175 ಬಿರಿಯಾನಿ ಪಾರ್ಸೆಲ್ ತರಲು ಹೇಳಿ ಟೋಪಿ ಹಾಕಿದ ನಕಲಿ ಸೈನ್ಯಾಧಿಕಾರಿ
ಮಡಿಕೇರಿ, ಫೆಬ್ರವರಿ 28: ಕೊಡಗು ಪುಟ್ಟ ಜಿಲ್ಲೆಯಾದರೂ ದೇಶದ ರಕ್ಷಣಾ ಇಲಾಖೆಗೆ ನೀಡಿರುವ ಕೊಡುಗೆ ಚಿಕ್ಕದೇನಲ್ಲ. ಇಲ್ಲಿನ ಸಾವಿರಾರು ಯೋಧರು ದೇಶ ರಕ್ಷಣೆಯ ಕರ್ತವ್ಯ ನಿರ್ವಹಿಸಿದ್ದಾರೆ. ಅನೇಕರು ಭಾರತಾಂಬೆ ಸೇವೆ ಮಾಡಿ ವೀರ ಮರಣವನ್ನಪ್ಪಿದ್ದಾರೆ. ಸೈನಿಕರೆಂದರೆ ಕೊಡಗಿನ ಜನತೆಗೆ ವಿಶೇಷ ಗೌರವ. ಆದರೆ ಜನತೆಯ ಈ ಗೌರವದ ಭಾವನೆಯನ್ನೇ ದುರುಪಯೋಗಪಡಿಸಿಕೊಂಡ ದುಷ್ಕರ್ಮಿಯೊಬ್ಬ ಸೇನಾಧಿಕಾರಿಯ ಹೆಸರಿನಲ್ಲಿ ಹೋಟೆಲ್ ಮಾಲೀಕರೊಬ್ಬರಿಗೆ ವಂಚಿಸಿದ್ದಾನೆ.
ಮಡಿಕೇರಿ ನಗರದ ಗೌಳಿಬೀದಿಯಲ್ಲಿರುವ ಹೋಟೆಲ್ ಮಾಲೀಕರೊಬ್ಬರಿಗೆ ಕರೆ ಮಾಡಿದ ಖದೀಮನೊಬ್ಬ, ತಾನು ಸೇನಾಧಿಕಾರಿ ಆಗಿದ್ದು, ಜಿಲ್ಲೆಯಲ್ಲಿ ನಮ್ಮದೊಂದು ಕ್ಯಾಂಪ್ ಇದೆ, ಅಲ್ಲಿಗೆ 175 ಬಿರಿಯಾನಿ ಪಾರ್ಸೆಲ್ ಕಳಿಸಿಕೊಡಲು ಸಾಧ್ಯವೇ ಎಂದು ಕೇಳಿದ್ದಾನೆ. ವ್ಯಾಪಾರವಿಲ್ಲದೆ ಸೊರಗಿದ್ದ ಹೋಟೆಲ್ ಮಾಲೀಕ ಚೇತನ್ ಅವರಿಗೆ ಒಳ್ಳೆ ವ್ಯಾಪಾರ ಬಂದದ್ದಕ್ಕೆ ಖುಷಿಯಾಗಿದೆ. ಆದರೆ ನಂತರ ಆಗಿದ್ದೇ ಬೇರೆ.
ಬಾರ್ ಕೋಡ್ ನಿಂದ ಹಣ ಬರುತ್ತದೆ ಎಂದಿದ್ದ
ಬಿರಿಯಾನಿ ಆರ್ಡರ್ ಮಾಡಿದ ನಂತರ ಹೋಟೆಲ್ ಮಾಲೀಕರು ಸ್ವಲ್ಪ ಹಣ ಅಡ್ವಾನ್ಸ್ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಅದಕ್ಕೆ ಆತ, ನಿಮ್ಮ ಮೊಬೈಲ್ ಗೆ ಬಾರ್ ಕೋಡ್ ಕಳುಹಿಸುತ್ತೇನೆ, ಅದನ್ನು ನೀವು ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಗೆ ಹಣ ಬರುತ್ತದೆ ಎಂದಿದ್ದಾನೆ. ನಕಲಿ ಸೇನಾಧಿಕಾರಿ ಚೇತನ್ ಮೊಬೈಲ್ ಗೆ ವಾಟ್ಸಪ್ ಮೂಲಕ ಬಾರ್ ಕೋಡ್ ಕಳುಹಿಸಿದ್ದನು. ಆ ವಾಟ್ಸಪ್ ಮೆಸೇಜ್ ನೋಡಿ ಚೇತನ್ ಖುಷಿಯಾಗಿದ್ದಾರೆ.
ಪಿಯುಸಿ ಓದಿ ಮೈಸೂರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು ಈ ನಕಲಿ ವೈದ್ಯರು
ಹಣ ಬರುವ ಬದಲು ಹಣ ಹೋಯಿತು
ಆತನ ವಾಟ್ಸಪ್ ಡಿಪಿ ನೋಡಿದಾಗ, ಅದರಲ್ಲಿ ಸೇನಾಧಿಕಾರಿಯಂತಿದ್ದ ಫೋಟೋ ಇರುವುದನ್ನ ನೋಡಿ ಇವರು ಸೇನೆಯವರೇ ಎಂದು ನಂಬಿದ್ದಾರೆ. ಅಲ್ಲದೇ ಕಳುಹಿಸಿದ್ದ ಬಾರ್ ಕೋಡನ್ನು ಸ್ಕ್ಯಾನ್ ಮಾಡಿದ್ದಾರೆ. ಆದರೆ ಚೇತನ್ ಖಾತೆಗೆ ಹಣ ಬರುವ ಬದಲಿಗೆ ಅವರ ಖಾತೆಯಿಂದಲೇ 3 ಸಾವಿರ ರೂ. ಹಣ ಕಡಿತಗೊಂಡಿದೆ. ತಕ್ಷಣ ಬಿರಿಯಾನಿ ಆರ್ಡರ್ ಬಂದಿದ್ದ ನಂಬರ್ ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗೆ ನಕಲಿ ಸೇನಾಧಿಕಾರಿಯನ್ನು ನಂಬಿ ಹೋಟೆಲ್ ಮಾಲೀಕ ಹಣ ಕಳೆದುಕೊಂಡಿದ್ದಾರೆ.
ಕ್ಷಣದಲ್ಲಿ ಕಳೆದುಹೋಯ್ತು ಮೂರು ಸಾವಿರ ಹಣ
ಸದ್ಯ ಈ ಸೈಬರ್ ವಂಚನೆಯಿಂದ ಮೂರು ಸಾವಿರ ಹಣ ಕಳೆದುಕೊಂಡಿದ್ದಾರೆ. ಒಂದು ವೇಳೆ ಅಕೌಂಟಿನಲ್ಲಿ ಹೆಚ್ಚು ಹಣ ಇದ್ದಿದ್ದರೆ ಎಲ್ಲವೂ ಕಳ್ಳನ ಪಾಲಾಗುತಿತ್ತು ಎಂದು ಚೇತನ್ ಬೇಸರಗೊಂಡರು. ಈ ಹಿಂದೆ ಕೂಡ ಓಎಲ್ ಎಕ್ಸ್ ನಲ್ಲಿ ಕಾರು ಮಾರಾಟಕ್ಕಿಟ್ಟಿದ್ದ ನಕಲಿ ಸೈನ್ಯಾಧಿಕಾರಿ ಏರ್ ಪೋರ್ಟಿನಿಂದ ಕಾರನ್ನು ಪಡೆದುಕೊಳ್ಳುವಂತೆ ಸೂಚಿಸಿ 75 ಸಾವಿರ ರೂಪಾಯಿ ಹಣವನ್ನು ಅಕೌಂಟಿಗೆ ಹಾಕಲಿಕ್ಕೆ ಹೇಳಿದ್ದ. ಆದರೆ ಜಾಗೃತ ನಾಗರಿಕರೊಬ್ಬರು ಹಣ ಹಾಕದೇ ಪೊಲೀಸರ ಗಮನಕ್ಕೆ ತಂದಿದ್ದರು.
ವಾಹನಗಳಿಗೆ ವಿಮೆ ಮಾಡಿಸುತ್ತೇನೆಂದ ಈತ ಮಾಡಿದ್ದೇ ಬೇರೆ ಕೆಲಸ
ಹೆಚ್ಚಾದ ಆನ್ ಲೈನ್ ವಂಚನೆ
ಈಗ ದೇಶದಲ್ಲಿ ನಿತ್ಯವೂ ಆನ್ ಲೈನ್ ವಂಚನೆಗಳು ಹೆಚ್ಚಾಗುತ್ತಿದ್ದು, ಕಳ್ಳರು ಹೊಸ ಹೊಸ ರೀತಿಗಳನ್ನು ಹುಡುಕುತ್ತಿದ್ದಾರೆ. ಜನತೆ ಸದಾ ಜಾಗರೂಕರಾಗಿ ಇದ್ದರೆ ಮಾತ್ರ ವಂಚನೆಗಳಿಂದ ರಕ್ಷಣೆ ಸಾಧ್ಯ. ಇಲ್ಲದಿದ್ದರೆ ಹಣ ಕಳೆಕೊಳ್ಳುವುದರ ಜತೆಗೆ ವಂಚಕರ ಪತ್ತೆಗೆ ಪೊಲೀಸ್ ಠಾಣೆಗೆ ಅಲೆಯಬೇಕಾಗುತ್ತದೆ.