ಓಡಾಟ ಮಾಡುವುದು ತಪ್ಪಲಿಲ್ಲ. ಪೂರ್ಣ ಪ್ರಮಾಣದಲ್ಲಿ ಎರಡು ಹೊಸ ತಾಲೂಕುಗಳು ಕಾರ್ಯಾರಂಭ ಮಾಡಿರುವುದು ಇದಕ್ಕೆ ಕಾರಣವಾಗಿತ್ತು.

ಒಂದು ತಾಲೂಕಿನಲ್ಲಿ 28 ಇಲಾಖೆ ಕಾರ್ಯ ನಿರ್ವಹಣೆ ಮಾಡಿದರೆ ಮಾತ್ರ ಸಂಪೂರ್ಣ ತಾಲೂಕು ರಚನೆ ಆಗುತ್ತದೆ. ಆದರೆ ಹೊಸ ತಾಲೂಕು ರಚನೆಗೆ ಸಿಬ್ಬಂದಿಗಳ ಕೊರತೆಯೇ ತೊಡಕಾಗಿತ್ತು. ಈಗ ಸರ್ಕಾರ ಹೊಸ ಹುದ್ದೆಗಳನ್ನು ಮಂಜೂರು ಮಾಡಿದೆ.
ಮಂಜೂರಾಗಿರುವ ಹುದ್ದೆಗಳು; ಕಾರ್ಯನಿರ್ವಾಹಕ ಅಧಿಕಾರಿ (ಗ್ರೂಪ್-ಎ ಕಿರಿಯ ಶ್ರೇಣಿ) 1, ಸಹಾಯಕ ಲೆಕ್ಕಾಧಿಕಾರಿ (ಗ್ರೂಪ್-ಬಿ) 1, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) (ಗ್ರೂಪ್-ಬಿ) 1, ತಾಲ್ಲೂಕು ಯೋಜನಾಧಿಕಾರಿ (ಗ್ರೂಪ್ -ಬಿ) 1, ಪ್ರಥಮ ದರ್ಜೆ ಸಹಾಯಕರು (ಗ್ರೂಪ್-ಸಿ) 1 ಹುದ್ದೆ.
ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಗ್ರೂಪ್-ಸಿ) 1, ದ್ವಿತೀಯ ದರ್ಜೆ ಸಹಾಯಕ (ಗ್ರೂಪ್-ಸಿ) 2, ಬೆರಳಚ್ಚುಗಾರರು/ ಡಿಇಒ (ಗ್ರೂಪ್-ಸಿ) 1, ವಾಹನ ಚಾಲಕರು (ಗ್ರೂಪ್-ಸಿ) 1 ಮತ್ತು 'ಡಿ' ದರ್ಜೆ ನೌಕರರು 2 ಒಟ್ಟು 12 ಹುದ್ದೆಗಳನ್ನು ಸೃಜಿಸಿ ಸರ್ಕಾರ ಆದೇಶ ಹೊರಡಿಸಿದೆ.
ವಿಳಂಬವಾಗಿದ್ದು ಏಕೆ?; ಪೊನ್ನಂಪೇಟೆ ಮತ್ತು ಕುಶಾಲನಗರ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿ ಕಚೇರಿಗಳ ಆರಂಭಕ್ಕೆ ಹುದ್ದೆಗಳ ಭರ್ತಿಯೇ ಸಮಸ್ಯೆಯಾಗಿತ್ತು. ಜಿಲ್ಲಾಧಿಕಾರಿಗಳು ಹುದ್ದೆಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದರೂ ಸರ್ಕಾರದಿಂದ ಒಪ್ಪಿಗೆ ಸಿಗುವುದು ಬಾಕಿ ಇತ್ತು.
ಹುದ್ದೆಗಳ ಮಂಜೂರಾತಿ ಆಗದ ಹಿನ್ನಲೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಭೂಮಿ, ಸರ್ವೇ, ಆಹಾರ, ಜನನ-ಮರಣ ಶಾಖೆಗಳು ಸ್ಥಳಾಂತರವಾಗಿರಲಿಲ್ಲ. ಇದರಿಂದಾಗಿ ಜನರು ಪರದಾಡುವಂತಾಗಿತ್ತು.
ಬೇರೆ ಬೇರೆ ತಾಲೂಕುಗಳಲ್ಲಿ ಎಲ್ಲಾ ಕಚೇರಿಗಳು ಪ್ರತ್ಯೇಕ ಕೊಠಡಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದವು. ರೈತರು ಭೂಮಿ ಕೇಂದ್ರ ಸ್ಥಾಪನೆ ಕಾರ್ಯವನ್ನು ಬೇಗ ಮಾಡಿಕೊಡುವಂತೆ ಮನವಿ ಸಲ್ಲಿಕೆ ಮಾಡಿದ್ದರು. ಆದರೆ ಅದು ಕೂಡಾ ಸಾಧ್ಯವಾಗಿರಲಿಲ್ಲ.
ಕುಶಾಲನಗರ ತಾಲೂಕು ಘೋಷಣೆಯಾಗಿ ವರ್ಷಗಳೂ ಕಳೆದರೂ ತಾಲೂಕು ಪಂಚಾಯಿತಿ ಪೂರ್ಣವಾಗಿ ಕೆಲಸ ಮಾಡಲು ಸರ್ಕಾರ ಅಗತ್ಯ ವ್ಯವಸ್ಥೆ ಮಾಡಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಕುಶಾಲನಗರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವಿ. ಪಿ. ಶಶಿಧರ್ ಮಾತನಾಡಿ, "2023ರ ಬಜೆಟ್ನಲ್ಲಿ ಜನಪ್ರತಿನಿಧಿಗಳು ಕುಶಾಲನಗರ ತಾಲೂಕು ಆಡಳಿತ ಭವನಕ್ಕೆ ಅನುದಾನ ತರಲಿ. ಎಚ್. ಡಿ. ಕುಮಾರಸ್ವಾಮಿ ಮಾಡಿರುವುದನ್ನು ತಾನು ಮಾಡಿದ್ದೇನೆ ಎನ್ನುವವರು ಅನುದಾನ ತರಲಿ"ಎಂದು ಸವಾಲು ಹಾಕಿದ್ದರು.
ನೂತವಾದ ಕುಶಾಲನಗರದ ತಾಲೂಕು ಆಡಳಿತ ಭವನಕ್ಕೆ ನಿವೇಶನ ಗುರುತು ಮಾಡಲಾಗಿದೆ. ನಕ್ಷೆ ಮತ್ತು ಅಂದಾಜು ಪಟ್ಟಿಯನ್ನು ಅಂತಿಮಗೊಳಿಸಿ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ. ಅನುದಾನ ಬಿಡುಗಡೆ ಆದ ಬಳಕ ಕಾಮಗಾರಿ ಆರಂಭವಾಗಲಿದೆ.
ಪುರಸಭೆಯಾಗಿ ಮೇಲ್ದರ್ಜೆಗೆ; ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಕುಶಾಲನಗರ ಜನತೆಯ ಬಹು ದಿನದ ಕನಸಾಗಿದ್ದ ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು.
ಪಟ್ಟಣ ಪಂಚಾಯಿತಿಯಾಗಿದ್ದ ಕುಶಾಲನಗರಕ್ಕೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸಿ ಪಟ್ಟಣ ಪಂಚಾಯಿತಿ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳಿಂದಲೂ ಎನ್ಒಸಿ ಪಡೆದು ಕಡತವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ಹಲವು ವರ್ಷಗಳ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿತ್ತು.












Click it and Unblock the Notifications