ಸುಂಟಿಕೊಪ್ಪದಲ್ಲಿ ಟಾಟಾ ಕಾಫಿ ತೋಟದ ಸರಕಾರಿ ಜಾಗ ವಶ
ಮಡಿಕೇರಿ, ಫೆಬ್ರವರಿ 7: ಸುಂಟಿಕೊಪ್ಪದ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಈರಳೆವಳಮುಡಿ ಗ್ರಾಮದಲ್ಲಿ ಟಾಟಾ ಕಂಪೆನಿಗೆ ಸೇರಿದ್ದ ತೋಟದೊಳಗೆ ಒತ್ತುವರಿಯಾಗಿದ್ದ ಸರಕಾರಿ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಟಾಟಾ ಕಂಪೆನಿಗೆ ಸೇರಿದ ಕಾಫಿ ತೋಟದಲ್ಲಿ ಪೈಸಾರಿ ಜಾಗವು ಒತ್ತುವರಿಯಾಗಿತ್ತು.
ತಹಸೀಲ್ದಾರ್ ಆದೇಶದಂತೆ ಸರ್ವೇ ನಡೆಸಿದ ಕಂದಾಯ ಇಲಾಖೆ ಅಧಿಕಾರಿಗಳು ಜಾಗವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ, ಒತ್ತುವರಿ ಮಾಡಿಕೊಂಡ ಪೈಸಾರಿ ಜಾಗವನ್ನು ಸರಕಾರದ ಆದೇಶದಂತೆ ತೆರವುಗೊಳಿಸುವ ಪ್ರಕ್ರಿಯೆಗೆ ತಹಸೀಲ್ದಾರ್ ಚಾಲನೆ ನೀಡಿದ್ದರು.[ಕೊಡಗಿನಲ್ಲಿ ಕಾಫಿ ಹೂವು ಅರಳಿದೆ, ಸೆಲ್ಫಿ ತಗೊಳ್ಳೋಣ ಬನ್ನಿ]
ಜತೆಗೆ ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು ಹಾಗೂ ಸರ್ವೇ ಸಿಬ್ಬಂದಿಗೆ ಸರಕಾರಿ ಜಾಗ ಪತ್ತೆ ಹಚ್ಚಲು ಸೂಚನೆ ನೀಡಿದ್ದರು. ಅದರಂತೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈರಳೆವಳಮುಡಿ ಗ್ರಾಮದ ಟಾಟಾ ಕಾಫಿ ತೋಟದಲ್ಲಿ ಸರ್ವೇ ನಂ.28/1ರಲ್ಲಿ 4.68 ಎಕರೆ ಜಾಗವನ್ನು ಗುರುತಿಸಿದ್ದರು.
ಇದಕ್ಕೆ ಕಂದಾಯ ಇಲಾಖೆ ವತಿಯಿಂದ ಸರಕಾರಿ ಆಸ್ತಿಯ ನಾಮಫಲಕವನ್ನು ಅಳವಡಿಸುವ ಮೂಲಕ ವಶಕ್ಕೆ ಪಡೆದುಕೊಳ್ಳಲಾಯಿತು. ಎಚ್.ಎಸ್.ಮಂಜುನಾಥ್, ಜವಾನ ಪೂವಯ್ಯ, ಕಂದಾಯ ಪರಿವೀಕ್ಷಕರಾದ ನಾಗೇಶ್ ರಾವ್, ಗ್ರಾಮಲೆಕ್ಕಿಗ ಉಮೇಶ್, ಸಹಾಯಕ ಗಿರೀಶ್, ಸುಶೀಲ ಗ್ರಾಮಸ್ಥರು ಈ ವೇಳೆ ಇದ್ದರು.